ರೋಹ್ಟಕ್ ಸಹೋದರಿಯರ ಪ್ರಕರಣಕ್ಕೆ ಹೊಸ ತಿರುವು
ಛತ್ತೀಸ್ಗಡ, ಡಿ. 4: ಬಸ್ನಲ್ಲಿ ಮೂವರು ಯುವಕರ ಮೇಲೆ ಬೆಲ್ಟ್ನಿಂದ ದಾಳಿ ನಡೆಸಿ ದೇಶಾದ್ಯಂತ ಶೂರರು ಎಂದು ಹೊಗಳಿಸಿಕೊಂಡಿದ್ದ ಸಹೋದರಿಯರ ಪ್ರಕರಣವೀಗ ಹೊಸ ತಿರುವು ಪಡೆದಿದೆ.
ಬಸ್ನಲ್ಲಿದ್ದ ಯುವಕರು ಈ ಸಹೋದರಿಯರಿಗೆ ಲೈಂಗಿಕವಾಗಿ ಕಿರುಕುಳ ನೀಡಿಲ್ಲ. ಯುವಕರ ವಿರುದ್ಧ ಬಂದಿರುವ ಆರೋಪ ಸುಳ್ಳು ಎಂದು ನಾಲ್ವರು ಮಹಿಳೆಯರು ಹೇಳಿಕೆ ನೀಡಿ ರೋಹ್ಟಕ್ ಪೊಲೀಸ್ ಠಾಣೆಯಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರಿಂದ ಪ್ರಕರಣವೀಗ ಸಂಪೂರ್ಣ ತಿರುವು ಪಡೆದಿದ್ದು, ಸರ್ಕಾರ ಕೂಡ ಸಹೋದರಿಯರಿಗೆ ಘೋಷಿಸಿದ್ದ ಶೌರ್ಯ ಪ್ರಶಸ್ತಿಯನ್ನು ತಡೆ ಹಿಡಿದಿದೆ. [ರೋಹ್ಟಕ್ ಯುವತಿಯರ ಫೈಟ್ ಪೂರ್ವಯೋಜಿತವೇ?]
ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ ಜವಾಹರ ಯಾದವ್, "ರಾಜ್ಯ ಸರ್ಕಾರ ಸಹೋದರಿಯರಿಗೆ ಘೋಷಿಸಿದ್ದ ಶೌರ್ಯ ಪ್ರಶಸ್ತಿಯನ್ನು ತಡೆಹಿಡಿಯಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ. [ರೋಹ್ಟಕ್ ಸಿಸ್ಟರ್ಸ್ ಗೆ ಸನ್ಮಾನ]

ಪ್ರಕರಣವೇನು?: ಹರ್ಯಾಣದ ರೋಹ್ಟಕ್ ನಗರದ ಬಸ್ ಒಂದರಲ್ಲಿ ಮೂವರು ಯುವಕರ ಮೇಲೆ ಸಹೋದರಿಯರಿಬ್ಬರು ಬೆಲ್ಟ್ನಿಂದ ದಾಳಿ ನಡೆಸಿದ್ದರು. ಸಹೋದರಿಯರ ಪಾಲಕರು ರೋಹ್ಟಕ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ನಂತರ ಹೊಡೆತ ತಿಂದ ಯುವಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಅವರು ಜಾಮೀನು ಪಡೆದು ಹೊರಬಂದಿದ್ದರು.
ಆದರೆ, ಸಹೋದರಿಯರು ತಾವು ದಾಳಿ ನಡೆಸಿದ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರಿಸಿಕೊಂಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ದೇಶಾದ್ಯಂತ ಮಾಧ್ಯಮಗಳ ಮೂಲಕ ಪ್ರಸಾರವಾಗಿ ಭಾರೀ ಮೆಚ್ಚುಗೆ ಗಳಿಸಿತು. ವಿವಿಧ ಮಹಿಳಾ ಸಂಘಟನೆಗಳು ಹಾಗೂ ಮಹಿಳಾ ಆಯೋಗ ಕೂಡ ಆರೋಪಿ ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದವು. ಆಗ ಹರ್ಯಾಣ ರಾಜ್ಯ ಸರ್ಕಾರ ಸಹೋದರಿಯರಿಬ್ಬರಿಗೆ ಶೌರ್ಯ ಪ್ರಶಸ್ತಿ ಘೋಷಿಸಿ, ಗಣರಾಜ್ಯೋತ್ಸವದಂದು ಸನ್ಮಾನಿಸುವುದಾಗಿ ತಿಳಿಸಿತ್ತು. [ಬೀದಿ ಕಾಮಣ್ಣನಿಗೆ ಥಳಿಸಿ ಪ್ರಶಸ್ತಿ ಪಡೆದ ಚೈತ್ರಾ]
ಆದರೆ, ಬಸ್ನಲ್ಲಿ ಯುವಕರು ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಹಲ್ಲೆ ನಡೆಸಿದ ಸಹೋದರಿಯರ ಗ್ರಾಮದವರೇ ಆದ ನಾಲ್ವರು ಮಹಿಳೆಯರು ಪೊಲೀಸ್ ಠಾಣೆಯಲ್ಲಿ ಪ್ರಮಾಣ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಹೊಸ ತಿರುವು ಪಡೆದಿದೆ. ಯುವಕರ ಜೊತೆಗೆ ಸಹೋದರಿಯರ ವಿರುದ್ಧವೂ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದು, ಸರ್ಕಾರ ಕೂಡ ಘೋಷಿಸಿದ್ದ ಪ್ರಶಸ್ತಿಯನ್ನು ತಡೆಹಿಡಿದಿದೆ. [ಶಿಕ್ಷಕಿಯಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]












Click it and Unblock the Notifications