ಚುನಾಯಿತರ ಬದಲಿಗೆ ಆರ್ಎಸ್ಎಸ್, ಅಧಿಕಾರಿಗಳು ಕಾನೂನು ರೂಪಿಸುತ್ತಿದ್ದಾರೆ: ರಾಹುಲ್ ಗಾಂಧಿ
ಬೆಂಗಳೂರು, ಸೆಪ್ಟೆಂಬರ್ 30: ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನರ ನಿಖರ ಸಂಖ್ಯೆಯನ್ನು ತಿಳಿಯಲು ಜಾತಿ ಆಧಾರಿತ ಜನಗಣತಿ ನಡೆಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಕಲಾಪಿಪಾಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಜನಗಣತಿ ಮತ್ತು ಒಬಿಸಿಗಳಿಗೆ ಮೀಸಲಾತಿಗಾಗಿ ಒತ್ತಾಯ ಮಾಡಿದ ಎರಡು ದಿನಗಳ ನಂತರ ಗಾಂಧಿಯವರು ಈ ಭರವಸೆ ನೀಡಿದರು.

ನಾವು ಅಧಿಕಾರಕ್ಕೆ ಬಂದ ನಂತರ ಮಾಡುವ ಮೊದಲ ಕೆಲಸವೆಂದರೆ ದೇಶದಲ್ಲಿ ಒಬಿಸಿಗಳ ನಿಖರ ಸಂಖ್ಯೆಯನ್ನು ತಿಳಿಯಲು ಜಾತಿ ಆಧಾರಿತ ಜನಗಣತಿ ನಡೆಸುವುದು. ಹಿಂದುಳಿದ ವರ್ಗಗಳ ನಿಖರ ಸಂಖ್ಯೆ ಇದುವರೆಗೂ ಯಾರಿಗೂ ತಿಳಿದಿಲ್ಲ. ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳು ಸೇರಿದಂತೆ ಕೇವಲ 90 ಅಧಿಕಾರಿಗಳು ದೇಶವನ್ನು ನಡೆಸುತ್ತಿದ್ದಾರೆ. ಆದರೆ ದೇಶದಲ್ಲಿ ನೀತಿಗಳು ಮತ್ತು ಕಾನೂನುಗಳನ್ನು ರೂಪಿಸುವಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರ ಪಾತ್ರವಿಲ್ಲ ಎಂದರು.
ಚುನಾಯಿತ ಬಿಜೆಪಿ ಸದಸ್ಯರ ಬದಲಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಅಧಿಕಾರಿಗಳು ಕಾನೂನು ರೂಪಿಸುತ್ತಿದ್ದಾರೆ. ಮಧ್ಯಪ್ರದೇಶವನ್ನು ದೇಶದಲ್ಲಿ ಭ್ರಷ್ಟಾಚಾರದ ಕೇಂದ್ರಬಿಂದು. ವ್ಯಾಪಂನಂತಹ ಹಗರಣಗಳು ರಾಜ್ಯವನ್ನು ಬೆಚ್ಚಿಬೀಳಿಸಿದೆ. ಎಂಬಿಬಿಎಸ್ ಪದವಿಗಳನ್ನು ಮಾರಾಟ ಮಾಡಲಾಗುತ್ತಿದೆ. ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡಲಾಗುತ್ತಿದೆ ಮತ್ತು ಮಾರಾಟ ಮಾಡಲಾಗುತ್ತಿದೆ. ಮಹಾಕಾಲ್ ಲೋಕ ಕಾರಿಡಾರ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದರು.
ಮಧ್ಯಪ್ರದೇಸದಲ್ಲಿ ಕಳೆದ 18 ವರ್ಷಗಳಲ್ಲಿ 18 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ಪ್ರತಿದಿನ ಮೂವರು ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಸಿದ್ಧಾಂತಗಳ ಹೋರಾಟ. ಒಂದು ಕಡೆ ಕಾಂಗ್ರೆಸ್ ಪಕ್ಷ, ಇನ್ನೊಂದು ಕಡೆ ಆರ್ಎಸ್ಎಸ್ ಮತ್ತು ಬಿಜೆಪಿ. ಒಂದೆಡೆ ಮಹಾತ್ಮ ಗಾಂಧಿ ಮತ್ತೊಂದೆಡೆ ಗೋಡ್ಸೆ ಇದ್ದಾರೆ. ಒಂದೆಡೆ ದ್ವೇಷ, ಹಿಂಸೆ ಮತ್ತೊಂದೆಡೆ ಪ್ರೀತಿ, ಗೌರವ, ಸಹೋದರತ್ವ ಎಂದರು.
ಬಿಜೆಪಿಯವರು ಎಲ್ಲಿಗೆ ಹೋದರೂ ದ್ವೇಷ ಮತ್ತು ಕೋಪವನ್ನು ಹರಡುತ್ತಾರೆ ಆದರೆ ಈಗ ಮಧ್ಯಪ್ರದೇಶದ ಯುವಕರು ಮತ್ತು ರೈತರು ಅವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ಜನರ ನಿಖರ ಸಂಖ್ಯೆಯನ್ನು ತಿಳಿಯಲು ದೇಶದಲ್ಲಿ ಜಾತಿ ಗಣತಿ ನಡೆಸಲಾಗುವುದು ಎಂದರು.












Click it and Unblock the Notifications