ಕೋರ್ಟ್ ಹಾಲ್ನಲ್ಲೇ ಕಣ್ಣೀರು ಸುರಿಸಿದ ಸಲ್ಲು ಸೋದರಿಯರು
ಬೆಂಗಳೂರು, ಏಪ್ರಿಲ್ 05: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 2016ರಲ್ಲಿ ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಐದು ದಿನಗಳನ್ನು ಕಳೆದಿದ್ದ ಸಲ್ಮಾನ್ ಖಾನ್, ಈಗ ಅದೇ ಪ್ರಕರಣದಲ್ಲಿ ಮತ್ತೆ ಕಾರಾಗೃಹ ಪ್ರವೇಶಿಸುವಂತಾಗಿದೆ.
ಮಧ್ಯಾಹ್ನ 2.30ರ ಸುಮಾರಿಗೆ ನ್ಯಾಯಾಧೀಶ ದೇವ್ ಕುಮಾರ್ ಖತ್ರಿ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸುತ್ತಿದ್ದಂತೆಯೇ ಸಲ್ಮಾನ್ ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಕಣ್ಣೀರಿಟ್ಟರು.
ತೀರ್ಪಿನಿಂದ ಆಘಾತಕ್ಕೊಳಗಾದ್ದನ್ನು ತೋರ್ಪಡಿಸಿಕೊಳ್ಳದ ಸಲ್ಮಾನ್, ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕೋರ್ಟ್ ಹೊರಗೆ ನೆರೆದಿದ್ದ ಸಲ್ಲು ಅಭಿಮಾನಿಗಳು ಬೇಸರ, ಹತಾಶೆ ವ್ಯಕ್ತಪಡಿಸಿದರು.
ತಮ್ಮ "ಅದೃಷ್ಟ"ದ ಕಪ್ಪು ಬಣ್ಣದ ಶರ್ಟ್ ಧರಿಸಿ ಬಂದಿದ್ದ ಸಲ್ಲು, ಕೋರ್ಟ್ ತೀರ್ಪು ತಮ್ಮ ಪರವಾಗಲಿದೆ ಎಂಬ ಭರವಸೆ ಹೊಂದಿದ್ದರು. ಆದರೆ, ಅವರ ಎಣಿಕೆ ತಲೆಕೆಳಗಾಯಿತು.

ಸಲ್ಮಾನ್ ಅವರ ಸಿನಿಮಾಗಳ ಮೇಲೆ ಭಾರಿ ಪ್ರಮಾಣದ ಹೂಡಿಕೆ ಮಾಡಿರುವ ಬಾಲಿವುಡ್ ನಿರ್ಮಾಪಕರು ತೀರ್ಪಿನ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.
ಶಿಕ್ಷೆಯ ಪ್ರಮಾಣ ಪ್ರಕಟವಾಗುತ್ತಿದ್ದಂತೆಯೇ ಬಿಶ್ನೋಯಿ ಸಮುದಾಯದ ಬೆಂಬಲಿಗರು ಕೋರ್ಟ್ ಆವರಣದಲ್ಲಿ ಸಂಭ್ರಮ ಆಚರಿಸಿದರು.
ಅಂತಿಮ ತೀರ್ಪು ಪ್ರಕಟವಾದ ಬಳಿಕ ಪೊಲೀಸರು ಸಲ್ಮಾನ್ ಖಾನ್ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದರು. ಬಳಿಕ ಕೇಂದ್ರ ಕಾರಾಗೃಹದತ್ತ ಕರೆದೊಯ್ದರು. ಈ ವೇಳೆ ಬಿಶ್ನೋಯಿ ಸಮುದಾಯದ ಬೆಂಬಲಿಗರು ಸಲ್ಮಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜೈಲಿನ ಬ್ಯಾರಕ್ ನಂ. 1ರಲ್ಲಿ ಸಲ್ಮಾನ್ ಸೆರೆವಾಸ ಅನುಭವಿಸಲಿದ್ದಾರೆ.
