ಬಿಜೆಪಿ ಗೆಲುವಿಗೆ ಇವಿಎಂ ಲೋಪ ಎನ್ನುತ್ತಿದ್ದ ಕೇಜ್ರಿವಾಲ್ ಈಗ ಏನು ಹೇಳ್ತಾರೋ?
ಮುಂದಿನ ವರ್ಷ (2018) ರಷ್ಯಾದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬಳಸಿಕೊಳ್ಳಲು, ಅಲ್ಲಿನ ಚುನಾವಣಾ ಆಯೋಗ ಉತ್ಸುಕತೆ ತೋರಿದೆ.
ನವದೆಹಲಿ, ಏ 5: ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಇವಿಎಂ (ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಕಾರಣ ಎನ್ನುತ್ತಿದ್ದ ರಾಜಕೀಯ ಮುಖಂಡರು, ಮುಜುಗರಕ್ಕೀಡಾಗುವ ವಿದ್ಯಮಾನವೊಂದು ನಡೆದಿದೆ.
ಮುಂದಿನ ವರ್ಷ (2018) ರಷ್ಯಾದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬಳಸಿಕೊಳ್ಳಲು, ಅಲ್ಲಿನ ಚುನಾವಣಾ ಆಯೋಗ ಉತ್ಸುಕತೆ ತೋರಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇವಿಎಂ ಮೂಲಕ ಮತದಾನ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಲು, ಉತ್ತರಾಖಂಡದ ಚುನಾವಣೆಯ ವೇಳೆ ಖುದ್ದು ರಷ್ಯಾದ ಚುನಾವಣಾ ಆಯೋಗದ ಉಪಾಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದರು.

ಇಕಾನಮಿಕ್ ಟೈಮ್ಸ್ ವರದಿ ಪ್ರಕಾರ, ಇವಿಎಂ ತಂತ್ರಜ್ಞಾನದ ಮೂಲಕ ನಡೆಯುವ ಚುನಾವಣಾ ಪ್ರಕ್ರಿಯೆ ಬಗ್ಗೆ ರಷ್ಯಾ ಚುನಾವಣಾ ಆಯೋಗದ ಉಪಾಧ್ಯಕ್ಷರು, ಭಾರತದ ಚುನಾವಣಾ ಆಯೋಗದ ಸವಿಸ್ತಾರವಾಗಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ಅದರಲ್ಲೂ ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಇವಿಎಂನಲ್ಲಿ ಲೋಪದೋಷವಿದೆ ಎಂದು ದೂರಿದ್ದರು.
ಈಗ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿರುವ ರಷ್ಯಾ, ಭಾರತದ ಇವಿಎಂ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿರುವುದು ಈ ಎರಡೂ ಮುಖಂಡರು ಮುಜುಗರಕ್ಕೀಡಾಗುವಂತೆ ಮಾಡಿದೆ.
ಇದೇ ಬರುವ ಏಪ್ರಿಲ್ 29ರಂದು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವಂತೆ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications