ರಾಮ ರಹೀಮ್ ತೀರ್ಪು : ದೆಹಲಿ, ಯುಪಿಯಲ್ಲಿ ಹೈ ಅಲರ್ಟ್
ನವದೆಹಲಿ, ಆಗಸ್ಟ್. 25 : ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪಿನ ನಂತರ ಹಿಂಸಾಚಾರ ನಡೆಯುತ್ತಿದ್ದು, ದೆಹಲಿ, ಉತ್ತರ ಪ್ರದೇಶ ರಾಜ್ಯಗಳ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
Live: ರಾಮ್ ರಹೀಮ್ ಸಿಂಗ್ ಅನುಯಾಯಿಗಳಿಂದ ಹಿಂಸಾಚಾರ
ಸಿಬಿಐ ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ರಾಮ್ ರಹೀಮ್ ಸಿಂಗ್ ಅಭಿಮಾನಿಗಳು ಹಿಂಸಾಚಾರ ಆರಂಭಿಸಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ಪಂಜಾಬ್, ಹರ್ಯಾಣ ಗಡಿ ರಾಜ್ಯಗಳಾದ ಉತ್ತರ ಪ್ರದೇಶ, ದೆಹಲಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ.
ಹರ್ಯಾಣದಲ್ಲಿ ನಡೆಯುತ್ತಿರುವ ಹಿಂಸೆ ಅಕ್ಕ-ಪಕ್ಕದ ರಾಜ್ಯಗಳಿಗೆ ಹಬ್ಬದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ತೀರ್ಪಿನ ಬಳಿಕ ಸಿಂಗ್ ಅಭಿಮಾನಿಗಳು ಮಾಧ್ಯಮಗಳ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ಟೈರ್ ಗಳನ್ನು ಸುಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ದೇವಮಾನವ ರಾಮ್ ರಹೀಮ್ ಸಿಂಗ್ ದೋಷಿ
ರಾಮ್ ರಹೀಮ್ ಸಿಂಗ್ ಮುಖ್ಯಸ್ಥರಾಗಿರುವ ದೇರಾ ಸಚ್ಚಾ ಸೌದಾದದಲ್ಲಿ ಸಾಧ್ವಿಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದ ತೀರ್ಪು ಇಂದು ಪ್ರಕಟಗೊಂಡಿದ್ದು, ಸಿಂಗ್ ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 28ರಂದು ಪ್ರಕಟಿಸಲಾಗುತ್ತದೆ.