ರಾಮ್ ನಾಥ್ ಕೋವಿಂದ್ : ಮೋದಿಯ ಮಾಸ್ಟರ್ ಸ್ಟ್ರೋಕ್
ನವದೆಹಲಿ, ಜೂನ್ 19 : ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಸೇರಿದಂತೆ ದಿನಕ್ಕೊಂದು ಹೆಸರನ್ನು ಹರಿಬಿಡುತ್ತಲೇ ಇದ್ದ ಭಾರತೀಯ ಜನತಾ ಪಕ್ಷ, ಅಂತಿಮವಾಗಿ ಬಿಹಾರದ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಅವರನ್ನು ಅಂತಿಮಗೊಳಿಸಿದ್ದು ನರೇಂದ್ರ ಮೋದಿಯವರ ಮಾಸ್ಟರ್ ಸ್ಟ್ರೋಕ್.
ಇನ್ನೇನು ಸುಷ್ಮಾ ಸ್ವರಾಜ್ ಅವರ ಹೆಸರೇ ಅಂತಿಮವಾಗಿಬಿಡುತ್ತದೆ ಎನ್ನುವ ಹೊತ್ತಿನಲ್ಲಿ ಮುರಳಿ ಮನೋಹರ ಜೋಶಿ ಅವರ ಹೆಸರೂ ತೇಲಿಬಂದಿತ್ತು. ಅಷ್ಟರಲ್ಲಿ, ಅಚ್ಚರಿಯ ನಿರ್ಧಾರ ಪ್ರಕಟಿಸುವುದರಲ್ಲಿ ಸಿದ್ಧಹಸ್ತರಾಗಿರುವ ಮೋದಿಯವರು ದಲಿತ ನಾಯಕ ರಾಮ್ ನಾಥ್ ಕೋವಿಂದ್ ಅವರ ಹೆಸರನ್ನು ಪ್ರಕಟಿಸಿದ್ದಾರೆ.
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ, ಭಾರತದ ಕ್ಷಿಪಣಿ ತಜ್ಞ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಸೂಚಿಸಿ ಎಲ್ಲರನ್ನೂ ಚಕಿತಗೊಳಿಸಿದ್ದರು. ನರೇಂದ್ರ ಮೋದಿ ಕೂಡ ಈ ವಿಷಯದಲ್ಲಿ ಯಾರೂ ಊಹಿಸದ ಹೆಸರನ್ನು ಸೂಚಿಸಿ ಅಚ್ಚರಿ ಮೂಡಿಸಬಹುದು ಎಂಬ ನಿರೀಕ್ಷೆ ಇದ್ದೇ ಇತ್ತು.

ಅಚ್ಚರಿಯಾಗಿ ಮೂಡಿಬಂದ ಕೋವಿಂದ್ ಹೆಸರು
ಅದರಂತೆ 72 ವರ್ಷದ ರಾಮ್ ನಾಥ್ ಕೋವಿಂದ್ ಅವರ ಹೆಸರನ್ನು ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ. ರಾಮ್ ನಾಥ್ ಕೋವಿಂದ್ ಅವರು ಬಿಜೆಪಿಯ ದಲಿತ ಮೋರ್ಚಾದ ಅಧ್ಯಕ್ಷರಾಗಿದ್ದರು. ಉತ್ತರಪ್ರದೇಶದ ಕಾನ್ಪುರ ಮೂಲದವರಾದ ಕೋವಿಂದ್ ಅವರನ್ನು ಮಾಯಾವತಿಗೆ ಪರ್ಯಾಯವಾಗಿ ಬೆಳೆಸುವ ಪ್ರಯತ್ನವೂ ನಡೆದಿತ್ತು.

ಅತ್ಯುತ್ತಮ ಅಭ್ಯರ್ಥಿ ಎಂದ ಶೀಲಾ ದೀಕ್ಷಿತ್
ರಾಮ್ ನಾಥ್ ಕೋವಿಂದ್ ಅವರ ಹೆಸರು ಸೂಚಿಸುತ್ತಿದ್ದಂತೆ ಎಲ್ಲೆಡೆಯಿಂದ ಮೆಚ್ಚುಗೆ ಮತ್ತು ಬೆಂಬಲಗಳು ಹರಿದುಬರುತ್ತಿವೆ. ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು 'ಅತ್ಯುತ್ತಮ ಅಭ್ಯರ್ಥಿ' ಎಂದು ಶ್ಲಾಘಿಸಿದ್ದರೆ, ತೆಲಂಗಾಣ ಮುಖ್ಯಮಂತ್ರಿ ಕೆಸಿ ರಾವ್ ಕೂಡ ಬೆಂಬಲ ಸೂಚಿಸಿದ್ದಾರೆ.

ಅವಿರೋಧವಾಗಿ ಆಯ್ಕೆ ಮಾಡುವ ಪ್ರಯತ್ನ
ನರೇಂದ್ರ ಮೋದಿಯವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಮುಂತಾದವರೊಡನೆ ಮಾತುಕತೆ ನಡೆಸಿ ಅವರ ಬೆಂಬಲ ಪಡೆಯುವ ಪ್ರಯತ್ನದಲ್ಲಿದ್ದಾರೆ. ರಾಮ್ ನಾಥ್ ಕೋವಿಂದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಪ್ರಯತ್ನ ಎನ್ಡಿಎ ಸರಕಾರದ್ದು.

ಕೆ ನಾರಾಯಣನ್ ಮೊದಲ ದಲಿತ ರಾಷ್ಟ್ರಪತಿ
ಸ್ವಾತಂತ್ರ್ಯ ಬಂದ ನಂತರ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಹಿಡಿದು ಡಾ. ಪ್ರಣಬ್ ಮುಖರ್ಜಿ ಅವರ ವರೆಗೆ 13 ರಾಷ್ಟ್ರಪತಿಗಳು ಆಡಳಿತ ನಡೆಸಿದ್ದು, ಕೆ ನಾರಾಯಣನ್ ಮಾತ್ರ ದಲಿತರಾಗಿದ್ದವರು. ಈಗ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಎರಡನೇ ದಲಿತ ರಾಷ್ಟ್ರಪತಿಯಾಗಲಿದ್ದಾರೆ.

ಹಿಂದುಳಿದ ವರ್ಗವನ್ನು ಓಲೈಸುವ ತಂತ್ರ
ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಹಿಂದುಳಿದ ವರ್ಗವನ್ನು ಓಲೈಸುವ ದೃಷ್ಟಿಯಿಂದ ಈ ಮಹತ್ವದ ತೀರ್ಮಾನವನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ತೆಗೆದುಕೊಂಡಿದ್ದರೆ ಖಂಡಿತ ಅಚ್ಚರಿಯಿಲ್ಲ. ಕರ್ನಾಟಕದ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದಲೂ ಈ ನಡೆ ಮಹತ್ವದ್ದಾಗಿದೆ.












Click it and Unblock the Notifications