ಹಿಂದುತ್ವ ಹೇಳಿಕೆ ವಿವಾದದಲ್ಲಿ ಆರೆಸ್ಸೆಸ್ ಮುಖ್ಯಸ್ಥ
ಮುಂಬೈ, ಆ.18: ಭಾರತದಲ್ಲಿರುವ ಎಲ್ಲಾ ನಿವಾಸಿಗಳು ಹಿಂದುತ್ವದ ಮೂಲಕ ತಮ್ಮ ಸಾಂಸ್ಕೃತಿಕ ಗುರುತಾಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಮತ್ತೊಮ್ಮೆ 'ಹಿಂದುತ್ವ ರಾಷ್ಟ್ರದ ಹೆಗ್ಗುರುತು' ಎನ್ನುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಇತ್ತೀಚೆಗೆ ಹಿಂದುತ್ವ ಎಂದರೆ ಅದೊಂದು ಜೀವನಶೈಲಿ ಅಷ್ಟೇ ಎಂದು ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಈಗ ಮೋದಿ ಹೆಸರು ಹೇಳದೆ ಮೋದಿ ವಿರುದ್ಧವೇ ಹೇಳಿಕೆ ನೀಡಿದ್ದರು. ಈಗ ಮುಂಬೈನಲ್ಲಿ ಮಾತನಾಡುತ್ತಾ ಹಿಂದುತ್ವ ಹಮಾರೇ ರಾಷ್ಟ್ರ್ ಕಿ ಪೆಹಚಾನ್ ಹೈ ಎಂದಿದ್ದಾರೆ.
ವಿಶ್ವ ಹಿಂದೂ ಪರಿಷತ್ ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಮಾತನಾಡಿದ ಮೋಹನ್ ಅವರು 'ಭಾರತ ಒಂದು ಹಿಂದು ರಾಷ್ಟ್ರವಾಗಿದ್ದು, ಹಿಂದುತ್ವವೇ ನಮ್ಮ ಜೀವಾಳ, ಹಿಂದುಸ್ತಾನದಲ್ಲಿ ಬದುಕುವ ಎಲ್ಲರೂ ಹಿಂದೂಗಳು' ಎಂದು ಹೇಳಿದ್ದಾರೆ.[ಬಿಜೆಪಿ ಗೆಲುವು ಮೋದಿ ಅಲೆಯಿಂದಲ್ಲ]

1940 ರಲ್ಲಿ ಸಂಘ ಪರಿವಾರವನ್ನು ಕೇಶವ್ ಬಲಿರಮ್ ಹೆಗ್ಡೇವಾರ್ ಅವರು ಸ್ಥಾಪಿಸಿದ್ದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲ ವ್ಯಕ್ತಿಪಡಿಸುವ ಉದ್ದೇಶಕ್ಕಾಗಿ ಮಾತ್ರವಲ್ಲದೆ, ಸ್ವಾಭಿಮಾನ, ಸ್ವಾಯುತ್ತತೆ ಬೆಳವಣಿಗೆಗೂ ಒತ್ತು ನೀಡಲಾಯಿತು. ಸಮಾಜದ ಉದ್ಧಾರ ಎಂದರೆ ಪ್ರತಿ ವ್ಯಕ್ತಿ ಆರ್ಥಿಕ, ಸಾಮಾಜಿಕವಾಗಿ ಏಳಿಗೆ ಕಾಣುವುದೇ ಆಗಿದೆ ಎಂದು ಮೋಹನ್ ಅಭಿಪ್ರಾಯಪಟ್ಟರು.
ಹಿಂದುತ್ವ ರಾಷ್ಟ್ರೀಯತೆಯನ್ನು ಪ್ರತಿನಿಧಿಸಲಿದೆ. ದೇಶದಲ್ಲಿ ಬದಲಾವಣೆ ತರುವ ಏಕೈಕ ಮಾರ್ಗ ಹಿಂದುತ್ವವಾಗಿದೆ. ಆದ್ದರಿಂದ ಹಿಂದುತ್ವ ಗಟ್ಟಿಗೊಳಿಸಲು ಕಾರ್ಯಕರ್ತರು ದುಡಿಯಬೇಕು. ಹಿಂದುತ್ವ ಎಂಬುದು ಹಿಂದುಸ್ಥಾನದ ತಿರುಳಾಗಿದೆ. ಆದ್ದರಿಂದ ಹಿಂದುತ್ವದಿಂದ ದೇಶವನ್ನು ಗಟ್ಟಿಗೊಳಿಸಬೇಕು ಎಂದು ಎಂದು ಭಾಗವತ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಮಿ. ಭಾಗ್ವತ್ ಅವರು ಸಂವಿಧಾನವನ್ನು ಮತ್ತೊಮ್ಮೆ ಓದುವುದು ಒಳ್ಳೆಯದು. ದೇಶ ಹೇಗೆ ರಚನೆಯಾಗಿದೆ. ಇಲ್ಲಿ ಯಾವ ರೀತಿ ಎಲ್ಲರೂ ಐಕ್ಯತೆಯಿಂದ ಬಾಳಬಹುದಾಗಿದೆ ಎಂಬುದರ ಬಗ್ಗೆ ಅರಿವಿರಲಿ. ಸಂವಿಧಾನದಲ್ಲಿ ಇಂಡಿಯಾ ಅಥವಾ ಭಾರತ ಎಂಬ ಪದ ಮಾತ್ರ ಬಳಕೆ ಮಾಡಲಾಗಿದೆ. ಹಿಂದೂಸ್ತಾನ ಎಂಬ ಪದವಿಲ್ಲ. ಆರೆಸ್ಸೆಸ್ ಗೆ ನೈಜತೆಯ ಅರಿವಿಲ್ಲ ಎಂದಿದ್ದಾರೆ.












Click it and Unblock the Notifications