ಮಧ್ಯಪ್ರದೇಶ ರಾಮನವಮಿ ಘರ್ಷಣೆ: 12 ವರ್ಷದ ಬಾಲಕನಿಗೆ 2.9 ಲಕ್ಷ ದಂಡದ ನೋಟಿಸ್!
ಭೋಪಾಲ್, ಅ.19: ಮಧ್ಯಪ್ರದೇಶದ 12 ವರ್ಷದ ಬಾಲಕನಿಗೆ ಖಾರ್ಗೋನ್ನಲ್ಲಿ ನಡೆದ ರಾಮನವಮಿ ವೇಳೆ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಹಾನಿಗಾಗಿ 2.9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದ ದಿನದಿಂದ ಆಘಾತದಲ್ಲಿರುವ ಕುಟುಂಬ, ಆತನನ್ನು ಬಂಧಿಸುವ ಭಯವಿದೆ ಎಂದು ಹೇಳಿದೆ.
ಕೂಲಿ ಕಾರ್ಮಿಕನಾಗಿರುವ ಆತನ ತಂದೆ ಕಾಲು ಖಾನ್ ಅವರಿಗೆ 4.8 ಲಕ್ಷ ರೂಪಾಯಿ ನೀಡುವಂತೆ ರಾಜ್ಯ ಹಕ್ಕು ನ್ಯಾಯಮಂಡಳಿ ಕೋರಿದೆ. ಕುಟುಂಬದ ನೆರೆಹೊರೆಯವರು ಹೊಸ ಕಾನೂನಿನ ಅಡಿಯಲ್ಲಿ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದಾರೆ.
ಬಿಜೆಪಿ ಆಡಳಿತವಿರುವ ಮತ್ತೊಂದು ರಾಜ್ಯವಾದ ಉತ್ತರ ಪ್ರದೇದದ ಕಾನೂನನ್ನೇ ಅನುಕರಿಸುವ 'