ಕಣ್ಣೂರಿನಲ್ಲಿ ಆರ್.ಎಸ್.ಎಸ್ ಕಾರ್ಯಕರ್ತನ ಮೇಲೆ ದಾಳಿ
ತಿರುವನಂತಪುರಂ, ಅಕ್ಟೋಬರ್ 16: ಕೇರಳದಲ್ಲಿ ಮತ್ತೋರ್ವ ಆರ್.ಎಸ್.ಎಸ್ ಕಾರ್ಯಕರ್ತನ ಮೇಲೆ ದಾಳಿ ನಡೆದಿದೆ. ಸೈದ್ಧಾಂತಿಕ ಹತ್ಯೆಗಳಿಗೆ ಹೆಸರಾದ ಕಣ್ಣೂರಿನ ತಲಶೆರಿ ಸಮೀಪ ಭಾನುವಾರ ಈ ದಾಳಿ ನಡೆದಿದೆ.
ನಿದೇಶ್ ಎಂಬ 28 ವರ್ಷದ ಆರ್.ಎಸ್.ಎಸ್ ಕಾರ್ಯಕರ್ತನ ಮೇಲೆ ದಾಳಿ ನಡೆದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿದೇಶ್ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿದೇಶ್ ಕಾಲು ಮತ್ತು ಕೈಗೆ ಗಾಯವಾಗಿದ್ದು ಸಿಪಿಐಎಂ ಈ ದಾಳಿ ನಡೆಸಿದೆ ಎಂದು ಸ್ಥಳೀಯ ಬಿಜೆಪಿ ಘಟಕ ದೂರಿದೆ.
ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸಂಜೆ 5.30ಕ್ಕೆ ಮುಝುಪ್ಪಿಲಂಗಡ್ ಬೀಚ್ ನಲ್ಲಿ ನಿದೇಶ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತ ಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಭಿಗಿ ಭದ್ರತೆ ಕೈಗೊಳ್ಳಲಾಗಿದೆ.
ಸದ್ಯ ಸಿಪಿಐಎಂ ತಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಕಾರಣ ಮುಂದಿಟ್ಟು ಕೇರಳದಲ್ಲಿ ಬಿಜೆಪಿ ಜನರಕ್ಷಾ ಯಾತ್ರೆ ನಡೆಸುತ್ತಿದೆ. ಕಣ್ಣೂರಿನಿಂದ ಅಕ್ಟೋಬರ್ 3ಕ್ಕೆ ಆರಂಭವಾದ ಜನರಕ್ಷಾ ಯಾತ್ರೆ ನಾಳೆ ಅಂದರೆ ಅಕ್ಟೋಬರ್ 17ರಂದು ತಿರುವನಂತಪುರಂನಲ್ಲಿ ಸಮಾರೋಪಗೊಳ್ಳಲಿದೆ.
ಇದೀಗ ಜನರಕ್ಷಾ ಯಾತ್ರೆಯ ಸಮಾರೋಪಕ್ಕೂ ಎರಡು ದಿನ ಮೊದಲು ಮತ್ತೋರ್ವ ಆರ್.ಎಸ್.ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.












Click it and Unblock the Notifications