ವಿದೇಶಕ್ಕೆ ಹಾರಲು ಕಾರ್ತಿ ಚಿದಂಬರಂಗೆ ಅನುಮತಿ ಕೊಟ್ಟ ಕೋರ್ಟ್
ನವದೆಹಲಿ, ಮೇ 07: ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕ ಸುದ್ದಿ ಓದಿರಬಹುದು. ಈಗ ಕಾರ್ತಿ ಅವರಿಗೆ ಮಂಗಳವಾರದಂದು ಶುಭ ಸುದ್ದಿ ಸಿಕ್ಕಿದೆ.
ವಿದೇಶಕ್ಕೆ ಹಾರಲು ಕೋರ್ಟ್ ಅನುಮತಿ ಕೋರಿದ್ದ ಕಾರ್ತಿಗೆ ಸುಪ್ರೀಂಕೋರ್ಟ್ ನ್ಯಾಯಪೀಠದಿಂದ ಅನುಮತಿ ಸಿಕ್ಕಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಹಾಗೂ ಜಸ್ಟೀಸ್ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನ ಅವರಿದ್ದ ನ್ಯಾಯಪೀಠವು, ವಿದೇಶಕ್ಕೆ ತೆರಳಲು ನುಮತಿ ನೀಡಿದೆ.
ಮೇ ತಿಂಗಳಿನಲ್ಲಿ ಯುಎಸ್, ಜರ್ಮನಿ ಹಾಗೂ ಸ್ಪೇನ್ ಪ್ರವಾಸ ಕೈಗೊಳ್ಳಲು ಕಾರ್ತಿ ಅವರು ಅನುಮತಿ ಕೋರಿದ್ದರು. ಜನವರಿ ತಿಂಗಳಿನಲ್ಲೂ ಕಾರ್ತಿ ಅವರಿಗೆ ವಿದೇಶಕ್ಕೆ ತೆರಳಲು ಅನುಮತಿ ಸಿಕ್ಕಿತ್ತು. 10 ಕೋಟಿ ರು ಗಳನ್ನು ಸುಪ್ರೀಂಕೋರ್ಟಿನ ಮುಖ್ಯ ಕಾರ್ಯದರ್ಶಿ ಅವರ ಬಳಿ ಭದ್ರತಾ ಠೇವಣಿ ಇರಿಸಿದ್ದ ಕಾರ್ತಿ, ವಿದೇಶ ಪ್ರವಾಸ ಕೈಗೊಂಡಿದ್ದರು.

ಈಗ ನಿಗದಿತ ಪ್ರವಾಸ ಕೈಗೊಳ್ಳಲು ಅನುಮತಿ ನೀಡಲಾಗಿದ್ದು, ಭಾರತಕ್ಕೆ ಹಿಂತಿರುಗಿದ ಬಳಿಕ ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಮನಿಲಾಂಡ್ರಿಂಗ್ ಪ್ರಕರಣದ ಆರೋಪಿಯಾಗಿರುವ ಕಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನಿಂದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
2007ರಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (Foreign Investment Promotion Board)ಯಿಂದ 4.62 ಕೋಟಿ ರುಪಾಯಿ ಹೂಡಿಕೆ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ ಮಾರಿಷಸ್ ನ ಎರಡು ಕಂಪನಿಗಳಿಂದ ಪೀಟರ್ ಮತ್ತು ಇಂದ್ರಾಣಿ ಒಡೆತನದ ಕಂಪನಿ ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ ರುಪಾಯಿಗಳು. ಇದರ ವಿರುದ್ಧ ಕಂದಾಯ ಇಲಾಖೆ ವಿಚಾರಣೆಗೆ ಆದೇಶಿಸಿತ್ತು. ಈ ವಿಚಾರಣೆಯನ್ನು ತಪ್ಪಿಸಲು ಕಾರ್ತಿ ಅವರು ತಮ್ಮ ಕಂಪನಿಯ ಮೂಲಕ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ 10 ಲಕ್ಷ ರುಪಾಯಿ ಕಮಿಷನ್ ಪಡೆದಿದ್ದರು ಎಂಬ ಆರೋಪವಿದೆ.(PTI)












Click it and Unblock the Notifications