Breaking; ಸುಪ್ರೀಂನಲ್ಲಿ ಮುಂದಿನ ವಾರ ಕರ್ನಾಟಕ ಹಿಜಾಬ್ ಪ್ರಕರಣ ವಿಚಾರಣೆ
ನವದೆಹಲಿ, ಜುಲೈ 13: ಹಿಜಾಬ್ ನಿಷೇಧ ತೆರವುಗೊಳಿಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾಡಲಾಗಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿ ಸರಕಾರ ಆದೇಶ ನೀಡಿತ್ತು. ಆ ನಿಷೇಧವನ್ನು ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ನಲ್ಲಿ ಮಾರ್ಚ್ ತಿಂಗಳಲ್ಲೇ ಮೇಲ್ಮನವಿ ಸಲ್ಲಿಸಿದ್ದರು. ಅದರೆ, ಅದರ ವಿಚಾರಣೆಗೆ ಪಟ್ಟಿ ಮಾಡಿಯೇ ಇರಲಿಲ್ಲ. ಹೀಗಾಗಿ, ಮತ್ತೊಮ್ಮೆ ಮನವಿ ಮಾಡಿರುವ ಹಿರಿಯ ವಕೀಲರು, ಈ ಅರ್ಜಿಯ ವಿಚಾರಣೆ ಬಹಳ ತುರ್ತಾಗಿ ಆಗಬೇಕೆಂದು ಕೋರಿದರು.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರು ಈ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದು, ಅದನ್ನು ಮುಂದಿನ ವಾರಕ್ಕೆ ನಿಗದಿ ಮಾಡಿದ್ದಾರೆ.

"ಹಿಜಾಬ್ ನಿಷೇಧದಿಂದಾಗಿ ವಿದ್ಯಾರ್ಥಿಗಳ ಓದಿಗೆ ತೊಂದರೆ ಆಗುತ್ತಿದೆ. ಆದಷ್ಟೂ ಬೇಗ ಇದರ ವಿಚಾರಣೆ ನಡೆದರೆ ಮಕ್ಕಳಿಗೆ ಅನುಕೂಲವಾಗುತ್ತದೆ" ಎಂದು ಪ್ರಶಾಂತ್ ಭೂಷಣ್ ಮನವಿ ಮಾಡಿದ್ದಾರೆ.
ಮುಂದಿನ ವಾರ ಎಂದ ನ್ಯಾಯಪೀಠ
"ಸುಪ್ರೀಂ ಕೋರ್ಟ್ನ ಎರಡು ಪೀಠಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ನಾವು ಮರು-ಹಂಚಿಕೆ ಮಾಡಬೇಕಾಗಿದೆ. ಮುಂದಿನ ವಾರ ಯಾವಾಗಲಾದರೂ ಇದರ ವಿಚಾರಣೆ ಮಾಡೋಣ. ಮುಂದಿನ ವಾರ ಯಾವುದಾದರೂ ಸೂಕ್ತ ಪೀಠಕ್ಕೆ ಈ ಪ್ರಕರಣವನ್ನು ವರ್ಗಾಯಿಸುತ್ತೇವೆ" ಎಂದು ಸಿಜೆಐ ರಮಣ ತಿಳಿಸಿದ್ದಾರೆ.
ಯಾವ ದಿನಾಂಕದಂದು ವಿಚಾರಣೆ ಆರಂಭವಾಗುತ್ತದೆ ಎಂಬುದು ನಿಗದಿಯಾಗಿಲ್ಲ.
ಏನಿದು ಹಿಜಾಬ್ ಪ್ರಕರಣ?
ಕೆಲ ತಿಂಗಳ ಹಿಂದೆ ಕರ್ನಾಟಕದ ಕೆಲ ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದವು. ಈ ಬಗ್ಗೆ ಬೃಹತ್ ಪ್ರತಿಭಟನೆಗಳು ನಡೆದವು. ಆಯಾ ಶಿಕ್ಷಣ ಸಂಸ್ಥೆ ರೂಪಿಸಿರುವ ಕಾನೂನು ಪ್ರಕಾರ ಮಕ್ಕಳು ಸಮವಸ್ತ್ರ ಧರಿಸಬಹುದು ಎಂದು ರಾಜ್ಯ ಸರಕಾರ ನಿರ್ದೇಶನ ಹೊರಡಿಸಿತು. ಕರ್ನಾಟಕ ಹೈಕೋರ್ಟ್ ಕೂಡ ಫೆಬ್ರವರಿ 2ರಂದು ನೀಡಿದ ತೀರ್ಪಿನಲ್ಲಿ ಸರಕಾರದ ಆದೇಶಕ್ಕೆ ಸಹಮತ ವ್ಯಕ್ತಪಡಿಸಿತ್ತು.
ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆ ಅಲ್ಲವಾದ್ದರಿಂದ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಾಸ್ತಿ, ನ್ಯಾ| ಕೃಷ್ಣ ದೀಕ್ಷಿತ್ ಮತ್ತು ನ್ಯಾ| ಜೆಎಂ ಖಾಜಿ ಅವರಿದ್ದ ನ್ಯಾಯಪೀಠ ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications