ಸರ್ಕಾರಕ್ಕೆ 1.76 ಲಕ್ಷ ಕೋಟಿ ಹಣ ಆರ್ಬಿಐನಿಂದ ವರ್ಗಾವಣೆ
ಬೆಂಗಳೂರು, ಆಗಸ್ಟ್ 26 : ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರಕ್ಕೆ 1.76 ಲಕ್ಷ ಕೋಟಿ ಹಣವನ್ನು ವರ್ಗಾವಣೆ ಮಾಡಲು ಒಪ್ಪಿಗೆ ಕೊಟ್ಟಿದೆ. ವಿತ್ತೀಯ ಕೊರತೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಸೋಮವಾರ ಆರ್ಬಿಐ ಲಾಭಂಶ ಮತ್ತು ಹೆಚ್ಚುವರಿ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ದೇಶದ ಆರ್ಥಿಕ ಸ್ಥಿತಿ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಆರ್ಬಿಐ ಈ ಕ್ರಮಕ್ಕೆ ಮುಂದಾಗಿದೆ.
ಆರ್ಬಿಐ ಸರ್ಕಾರಕ್ಕೆ ವರ್ಗಾವಣೆ ಮಾಡುತ್ತಿರುವ ಇದುವರೆಗಿನ ಅತಿ ಹೆಚ್ಚಿನ ಮೊತ್ತದ ಹಣವಿದಾಗಿದೆ. ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿರುವಾಗಲೇ ಆರ್ಬಿಐ ಸಹ ಇದಕ್ಕೆ ಕೈ ಜೋಡಿಸಿದೆ.

2018ರ ನವೆಂಬರ್ನಲ್ಲಿ ಹಣಕಾಸು ಸಚಿವರಾಗಿದ್ದ ದಿ. ಅರುಣ್ ಜೇಟ್ಲಿ, "ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಆರ್ಬಿಐ ಅಥವ ಇನ್ಯಾವುದೇ ಹೆಚ್ಚುವರಿ ನಿಧಿಯ ಅಗತ್ಯ ಸರ್ಕಾರಕ್ಕೆ ಇಲ್ಲ" ಎಂದು ಹೇಳಿದ್ದರು.
ಈಗ 2019ರ ಆಗಸ್ಟ್ನಲ್ಲಿ ಆರ್ಬಿಐನಿಂದ ಲಾಭಂಶ ಮತ್ತು ಹೆಚ್ಚುವರಿ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ವರ್ಗಾವಣೆ ಮಾಡಲು ಒಪ್ಪಿಗೆ ಸಿಕ್ಕಿದೆ.
ಸರ್ಕಾರಕ್ಕೆ ಎಷ್ಟು ಮೊತ್ತದ ಹಣವನ್ನು ವರ್ಗಾವಣೆ ಮಾಡಬಹುದು ಎಂದು ವರದಿ ನೀಡಲು ಆರ್ಬಿಐ ಮಾಜಿ ಗೌರ್ನರ್ ಭೀಮಲ್ ಜಲನ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯ ವರದಿಯ ಅನ್ವಯ ಹಣ ವರ್ಗಾವಣೆ ತೀರ್ಮಾನವನ್ನು ಕೈಗೊಳ್ಳಲಾಗಿದೆ.
2016-17ರಲ್ಲಿ ಆರ್ಬಿಐ 30, 659 ಕೋಟಿ ಹಣ ವರ್ಗಾವಣೆ ಮಾಡಿತ್ತು. 2017-18ರಲ್ಲಿ 40,659 ಕೋಟಿ ಲಾಭಾಂಶವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆರ್ಬಿಐ ಜೂನ್ನಿಂದ ಜುಲೈವರೆಗಿನ ಆರ್ಥಿಕ ವರ್ಷವನ್ನು ಅನುಸರಿಸುತ್ತದೆ. ಆಗಸ್ಟ್ನಲ್ಲಿ ಲಾಭಾಂಶ ವರ್ಗಾವಣೆ ಮಾಡುತ್ತದೆ.












Click it and Unblock the Notifications