ಘಟನೆ ಹೇಗಾಗಿತ್ತು?:
1998ರ ಸೆಪ್ಟೆಂಬರ್ನಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದ ಸಲ್ಮಾನ್, ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ನೀಲಂ ಕೊಠಾರಿ ಮತ್ತು ಟಬು ರಾಜಸ್ಥಾನದ ಕಂಕಣಿ ಗ್ರಾಮದಲ್ಲಿ ಕೃಷ್ಣಮೃಗದ ಹಿಂಡಿನ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ಎರಡು ಕೃಷ್ಣಮೃಗಗಳು ಬಲಿಯಾಗಿದ್ದವು ಎಂದು ಆರೋಪಿಸಲಾಗಿದೆ.
ನಟರೆಲ್ಲರೂ ಜಿಪ್ಸಿಯಲ್ಲಿ ಬಂದಿದ್ದರು. ಚಾಲಕ ಸೀಟ್ನಲ್ಲಿ ಕುಳಿತಿದ್ದ ಸಲ್ಮಾನ್, ಬಂದೂಕಿನಿಂದ ಕೃಷ್ಣಮೃಗಗಳ ಮೇಲೆ ಗುಂಡು ಹಾರಿಸಿದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರ ಓಡಿಬಂದಿದ್ದರು.
ಬೈಕ್ ನಲ್ಲಿ ಜಿಪ್ಸಿಯನ್ನು ಹಿಂಬಾಲಿಸಿದರೂ ಸಲ್ಮಾನ್ ಮತ್ತು ಅವರ ಸಹೋದ್ಯೋಗಿಗಳು ತಪ್ಪಿಸಿಕೊಂಡರು. ಬಳಿಕ ಪರಿಶೀಲನೆ ನಡೆಸಿದಾಗ ಕೃಷ್ಣಮೃಗದ ಮೃತದೇಹ ದೊರಕಿತ್ತು ಎಂದು ಸ್ಥಳೀಯರು ಆರೋಪಿಸಿದ್ದರು. ಬಳಿಕ ಸಲ್ಮಾನ್ ಮತ್ತು ಅವರ ಸಹನಟರ ವಿರುದ್ಧ ದೂರು ನೀಡಿದ್ದರು.
ಅಕ್ಟೋಬರ್ ತಿಂಗಳಿನಲ್ಲಿ ಸಲ್ಮಾನ್ ಅಕ್ರಮ ಬೇಟೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
2006ರಲ್ಲಿ ವಿಚಾರಣಾ ನ್ಯಾಯಾಲಯವೊಂದು ಸಲ್ಮಾನ್ ಖಾನ್ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 2007ರಲ್ಲಿ ರಾಜಸ್ಥಾನ ಹೈಕೋರ್ಟ್ ಸಲ್ಮಾನ್ ವಿರುದ್ಧದ ಆರೋಪಗಳನ್ನು ವಜಾಗೊಳಿಸಿತ್ತು.
ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ತೀರ್ಪು ನೀಡಿದ್ದ ರಾಜಸ್ಥಾನ ಹೈಕೋರ್ಟ್, ಸಲ್ಮಾನ್ ಅವರು ಪರವಾನಗಿ ಹೊಂದಿರುವ ಬಂದೂಕಿನಿಂದ ಯಾವುದೇ ಪ್ರಾಣಿ ಸತ್ತಿರುವುದಕ್ಕೆ ಪುರಾವೆಯಿಲ್ಲ ಎಂದು ಪ್ರಕರಣವನ್ನು ವಜಾಗೊಳಿಸಿತ್ತು.
ಈ ಎರಡೂ ಪ್ರಕರಣಗಳ ತೀರ್ಪನ್ನು ರಾಜಸ್ಥಾನ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದೆ.
ತಾವು ಶಸ್ತ್ರಾಸ್ತ್ರ ಹೊಂದಿರಲಿಲ್ಲ. ತಮ್ಮ ಬಳಿ ಏರ್ ಗನ್ ಇದ್ದು, ಅದರಿಂದ ಕೊಲ್ಲಲು ಸಾಧ್ಯವಿಲ್ಲ ಎಂದು ಸಲ್ಮಾನ್ ಎರಡು ದಶಕಗಳಿಂದ ವಾದಿಸಿಕೊಂಡು ಬಂದಿದ್ದರು.












Click it and Unblock the Notifications