ನೋಟಿನಲ್ಲಿ ದೇವರ ಪೋಟೋ; ಕೇಜ್ರಿವಾಲ್ ವಿರುದ್ಧ ಗುಡುಗಿದ ಆರ್ಬಿಐ
ನವದೆಹಲಿ, ಅಕ್ಟೋಬರ್ 28: ಕರೆನ್ಸಿ ನೋಟುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರ್ಬಿಐ ಕೇಂದ್ರೀಯ ಮಂಡಳಿ ನಿರ್ದೇಶಕ ಎಸ್. ಗುರುಮೂರ್ತಿ, 'ಅರವಿಂದ್ ಕೇಜ್ರಿವಾಲ್ ಅವರು ಕೀಳ ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ನೋಟುಗಳ ಮೇಲೆ ಗಣೇಶ, ಲಕ್ಷ್ಮಿ ಚಿತ್ರ ಮುದ್ರಿಸಿ: ಪ್ರಧಾನಿಗೆ ಪತ್ರ ರವಾನಿಸಿದ ಕೇಜ್ರಿವಾಲ್
'ಅಪಮೌಲ್ಯೀಕರಣವನ್ನು ತಡೆಯಲು ನೋಟುಗಳ ಮೇಲೆ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಹಾಕುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಯು ಕೀಳು ಮಟ್ಟದ ರಾಜಕೀಯವಾಗಿದೆ. ಲಕ್ಷ್ಮಿ ದೇವಿಯ ಚಿತ್ರಗಳನ್ನು ಹಾಕುವುದರಿಂದ ಭಾರತೀಯರಿಗೆ ಕರೆನ್ಸಿ ನೋಟುಗಳು ಹೆಚ್ಚು ಪವಿತ್ರವಾಗುವುದಿಲ್ಲ' ಎಂದು ಅವರು ತಿಳಿಸಿದ್ದಾರೆ..
ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರು ಈ 'ಮೂರ್ಖ ಸಲಹೆ' ನೀಡಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.
ಸುದ್ದಿವಾಹಿನಿ 'ಇಂಡಿಯಾ ಟುಡೆ' ಜೊತೆಗೆ ಮಾತನಾಡಿರುವ ಗುರುಮೂರ್ತಿ, 'ಕೇಜ್ರಿವಾಲ್ ಅವರು ತಮ್ಮ ರಾಜಕೀಯವನ್ನು ಅಪಾಯಕಾರಿಯಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಇಂತಹ ಬೇಡಿಕೆ ಇಟ್ಟಾಗ ಯಾರೂ ಸಹ ಅದನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ. ಹುಸಿ ಸೆಕ್ಯುಲರ್ ರಾಜಕಾರಣಿಗಳನ್ನು ಅವರು ಮೀರಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
'ಲಕ್ಷ್ಮಿ ದೇವಿಯನ್ನು ಪೂಜಿಸುವವರನ್ನು ನಾವು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ. ಎಲ್ಲರ ಒಮ್ಮತವಿದ್ದರೆ ನೋಟುಗಳಲ್ಲಿ ಲಕ್ಷ್ಮಿ ಅಥವಾ ಗಣೇಶ ಚಿತ್ರಗಳನ್ನು ಮುದ್ರಿಸಬಹುದು. ಅದನ್ನು ನಾನು ವಿರೋಧಿಸಲಾರೆ. ಆದರೆ ಯಾರಾದರೂ ನನ್ನ ದೇವರನ್ನು ಅಪಹಾಸ್ಯ ಮಾಡಲು ಬಯಸಿದರೆ, ಅಂತಹ ಕುಚೇಷ್ಟೆಯ ಭಾಗವಾಗಲು ನಾನು ಇಷ್ಟಪಡುವುದಿಲ್ಲ' ಎಂದು ಹೇಳಿದ್ದಾರೆ.
ಭಾರತೀಯರು ಹಣವನ್ನು ಪವಿತ್ರವೆಂದೇ ನೋಡುತ್ತಾರೆ. ಅದರ ಮೇಲೆ ಲಕ್ಷ್ಮಿ ದೇವಿಯ ಚಿತ್ರಗಳನ್ನು ಹಾಕುವುದರಿಂದ ಭಾರತೀಯರಿಗೆ ಕರೆನ್ಸಿ ಹೆಚ್ಚು ಪವಿತ್ರವಾಗುವುದಿಲ್ಲ ಎಂದು ಅವರು ಹೇಳಿದರು.
ಕರೆನ್ಸಿ ನೋಟುಗಳಲ್ಲಿ ಹಿಂದೂ ದೇವರುಗಳು ಮತ್ತು ದೇವತೆಗಳನ್ನು ಹೊಂದಿರುವುದು ಕಾನೂನು ಬದ್ಧವಾಗಿದೆಯೇ ಎಂದು ಗುರುಮೂರ್ತಿ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, 'ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ದೇವತೆಯನ್ನು ಹೊಂದಲು ಸಾಧ್ಯವಿದೆ, ಏಕೆಂದರೆ ಅವಳು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದ್ದಾಳೆ' ಎಂದು ಉತ್ತರಿಸಿದ್ದಾರೆ.
ಕೇಜ್ರಿವಾಲ್ ಬೇಡಿಕೆ ಏನು?; ನೋಟುಗಳ ಮೇಲೆ ಹಿಂದೂ ದೇವತೆಗಳಾದ ಗಣೇಶ ಹಾಗೂ ಲಕ್ಷ್ಮಿ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.
'ದೇಶದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಭಾರತವು ಅಭಿವೃದ್ಧಿ ಹೊಂದುತ್ತಿರುವ ಬಡ ದೇಶ ಎಂದು ಹೆಸರಾಗಿದೆ. ನಮ್ಮೆಲ್ಲರ ಪ್ರಯತ್ನಗಳಿಗೆ ದೇವತಿಗಳ ಆಶೀರ್ವಾದ ಬೇಕು. ನಮಗೆ ಉತ್ತಮ ಫಲ ನೀಡಲು ದೇವತಿಗಳ ಅನಿವಾರ್ಯತೆ ಇದೆ' ಎಂದು ಅವರು ಹೇಳಿದ್ದಾರೆ.
ಲಕ್ಷ್ಮಿ ದೇವತೆಯು ಸುಖ ಹಾಗೂ ಸಮೃದ್ಧಿಯ ಸಂಕೇತವಾಗಿದ್ದಾಳೆ. ಗಣೇಶನು ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ. ಆ ಕಾರಣ, ಭಾರತದ ನೋಟುಗಳಲ್ಲಿ ಇಬ್ಬರ ಫೋಟೊಗಳನ್ನು ಮುದ್ರಿಸಬೇಕು. ಅದರೊಂದಿಗೆ ಮಹಾತ್ಮ ಗಾಂಧಿ ಅವರ ಫೋಟೋ ಇರಬೇಕು ಎಂದಿದ್ದಾರೆ.
ಇದಕ್ಕೆ ಜನರ ಬೆಂಬಲವೂ ಇದೆ. ಈ ಬೇಡಿಕೆಯನ್ನು ಈಡೇರಿಸಬೇಕೆಂದು ಪ್ರತಿಯೊಬ್ಬ ಭಾರತೀಯ ಬಯಸುತ್ತಿದ್ದಾನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಎಲ್ಲಾ ನೋಟುಗಳನ್ನು ಬದಲಿಸಿ ಎಂದು ನಾನು ಹೇಳುವುದಿಲ್ಲ. ಬಿಡುಗಡೆ ಆಗುವ ಕೆಲ ನೋಟುಗಳ ಮೇಲೆ ದೇವತೆಗಳ ಫೋಟೋಗಳು ಇರಬೇಕು ಎಂಬುದು ನನ್ನ ಬೇಡಿಕೆ ಆಗಿದೆ ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಮೇಲೆ ಕಿಡಿಕಾರಿದ ಬಿಜೆಪಿ; ಕೇಜ್ರಿವಾಲ್ರ ಈ ಬೇಡಿಕೆಯು ರಾಜಕೀಯ ಪ್ರೇರಿತವಾದದ್ದು ಎಂದು ಬಿಜೆಪಿ ಹರಿಹಾಯ್ದಿದೆ. ಈ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ನಾಯಕ ಸಂದೀಪ್ ಪಾತ್ರ, 'ಹಿಂದೂ ಧರ್ಮದ ವಿಚಾರದಲ್ಲಿ ಕೇಜ್ರಿವಾಲ್ ದ್ವಂದ್ವ ನಿಲುವನ್ನು ಹೊಂದಿದ್ದಾರೆ. ಅವರು ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರನ್ನು ವ್ಯಂಗ್ಯ ಮಾಡಿದವರು. ರಾಮನ ದೇವಾಲಯಕ್ಕೆ ಹೋಗಲು ನಿರಾಕರಿಸಿದವರು. ಆದರೆ, ಈಗ ಮಾತ್ರ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಗುಜರಾತ್ ಚುನಾವಣೆಗೆ ತಂತ್ರ ರೂಪಿಸಿದ್ದಾರೆ' ಎಂದು ತಿಳಿಸಿದ್ದಾರೆ.