ಮೋದಿ ವಿರುದ್ಧ ಸಚಿನ್, ಪ್ರಿಯಾಂಕಾ..ಇನ್ನಿತರರು
ಮುಂಬೈ, ಮಾ.20: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾರಣಸಿಯಲ್ಲಿ ಸುಲಭ ಗೆಲುವು ಸಾಧಿಸಿದಂತೆ ಮಾಡಲು ಕಾಂಗ್ರೆಸ್ ಪ್ರತಿತಂತ್ರ ರೂಪಿಸುತ್ತಿದೆ. ತಾಕತ್ತಿದ್ದರೆ ನನ್ನ ವಿರುದ್ಧ ಮೋದಿ ನಿಲ್ಲಲಿ ಎಂದು ಹಲವು ನಾಯಕರು ಬಹಿರಂಗ ಸವಾಲು ಹಾಕಿರುವ ಬೆನ್ನಲ್ಲೇ ಮೋದಿ ವಿರುದ್ಧ ಮಾಜಿ ಕ್ರಿಕೆಟರ್, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದ ವಿಷಯ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮೋದಿ ವಿರುದ್ಧ ನಾನು ನಿಲ್ಲಲು ರೆಡಿ ಎಂದು ಘೋಷಿಸಿದ್ದಾರೆ. ವಾರಣಾಸಿಯಲ್ಲಿ 'ಹರ ಹರ ಮಹಾದೇವ್' ಬದಲಿಗೆ 'ಹರ್ ಹರ್ ಮೋದಿ' ಭಜನೆ ಕೇಳುತ್ತಿದೆ. ಮೋದಿ ಏನು ಮಹಾದೇವ(ಶಿವ)ನಿಗಿಂತ ದೊಡ್ಡವರೇ? ಎಂದು ದಿಗ್ವಿಜಯ್ ಪ್ರಶ್ನಿಸಿದ್ದಾರೆ.
Kya Varanasi aur Bharat ke logon ko HAR HAR MAHADEV ke bajai ab HAR HAR MODI kehana padega? Kya Modi MAHADEV se Bada hai ?Yahi FASCISM hai.
— digvijaya singh (@digvijaya_28) March 19, 2014 ಈ ನಡುವೆ ಇತ್ತೀಚೆಗೆ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಸಚಿನ್ ತೆಂಡೂಲ್ಕರ್, ಪ್ರಿಯಾಂಕಾ ಗಾಂಧಿ ವಧ್ರಾರಂಥ ಪ್ರಭಾವಿ ಜನಪ್ರಿಯ ವ್ಯಕ್ತಿಗಳನ್ನು ವಾರಣಸಿಯಲ್ಲಿ ಕಣಕ್ಕಿಳಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಸೋಲಿಸುವ ಬಗ್ಗೆ ಚರ್ಚೆ ನಡೆದಿದೆ. ಇದರ ಜತೆಗೆ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಮೋದಿ ವಿರುದ್ಧ ಕಣಕ್ಕಿಳಿದರೆ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರೆ ಜಾತ್ಯಾತೀತ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಕೇಜ್ರಿವಾಲ್ ಅವರಿಗೆ ಬೆಂಬಲ ನೀಡುವ ತಂತ್ರಗಾರಿಕೆ ಬಗ್ಗೆ ಕೂಡಾ ಚಿಂತನೆ ನಡೆದಿದೆ.
ಬಹುಶಃ ಇದೇ ಸಾಧ್ಯತೆಯ ಸುಳಿವು ಸಿಕ್ಕಿದ್ದರಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಎರಡು ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಉತ್ತರಪ್ರದೇಶದ ವಾರಣಾಸಿ ಹಾಗೂ ಗುಜರಾತಿನ ವಡೋದರಾದಿಂದ ಕಣಕ್ಕಿಳಿಯುತ್ತಿದ್ದಾರೆ ಎಂದು ಕಾಂಗ್ರೆಸ್ಸಿನವರು ಹೇಳಿಕೊಂಡಿದ್ದಾರೆ.

ನಿರೀಕ್ಷೆಯಂತೆ ಭಾರತ್ ರತ್ನ ಸಚಿನ್ ಅವರು ತಮಗೆ ಬಂದ ಆಫರ್ ನಿರಾಕರಿಸಿದ್ದಾರೆ. ದಿಗ್ವಿಜಯ್ ಸಿಂಗ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತಿಸಿಲ್ಲ. ಆದರೆ, ಸ್ಥಳೀಯ ಅಭ್ಯರ್ಥಿ ಅಜಯ್ ರೈ ಅವರನ್ನು ಮೋದಿ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಅಜಯ್ ರೈ ಅವರ ಪರ 1 ಲಕ್ಷಕ್ಕೂ ಅಧಿಕ ನಿಷ್ಠಾವಂತ ಮತದಾರರಿದ್ದಾರೆ. ಅಜಯ್ ನಮ್ಮ ಟ್ರಂಪ್ ಕಾರ್ಡ್ ಎಂದು ಕಾಂಗ್ರೆಸ್ ನಂಬಿದೆ.
2004ರಲ್ಲಿ ವಾರಣಾಸಿಯಲ್ಲಿ ಕಾಂಗ್ರೆಸ್ಸಿನ ರಾಜೇಶ್ ಕುಮಾರ್ ಮಿಶ್ರಾ ಅವರು 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಆದರೆ, 2009ರಲ್ಲಿ ಬಿಜೆಪಿಯ ಮುರಳಿ ಮನೋಹರ್ ಜೋಶಿ ಅವರು ಗೆಲುವಿನ ನಗೆ ಬೀರಿದರೆ ಅಂದು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಅಜಯ್ ರೈ ಮೂರನೇ ಸ್ಥಾನ ಗಳಿಸಿದ್ದರು. ಮಿಶ್ರಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಎರಡನೇ ಸ್ಥಾನದಲ್ಲಿ ಬಹುಜನ ಸಮಾಜಪಕ್ಷದ ಮುಖ್ತಾರ್ ಅನ್ಸಾರಿ ಅವರು ಬಂದಿದ್ದರು.ಆದರೆ, ಅಜಯ್ 123,874 ಮತಗಳಿಸಿದ್ದಲ್ಲದೆ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.












Click it and Unblock the Notifications