ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ: ನರೇಂದ್ರ ಮೋದಿ
ಲಖನೌ, ಜನವರಿ, 22: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. 'ಸಾವಿನಲ್ಲಿ ರಾಜಕೀಯ ಮಾಡಬೇಡಿ, ಒಬ್ಬ ತಾಯಿ ತನ್ನ ಮಗನನ್ನು ಕಳೆದುಕೊಂಡ ನೋವಿಗೆ ಎಲ್ಲರೂ ಸ್ಪಂದಿಸಿ' ಎಂದು ಹೇಳಿದ್ದಾರೆ.
ಅವರ ಕುಟುಂಬ ಸದಸ್ಯರು ನೋವು ಅನುಭವಿಸುತ್ತಿದ್ದಾರೆ. ಭಾರತವು ಒಬ್ಬ ಯುವ ಪುತ್ರನನ್ನು ಕಳೆದುಕೊಂಡಿದೆ ಎಂಬುದು ವಾಸ್ತವಾಂಶ ಎಂದು ಲಖನೌನಲ್ಲಿ ನಡೆದ ಅಂಬೇಡ್ಕರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಶುಕ್ರವಾರ ಪ್ರಧಾನಿ ಮಾತನಾಡುತ್ತಾ ಹೇಳಿದರು.
ಆದರೆ ಕೆಲ ವಿದ್ಯಾರ್ಥಿಗಳು ಘೊಷಣೆ ಕೂಗಿ ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾದರು. ನಂತರ ಘೊಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳನ್ನು ಸಭಾಂಗಣದಿಂದ ಹೊರಕ್ಕೆ ಕಳುಹಿಸಲಾಯಿತು.[ಹೌದು, ನಾನು ಹಿಂದೂ ಎಂದಿದ್ದಕ್ಕೆ ಆತ ತೆತ್ತ ಬೆಲೆ ಏನು?]
ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದ 26ರ ಹರೆಯದ ಸಂಶೋಧನಾ ವಿದ್ಯಾರ್ಥಿ ವೇಮುಲಾ ಆತ್ಮಹತ್ಯೆ ದಿನೇ ದಿನೇ ಬೇರೆ ಬೇರೆ ಚಿತ್ರಣ ಪಡೆದುಕೊಳ್ಳುತ್ತದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮೇಲೆಯೂ ದೂರುಗಳು ಕೇಳಿಬಂದಿದ್ದವು. ಇದೀಗ ಸ್ವತಃ ಪ್ರಧಾನಿಯೇ ಸಾವಿಗೆ ಬೇರೆ ಬಣ್ಣ ಹಚ್ಚಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.[ಬೂದಿಮುಚ್ಚಿದ್ದ 'ಅಸಹಿಷ್ಣುತೆ' ಕೆಂಡ ಕೆದಕಿದ ಕರಣ್ ಜೋಹರ್!]
ಬಿಜೆಪಿ ದಲಿತರ ವಿರುದ್ಧ ಕೆಲಸ ಮಾಡುತ್ತಿದೆ ಎಂಬ ಆರೋಪಗಳಿಗೆ ಆಧಾರವಿಲ್ಲ. ನಮ್ಮ ಸರ್ಕಾರಕ್ಕೆ ಅಂಥ ಯಾವ ಚಿಂತನೆಗಳು ಇಲ್ಲ. ಸಾವಿನ ನೋವು ಎಲ್ಲರಲ್ಲೂ ಇದೆ. ಆದರೆ ಅದನ್ನು ಬೇರೆಯದಕ್ಕೆ ಬಳಸಿಕೊಳ್ಳುವುದು ತರವಲ್ಲ ಎಂದು ಹೇಳಿದ್ದಾರೆ.