ರಾಮ್ ರಹೀಮ್ ಬಂಧನ: ಹರ್ಯಾಣದಲ್ಲಿ ಭಾರೀ ಹಿಂಸಾಚಾರಕ್ಕೆ 30 ಬಲಿ
ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ದ ತಿರುಗಿಬಿದ್ದಿರುವ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್ ಅವರ ಅಭಿಮಾನಿಗಳ ಕಂಡುಕೇಳರಿಯದ ಹಿಂಸಾಚಾರಕ್ಕೆ ಹರ್ಯಾಣ ತತ್ತರ, ಮೂವತ್ತಕ್ಕೂ ಹೆಚ್ಚು ಬಲಿ.
ಚಂಡೀಗಢ, ಆ 25: ನ್ಯಾಯಾಲಯದ ತೀರ್ಪಿನ ವಿರುದ್ದ ತಿರುಗಿಬಿದ್ದಿರುವ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್ ಅವರ ಅಭಿಮಾನಿಗಳ ಕಂಡುಕೇಳರಿಯದ ಹಿಂಸಾಚಾರಕ್ಕೆ ಹರ್ಯಾಣ ತತ್ತರಿಸಿ ಹೋಗಿದೆ.
ತಾಜಾ ಮಾಹಿತಿಗಳ ಪ್ರಕಾರ, ಅಭಿಮಾನಿಗಳ ಅತಿರೇಕದ ಅಭಿಮಾನಕ್ಕೆ ಸುಮಾರು ಮೂವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿ ಸರ್ವನಾಶವಾಗಿದೆ. (ಲೈವ್: ಪಂಜಾಬ್, ಹರ್ಯಾಣದಲ್ಲಿ ಹಿಂಸಾಚಾರಕ್ಕೆ ಹಲವು ಬಲಿ)
ಕೇಂದ್ರ ಸರಕಾರದಿಂದ ಛೀಮಾರಿ ಹಾಕಿಸಿಕೊಂಡ ನಂತರ ಹಿಂಸಾಚಾರ ಪ್ರಕರಣದ ಕೇಂದ್ರ ಬಿಂದು ಪಂಚಕುಲಕ್ಕೆ ದೌಡಾಯಿಸಿರುವ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಪರಿಸ್ಥಿತಿಯನ್ನು ಖುದ್ದು ಅವಲೋಕಿಸುತ್ತಿದ್ದಾರೆ.
ಹದಿನೈದು ವರ್ಷದ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಡೇರಾ ಸಚ್ಚಾ ಸೌಧ ಸಂಸ್ಥೆಯ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅವರನ್ನು ಸೆಕ್ಷನ್ 376 ಮತ್ತು ಸೆಕ್ಷನ್ 506ರಡಿಯಲ್ಲಿ ಶುಕ್ರವಾರ (ಆ 25) ತಪ್ಪಿತಸ್ಥ ಎಂದು ಘೋಷಿಸಿದ್ದು, ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಹರ್ಯಾಣ, ಪಂಜಾಬ್ ಮತ್ತು ಉತ್ತರಪ್ರದೇಶದ ಹಲವೆಡೆ ಕರ್ಪ್ಯೂ ವಿಧಿಸಲಾಗಿದ್ದು, ಸುಮಾರು 250ಕ್ಕೂ ಅಧಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರಾಂ ರಹೀಂ ಅಭಿಮಾನಿಗಳ ವಿರುದ್ದ ರಾಷ್ಟ್ರಪತಿ, ಪ್ರಧಾನಿ ಆಕ್ರೋಶ, ಮುಂದೆ ಓದಿ..
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತೀವ್ರ ಬೇಸರ
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ದ ರಾಮ್ ರಹೀಂ ಹಿಂಬಾಲಕರ ಹಿಂಸಾಚಾರಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ವಿರುದ್ದ ಹಿಂಸಾಚಾರ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವುದು ತಪ್ಪು. ಎಲ್ಲರೂ ಶಾಂತಿ ಕಾಪಾಡಿಕೊಳ್ಳಿ.
ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಹೇಳಿಕೆ
ಪಂಜಾಬ್ ನಲ್ಲಿನ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿವರಿಸಿದ್ದೇನೆ. ಪಂಜಾಬ್ ನಲ್ಲಿ ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಹೇಳಿದ್ದಾರೆ.
ಭದ್ರತಾ ಇಲಾಖೆಯ ಅಧಿಕಾರಿಗಳ ಜೊತೆ ಪಿಎಂ ಮಾತುಕತೆ
ಹರ್ಯಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅವಲೋಕಿಸುತ್ತಿದ್ದೇನೆ. ಭದ್ರತಾ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಇಂದು ನಡೆದ ಹಿಂಸಾಚಾರ ವೈಯಕ್ತಿಕವಾಗಿ ನೋವನ್ನು ತಂದಿದೆ, ಎಲ್ಲರೂ ಶಾಂತಿಯಿಂದ ಇರಬೇಕು, ಪ್ರಧಾನಿ ಮೋದಿ.
ಹರ್ಯಾಣದ ಪಂಚಕುಲದಲ್ಲಿ ಸದ್ಯ ಎಲ್ಲಿ ನೋಡಿದರಲ್ಲಿ ಬೆಂಕಿ
ತನ್ನ ನಾಯಕನ ವಿರುದ್ದ ಬಂದಿರುವ ತೀರ್ಪಿನ ವಿರುದ್ದ ಹಿಂಸಾಚಾರಕ್ಕೆ ತಿರುಗಿ ಬಿದ್ದಿರುವ ರಾಮ್ ರಹೀಮ್ ಅಭಿಮಾನಿಗಳು, ಸರಕಾರೀ ಸೌಮ್ಯದ ಕಟ್ಟಡಗಳು, LIC ಕಚೇರಿ, ರೈಲ್ವೇ ಕಚೇರಿ, ದೂರವಾಣಿ ಕೇಂದ್ರಕ್ಕೆ ಬೆಂಕಿ ಹಚ್ಚಿದ್ದಾರೆ. ಇದಲ್ಲದೇ, ಹಲವು ಮಾಧ್ಯಮಗಳ ಓಬಿ ವ್ಯಾನ್ ಮತ್ತು ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಸದ್ಯಕ್ಕೆ, ಹರ್ಯಾಣದ ಪಂಚಕುಲದಲ್ಲಿ ಸದ್ಯ ಎಲ್ಲಿ ನೋಡಿದರಲ್ಲಿ ಬೆಂಕಿ.. ಬೆಂಕಿ..
ಡೇರಾ ಸಚ್ಚಾ ಆಶ್ರಮ ಸುತ್ತುವರಿದಿರುವ ಸೇನೆ
ರಾಮ್ ರಹೀಮ್ ಅವರ ಡೇರಾ ಸಚ್ಚಾ ಆಶ್ರಮದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿದ ಬೆನ್ನಲ್ಲೇ ಸೇನೆಯ 600 ಯೋಧರು ಡೇರಾ ಸಚ್ಚಾ ಆಶ್ರಮವನ್ನು ಸುತ್ತುವರೆದಿದ್ದು, ಆಶ್ರಮವನ್ನು ವಶಕ್ಕೆ ಪಡೆಯಲು ಸಜ್ಜಾಗಿದ್ದಾರೆ. ಆದರೆ, ಆಶ್ರಮವನ್ನು ಲಕ್ಷಾಂತರ ಅನುಯಾಯಿಗಳು ಸುತ್ತುವರಿದಿರುವುದರಿಂದ ಸೇನಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ.