ಸಂಕಷ್ಟದಲ್ಲಿರುವ ಶಶಿಕಲಾ ನಟರಾಜನ್ ಮಾಡಿದ 5 ನಿರ್ಣಾಯಕ ತಪ್ಪುಗಳು
ಮುಖ್ಯಮಂತ್ರಿ ಹುದ್ದೆಗೆ ಏರಲು ಇನ್ನೇನು ಸಜ್ಜಾಗಿ ಈಗ ಸಂಕಷ್ಟದಲ್ಲಿರುವ ಶಶಿಕಲಾ ನಟರಾಜನ್ ಮಾಡಿದ 5 ನಿರ್ಣಾಯಕ ತಪ್ಪುಗಳು.
ಭಾರತ ಮತ್ತು ಪಾಕಿಸ್ತಾನ ಟಿ20 ಪಂದ್ಯವನ್ನೂ ನಾಚಿಸುವಂತೆ ಸಾಗುತ್ತಿರುವ ತಮಿಳುನಾಡು ರಾಜಕೀಯ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಶಶಿಕಲಾ Vs ಪನ್ನೀರ್ ಸೆಲ್ವಂ ನಡುವಣ ರಾಜಕೀಯ ಮೇಲಾಟದಲ್ಲಿ ರಾಜ್ಯದ ಆಡಳಿತ ಯಂತ್ರ ತುಕ್ಕು ಹಿಡಿದು ಕೂತಿದೆ.
ಜನಪ್ರಿಯ ಮುಖ್ಯಮಂತ್ರಿ ಜಯಲಲಿತಾ ಸಮಾಧಿಯ ಮುಂದೆ ನಲವತ್ತು ನಿಮಿಷ ಧ್ಯಾನದಲ್ಲಿ ಕುಳಿತು, ನಂತರ ತನ್ನ ಅಪಾರ ರಾಜಕೀಯ ಅನುಭವವನ್ನು ಬಳಸಿಕೊಂಡು ಹೆಜ್ಜೆ ಇಡುತ್ತಿರುವ ಪನ್ನೀರ್ ಸೆಲ್ವಂ, ಶಶಿಕಲಾ ನಟರಾಜನ್ ಅವರಿಗೆ ಮುಳ್ಳಾಗಿ ಪರಿಣಮಿಸಿದ್ದಾರೆ. (ಶಶಿಕಲಾ ಹಾಗೂ ಕುಟುಂಬದ ಮೇಲಿರುವ ಹಗರಣಗಳು)
ಮೇಲ್ನೋಟಕ್ಕೆ ಶಶಿಕಲಾ ಬಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಿದ್ದರೂ, ಮೂರಂಕೆಯಲ್ಲಿದ್ದ ಶಾಸಕರ ಬೆಂಬಲ ಎರಡಂಕೆಗೆ ಇಳಿದಿದೆ. ಈ ಹಿನ್ನಲೆಯಲ್ಲಿ ಚೆನ್ನೈ ಹೊರವಲಯದ ಮಹಾಬಲಿಪುರಂ ಬಳಿಯ ಗೋಲ್ಡನ್ ಬೇ ಬೀಚ್ ರೆಸಾರ್ಟಿನಲ್ಲಿ ಶಾಸಕರನ್ನು ಎರಡೂ ಪಾಳಿಯಲ್ಲಿ ಕಾಯುವ ಕೆಲಸಕ್ಕೆ ಖುದ್ದು ಶಶಿಕಲಾ ನಿಂತಿದ್ದಾರೆ.
ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಫೆ 14) ಪ್ರಕಟಿಸುವುದು ಬಹುತೇಕ ಖಚಿತವಾಗಿದ್ದರೂ, ರಾಜಭವನದಿಂದ ತನ್ನ ಪರವಾಗಿ ಒಳ್ಳೆ ಸುದ್ದಿ ಬರುತ್ತದೆ ಎನ್ನುವ ಆಶಾಭಾವನೆಯಲ್ಲಿದ್ದಾರೆ ಶಶಿಕಲಾ.
ಪಕ್ಷದ ಒಂದೊಂದು ಶಾಸಕರ ಕುಟುಂಬ ಸದಸ್ಯರಿಗೆ ಪನ್ನೀರ್ ಸೆಲ್ವಂ ಕಡೆಯವರು ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದಾರೆಂದು ಶಶಿಕಲಾ ಗಂಭೀರ ಆರೋಪ ಮಾಡಿದ್ದಾರೆ. ಎಲ್ಲಾ ' ಆಂಡವ' ನಿಗೆ ಗೊತ್ತು ಎಂದು ಶಶಿಕಲಾ ಆರೋಪಕ್ಕೆ ಪನ್ನೀರ್ ಸೆಲ್ವಂ ಪ್ರತಿಕ್ರಿಯೆ ನೀಡಿದ್ದಾರೆ. [ಶಶಿಕಲಾ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?]
ಇನ್ನೇನು ಪ್ರಮಾಣವಚನ ಸ್ವೀಕರಿಸಲು ತಯಾರಾಗಿದ್ದ ಶಶಿಕಲಾ ನಟರಾಜನ್, ಈ ವಿಚಾರದಲ್ಲಿ ಮಾಡಿರುವ ಐದು ನಿರ್ಣಾಯಕ ತಪ್ಪುಗಳು, ಮುಂದೆ ಓದಿ..
ಶಶಿಕಲಾ ಮಾಡಿದ ಮೊದಲನೇ ತಪ್ಪು
ಜಯಾ ದೀರ್ಘಾವಧಿ ಅನಾರೋಗ್ಯ, ಸಾವಿನ ವಿಚಾರದಲ್ಲಿನ ಗೌಪ್ಯತೆಯನ್ನು ಪಕ್ಷದ ಆಯಕಟ್ಟಿನ ಮುಖಂಡರಿಗೆ ವಿವರಿಸಲು ವಿಫಲವಾಗಿದ್ದು, ಜಯಾ ಅಂತಿಮಾವಧಿಯಲ್ಲಿ ಯಾರಿಗೂ ಆಸ್ಪತ್ರೆಯಲ್ಲಿ ಜಯಾ ನೋಡಲು ಅನುಮತಿ ನೀಡದೇ ಇದ್ದದ್ದು ಶಶಿಕಲಾ ಮಾಡಿದ ಪ್ರಮುಖ ತಪ್ಪು. ಪನ್ನೀರ್ ಸೆಲ್ವಂ ಇದೇ ವಿಚಾರವನ್ನು ಪ್ರಸ್ತಾವಿಸಿದ್ದರು. [ಜಯಾ ಉಯಿಲಿನಲ್ಲೇನಿದೆ, ಪೋಯೆಸ್ ಗಾರ್ಡನ್ ಯಾರಿಗೆ?]
ಅಮ್ಮಾ ಬರಿದ ವಿಲ್
ದಿವಂಗತ ಜಯಲಲಿತಾ ಬರೆದಿಟ್ಟಿದ್ದಾರೆ ಎನ್ನಲಾಗುತ್ತಿರುವ ವಿಲ್ ಅನ್ನು ಬಹಿರಂಗ ಪಡಿಸದೇ ಏಕಾಏಕಿಯಾಗಿ ಮುಖ್ಯಮಂತ್ರಿ ಹುದ್ದೆಗೆ ಏರಲು ಮುಂದಾಗಿದ್ದು ಶಶಿಕಲಾ ಮಾಡಿದ ಇನ್ನೊಂದು ತಪ್ಪು.
ಮನ್ನಾರ್ ಗುಡಿ ಗ್ಯಾಂಗ್ ಅನ್ನು ಒಳಗೆ ಬಿಟ್ಟಿದ್ದು
ಜಯಲಲಿತಾ ಅಂತಿಮ ದರ್ಶನದ ವೇಳೆ ಮನ್ನಾರ್ ಗುಡಿ ಗ್ಯಾಂಗ್ ಸದಸ್ಯರು ಜಯಾ ಕಳೇಬರದ ಮುಂದೆ ನಿಂತು ಜನರನ್ನು ನಿಯಂತ್ರಿಸುತ್ತಿದ್ದದ್ದು ತಮಿಳುನಾಡು ಜನರ ಆಕ್ರೋಶಕ್ಕೆ ಒಳಗಾಗಿತ್ತು. ಮನ್ನಾರ್ ಗುಡಿ ಗ್ಯಾಂಗ್ ವಿಚಾರದಲ್ಲಿ ಜಯಾ, ಶಶಿಕಲಾ ಅವರನ್ನು ಪಕ್ಷದಿಂದ ಹೊರಗಟ್ಟಿದ್ದರು.
ತಾಳ್ಮೆ ಇಲ್ಲದ ಶಶಿಕಲಾ
ರಾಜ್ಯಪಾಲ ವಿದ್ಯಾಸಾಗರ್ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಯದೇ, ಕಾನೂನು ಮತ್ತು ಸುವ್ಯವಸ್ಥೆಯ ನೆಪ ಹೇಳಿ ಒತ್ತಡ ಹೇರಿದ್ದು ನಂತರ ಪನ್ನೀರ್ ಸೆಲ್ವಂ ಮೇಲೆ ಆಪಾದನೆ ಹೊರಿಸಿದ್ದು ಶಶಿಕಲಾ ಮಾಡಿದ ನಾಲ್ಕನೇ ತಪ್ಪು.
ಪನ್ನೀರ್ ಸೆಲ್ವಂ ಕಡೆಗಣಿಸಿದ್ದು
ಪನ್ನೀರ್ ಸೆಲ್ವಂ ಏನು ಮಾಡಲು ಸಾಧ್ಯ ಎಂದು ಅವರಿಗಿರುವ ಜನಪ್ರಿಯತೆಯನ್ನು ಕಡೆಗಣಿಸಿದ್ದು, ಜೊತೆಗೆ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದು ಶಶಿಕಲಾ ಮಾಡಿದ ದೊಡ್ಡ ತಪ್ಪು.