ಪಾಟಿದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಈಗ ಶಿವಸೇನೆ ಹುಲಿ!
ಹಾರ್ದಿಕ್ ಗುಜರಾತ್ ಚುನಾವಣೆಯಲ್ಲಿ ಶಿವಸೇನೆಯ ಪರ ಪ್ರಚಾರ ಮಾಡಲಿದ್ದಾರೆ ಎಂದು ಸ್ವತಃ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಈ ಹಿಂದೆ ಪಟೇಲ್ ಎಎಪಿ ಸೇರಲಿದ್ದಾರೆ ಎಂಬ ವದಂತಿ ಹರಡಿತ್ತು.
ಅಹಮದಾಬಾದ್/ಮುಂಬೈ, ಫೆಬ್ರವರಿ 7: ಪಟೇಲ್ ಸಮುದಾಯದ ಮೀಸಲಾತಿಗಾಗಿ ಉಗ್ರ ಪ್ರತಿಭಟನೆ ನಡೆಸಿ ದೇಶದಾದ್ಯಂತ ಸುದ್ದಿಯಾಗಿದ್ದ ಹಾರ್ದಿಕ್ ಪಟೇಲ್ ಶಿವಸೇನೆ ಸೇರಿದ್ದಾರೆ. ಹಾರ್ದಿಕ್ ಗುಜರಾತ್ ಚುನಾವಣೆಯಲ್ಲಿ ಶಿವಸೇನೆಯ ಪರ ಪ್ರಚಾರ ಮಾಡಲಿದ್ದಾರೆ ಎಂದು ಸ್ವತಃ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
ಮಂಗಳವಾರ ಬಹಿರಂಗವಾಗಿ ಮಾತನಾಡಿರುವ ಉದ್ಧವ್ ಠಾಕ್ರೆ ಪಾಟೀದಾರ್ ಸಮುದಾಯದ ಮೀಸಲಾತಿ ನಾಯಕ ಹಾರ್ದಿಕ್ ಪಟೇಲ್ ಗುಜರಾತ್ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಈ ವರ್ಷಾಂತ್ಯಕ್ಕೆ ಗುಜರಾತಿನ 182 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಸತತ 15 ವರ್ಷಗಳಿಂದ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ತೀವ್ರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇದೇ ವೇಳೆಗ ಶಿವಸೇನೆ ಪಾಟಿದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಧುಮುಕುವುದಾಗಿ ಹೇಳಿದೆ. ಇದು ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಬಿಜೆಪಿ ಜತೆ ಮೈತ್ರಿಯಲ್ಲಿದ್ದರೂ ಶಿವಸೇನೆ ಚುನಾವಣೆಯಲ್ಲಿ ಮಾತ್ರ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.
ಎಎಪಿಗೆ ಕೈ ಕೊಟ್ಟ ಹಾರ್ದಿಕ್ ಪಟೇಲ್

ಪಟೇಲ್ ಮೀಸಲಾತಿ ಪ್ರತಿಭಟನೆ ಹಿನ್ನಲೆಯಲ್ಲಿ ಜೈಲು ಪಾಲಾಗಿದ್ದ ಹಾರ್ದಿಕ್ ಪಟೇಲ್ ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಪರ ಹೇಳಿಕೆಗಳನ್ನು ನೀಡಿದ್ದರು. ಅರವಿಂದ್ ಕೇಜ್ರಿವಾಲ್ ಮತ್ತು ಹಾರ್ದಿಕ್ ಪಟೇಲ್ ನಡುವೆ ಮಾತುಕತೆಯೂ ನಡೆದಿತ್ತು. ಇನ್ನೇನು ಎಎಪಿಗೆ ಹಾರ್ದಿಕ್ ಪಟೇಲ್ ಸೇರ್ಪಡೆಯಾದರು ಎನ್ನುವ ಹೊತ್ತಲ್ಲಿ ನಿತೀಶ್ ಕುಮಾರ್ ರನ್ನು ಭೇಟಿಯಾಗಿ ಬಂದು ನಿತೀಶ್ 2019ರ ನಾಯಕ ಎನ್ನುವ ಹೇಳಿಕೆ ನೀಡಿದ್ದರು. ಈಗ ಎಲ್ಲಾ ಗೊಂದಲಗಳಿಗೂ ಉದ್ದವ್ ಠಾಕ್ರೆ ಅಂತಿಮ ಮುದ್ರೆ ಒತ್ತಿದ್ದು ಹಾರ್ದಿಕ್ ಪಟೇಲ್ ಶಿವಸೇನೆ ಜತೆ ನಿಲ್ಲಲಿದ್ದಾರೆ ಎಂಬುದನ್ನು ಘೋಷಿಸಿದ್ದಾರೆ.












Click it and Unblock the Notifications