ರಾಮಸೇತು ವಿವಾದ: 'ರಾಮಸೇತು ಅಸ್ತಿತ್ವಕ್ಕೆ ಯಾವುದೇ ಪುರಾವೆ ಇಲ್ಲ'- ಬಿಜೆಪಿ ಹೇಳಿಕೆಗೆ 'ಕೈ' ಕಿಡಿ
ರಾಮಸೇತುವಿನ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಇಂದೂ ಈ ವಿಷಯ ಸಂಸತ್ತಿನಲ್ಲಿ ಪ್ರಸ್ತಾಪವಾಯಿತು. ಈ ಕುರಿತು ಕೇಂದ್ರ ಸರ್ಕಾರವು ರಾಮಸೇತು ಅಸ್ತಿತ್ವದ ಬಗ್ಗೆ ಇನ್ನೂ ಸ್ಪಷ್ಟ ಪುರಾವೆಗಳು ಕಂಡುಬಂದಿಲ್ಲ. ಆದರೆ ಸರ್ಕಾರವು ಅಂತಹ ಹಳೆಯ ಪಾರಂಪರಿಕ ಸ್ಥಳಗಳ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಅಂದಹಾಗೆ, ಸರ್ಕಾರದ ಈ ಹೇಳಿಕೆಯನ್ನು ಕಾಂಗ್ರೆಸ್ ವಿವಾದವನ್ನಾಗಿ ಸೃಷ್ಟಿಸಿದೆ.
ವಾಸ್ತವವಾಗಿ ಹರಿಯಾಣದ ಸ್ವತಂತ್ರ ಸಂಸದ ಕಾರ್ತಿಕೇಯ ಶರ್ಮಾ ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ಹಿಂದಿನ ಸರ್ಕಾರಗಳು ಈ ವಿಷಯವನ್ನು ಬದಿಗೊತ್ತಿದ ಕಾರಣ ಭಾರತ ಸರ್ಕಾರ ನಮ್ಮ ಇತಿಹಾಸದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡುತ್ತಿದೆಯೇ ಎಂದು ಅವರು ಕೇಳಿದರು. ಇದಕ್ಕೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸರ್ಕಾರದ ಪರವಾಗಿ ಉತ್ತರಿಸಿದರು.
ನಮ್ಮ ಸಂಸದರು ರಾಮಸೇತು ಕುರಿತು ಪ್ರಶ್ನೆ ಎತ್ತಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಜಿತೇಂದ್ರ ಸಿಂಗ್ ಸದನದಲ್ಲಿ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ನಮಗೆ ಕೆಲವು ಮಿತಿಗಳಿವೆ, ಏಕೆಂದರೆ ಇದು ಸುಮಾರು 18 ಸಾವಿರ ವರ್ಷಗಳ ಹಿಂದಿನ ಇತಿಹಾಸವಾಗಿದೆ. ನಾವು ಹೇಳುತ್ತಿರುವ ಸೇತುವೆಯೂ ಸುಮಾರು 56 ಕಿ.ಮೀ ಉದ್ದವಿತ್ತು. ಇನ್ನು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಸಮುದ್ರದಲ್ಲಿ ಕೆಲವು ಕಲ್ಲುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ ಎಂದರು.

ಸಮುದ್ರದಲ್ಲಿ ಕೆಲವು ದ್ವೀಪಗಳು ಮತ್ತು ಸುಣ್ಣದ ಕಲ್ಲುಗಳನ್ನು ಗಮನಿಸಲಾಗಿದೆ. ಸರಳವಾಗಿ ಹೇಳುವುದಾದರೆ, ರಾಮಸೇತುವಿನ ಮೂಲ ರೂಪವು ಅಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳುವುದು ಕಷ್ಟ. ಆದರೆ ಕೆಲವು ಸೂಚನೆಗಳು ರಾಮಸೇತುವಿನ ರಚನೆಯು ಅಲ್ಲಿ ಅಸ್ತಿತ್ವದಲ್ಲಿರಬಹುದು ಎಂದು ಸೂಚಿಸುತ್ತದೆ. ಪುರಾತನ ದ್ವಾರಕಾ, ರಾಮಸೇತು ಮುಂತಾದ ವಿಷಯಗಳ ಕುರಿತು ತಮ್ಮ ಸರ್ಕಾರ ನಿರಂತರವಾಗಿ ಸಂಶೋಧನೆ ನಡೆಸುತ್ತಿದೆ ಎಂದು ಸದನಕ್ಕೆ ತಿಳಿಸಿದರು.
ಕಾಂಗ್ರೆಸ್ ತಿರುಗೇಟು
ರಾಮಸೇತು ವಿಚಾರವಾಗಿ ಬಿಜೆಪಿ ಮತ್ತು ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇಡ ವಾಗ್ದಾಳಿ ನಡೆಸಿದ್ದಾರೆ. 'ಎಲ್ಲ ಭಕ್ತರು ಕಿವಿಯಿಟ್ಟು ಕೇಳಬೇಕು ಮತ್ತು ಕಣ್ಣು ತೆರೆದು ನೋಡಬೇಕು ಎಂದ ಅವರು, ರಾಮಸೇತು ಇದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಮೋದಿ ಸರ್ಕಾರ ಸಂಸತ್ತಿನಲ್ಲಿ ಹೇಳುತ್ತಿದೆ' ಎಂದು ಪವನ್ ಖೇಡ ವಾಗ್ದಾಳಿ ಮಾಡಿದ್ದಾರೆ.

ರಾಮಾಯಣದ ಪ್ರಕಾರ, ಶ್ರೀರಾಮನು ಲಂಕೆಗೆ ಹೋಗುತ್ತಿದ್ದಾಗ ಧನುಷ್ಕೋಡಿಯಿಂದ ರಾಮಸೇತುವನ್ನು ನಿರ್ಮಿಸಿದನು. ಈ ಸ್ಥಳವು ಪ್ರಸ್ತುತ ತಮಿಳುನಾಡಿನ ರಾಮೇಶ್ವರಂಗೆ ಸಮೀಪದಲ್ಲಿದೆ.












Click it and Unblock the Notifications