ಶಿಕ್ಷಕರ ದಿನಾಚರಣೆಯೋ? ಗುರು ಉತ್ಸವವೋ?
ಬೆಂಗಳೂರು, ಸೆ. 2 : ಒಂದೆಡೆ ಅಭಿವೃದ್ಧಿ ಕೆಲಸದಲ್ಲಿ ನಿರತವಾಗಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ವಿವಾದಗಳಿಂದಲೂ ಹೊರತಾಗಿಲ್ಲ. ಶಾಲಾ ಕಾಲೇಜುಗಳಲ್ಲಿ ಸಂಸ್ಕೃತ ಸಪ್ತಾಹ ಆಚರಣೆಗೆ ಮುಂದಾಗಿದ್ದ ಸರ್ಕಾರ ಇದೀಗ ಶಿಕ್ಷಕರ ದಿನಾಚರಣೆಯನ್ನು 'ಗುರು ಉತ್ಸವ್' ಹೆಸರಿನಲ್ಲಿ ಆಚರಣೆ ಮಾಡಲು ಸಿದ್ಧವಾಗುತ್ತಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಎಲ್ಲ ಲಕ್ಷಣಗಳು ಉಂಟಾಗಿದೆ.
ಮಾನವ ಸಂಪನ್ಮೂಲ ಇಲಾಖೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಗುರು ಉತ್ಸವ ನಿಮಿತ್ತದ ಪ್ರಧಾನಿ ಭಾಷಣ ಕಡ್ಡಾಯವಾಗಿ ಆಲಿಸಲು ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದೆ.

ಭಾಷಾ ವಿವಾದಕ್ಕೆ ಗುರಿಯಾಗುವುದೇ?
ಡಿಎಂಕೆ ನಾಯಕ ಕರುಣಾನಿಧಿ ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಹಿಂದೆ ಆರ್ಯರು ತಮಿಳು ಭಾಷೆ ಸರ್ವನಾಶಕ್ಕೆ ಯತ್ನಿಸಿದ್ದರು, ಈಗ ನರೇಂದ್ರ ಮೋದಿ ಸರದಿ ಬಂದಂತೆ ಕಾಣುತ್ತಿದೆ. ಶಿಕ್ಷಕರ ದಿನಾಚರಣೆಯನ್ನು 'ಗುರು ಉತ್ಸವ್' ಎಂದು ಬದಲಾಯಿಸಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರುವ ಆರಂಭಿಕ ಪ್ರಯತ್ನ ಇದು. ಈ ರೀತಿ ಒಂದೊಂದೆ ಚಿಕ್ಕ ಚಿಕ್ಕ ಪ್ರಯತ್ನಗಳ ಮೂಲಕ ಪ್ರದೇಶಿಕ ಭಾಷೆ ಅಳಿವಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
60ರ ದಶಕದಿಂದಲೂ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿಯವರೆಗೆ ಯಾವ ಗೊಂದಲಗಳು ಎದುರಾಗಿರಲಿಲ್ಲ. ಹಿಂದಿಯನ್ನು ರಾಷ್ಟ್ರಭಾಷೆ ಮಾಡಲು ಹೊರಟಾಗ ತಮಿಳುನಾಡಲ್ಲಿ ಉಗ್ರ ಪ್ರತಿಭಟನೆ ಎದುರಾಗಿತ್ತು. ಈ ರೀತಿ ತಮಿಳರು ಮತ್ತು ದ್ರಾವಿಡರ ಭಾವನೆಗಳ ಮೇಲೆ ಗದಾಪ್ರಹಾರ ಮಾಡಲು ಮುಂದಾದರೆ ಮತ್ತೆ ಹೋರಾಟ ಆರಂಭವಾಗುತ್ತದೆ ಎಂದು ಕರುಣಾನಿಧಿ ಎಚ್ಚರಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ವಿರೋಧ
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮಾಣಿಕ್ರಾವ್ ಥ್ಯಾಕರೆ, ಕೇಂದ್ರ ಸರ್ಕಾರ ಬೇಡದ ಕೆಲಸಕ್ಕೆ ಕೈ ಹಾಕಿದೆ. ಇದೊಂದು ರೀತಿಯ ಸರ್ವಾಧಿಕಾರಿ ಧೋರಣೆಯಾಗಿದ್ದು ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಭಾಷಣ ಕೇಳಿ ಎಂದು ಹೇಳುತ್ತಿರುವುದರ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇತ್ತ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಹ ಗುರು ಉತ್ಸವ್ಕ್ಕೆ ವಿರೊಧ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಕ್ಕೂ ಹಿಂದಿ ಹೇರಿಕೆ?
ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಮತ್ತು ಸಂಸ್ಕೃತ ಬಳಕೆಗೆ ಒತ್ತು ನೀಡಬೇಕು ಎಂಬ ಕೇಂದ್ರ ಗೃಹ ಸಚಿವಾಲಯದ ಕ್ರಮಕ್ಕೆ ಅನೇಕ ಪ್ರಶ್ನೆಗಳು ಎದುರಾಗಿದ್ದವು. ಬಿಜೆಪಿ ಸಖ್ಯ ಬೆಳೆಸಿರುವ ತಮಿಳುನಾಡಿನ ಎಂಡಿಎಂಕೆ ಮತ್ತು ಪಿಎಂಕೆ ಪಕ್ಷಗಳು ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ನಂತರ ಕೇಂದ್ರ ಸರ್ಕಾರ ಈ ಆದೇಶ ಹಿಂದಿ ಭಾಷಿಕ ರಾಜ್ಯಗಳಿಗೆ ಮಾತ್ರ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯಲಾಗಿತ್ತು.
ಸಂಸ್ಕೃತ ಸಪ್ತಾಹ ಆಚರಣೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಸಮಾಧಾನ ವ್ಯಕ್ತಪಡಿಸಿದ್ದರು. ತಮಿಳುನಾಡು ಭವ್ಯವಾದ ಭಾಷೆ ಮತ್ತು ಸಂಪ್ರದಾಯ ಹೊಂದಿದ್ದು ಹೇರಿಕೆಯ ಅಗತ್ಯವಿಲ್ಲ ಎಂದು ಹೇಳಿದ್ದರು. ಸಿಬಿಎಸ್ಸಿ ಪಠ್ಯ ಕ್ರಮದಲ್ಲಿ ಸಂಸ್ಕೃತ ಅಳವಡಿಕೆಗೂ ವಿರೋಧಿಸಿದ್ದರು. ಪ್ರದೇಶಕ್ಕೆ ಸಂಬಂಧಿಸಿದ ಜಾನಪದ ಭಾಷೆ ಬೆಳವಣಿಗೆಗೆ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಿದ್ದರು.
ಇದು ಬಿಜೆಪಿಯ ತಂತ್ರಗಾರಿಕೆಯೆ?
ಶಿಕ್ಷಕರ ದಿನಾಚರಣೆಯನ್ನು ಗುರು ಉತ್ಸವ್ ಆಗಿಸಲು ಹೊರಟಿರುವುದು 'ಹಿಂದಿ-ಹಿಂದು' ಹೇರಿಕೆಯ ಕಾರ್ಯತಯಂತ್ರವೆ? ಎಂಬ ಪ್ರಶ್ನೆ ಉದ್ಭವಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅತಿ ಹೆಚ್ಚು ಚರ್ಚೆಗೆ ಒಳಗಾದ ಸಂಗತಿಗಳೆಂದರೆ ಹಿಂದು ಮತ್ತು ಹಿಂದಿ. ಎಲ್ಲ ಉಗ್ರಗಾಮಿ ಚಟುವಟಿಕೆಗಳಿಗೆ ಮುಸ್ಲಿಮರೆ ಕಾರಣ, ಉತ್ತರ ಪ್ರದೇಶದ ಹಿಂಸಾಚಾರ ಮುಸ್ಲಿಮರಿಂದಾಗಿದ್ದು. ಲವ್ ಜಿಹಾದ್ ಮೂಲಕ ಮತಾಂತರ ಮಾಡಲಾಗುತ್ತಿದೆ. ಇಂಥ ಹೇಳಿಕೆಗಳು ಬಿಜಿಪಿ ಸಂಸದ ಆದಿತ್ಯನಾಥ್ ಬಾಯಿಂದ ಬಂದಿದ್ದವು.
ಸಮಾನತೆ ಹೆಸರಿಗೆ ಏಟು?
ಪ್ರಧಾನಿ ನರೇಂಧ್ರ ಮೋದಿ ತಮ್ಮ ಸರ್ಕಾರ ಸಕಲರನ್ನು ಒಂದೇ ರೀತಿ ನೋಡಿಕೊಳ್ಳುತ್ತದೆ ಎನ್ನುತ್ತಿದ್ದಾರೆ. ಆದರೆ ಇತ್ತ ಬಿಜೆಪಿ ಮುಖಂಡರು, ಆರ್ಎಸ್ಎಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಹಿಂದುತ್ವದ ತತ್ವವನ್ನು ವಿಜೃಂಭಿಸುತ್ತಿವೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.
ಕರ್ನಾಟಕದಿಂದ ಯಾವ ಪ್ರತಿಕ್ರಿಯೆ ಇಲ್ಲ
ಕರ್ನಾಟಕ ಸರ್ಕಾರ ಅಥವಾ ಯಾವ ರಾಜಕೀಯ ಮುಖಂಡರು ಈ ಬಗ್ಗೆ ಪ್ರಕ್ರಿಯೆ ನೀಡಿಲ್ಲ ಅಥವಾ ವಿರೋಧವನ್ನು ವ್ಯಕ್ತಪಡಿಸಿಲ್ಲ.












Click it and Unblock the Notifications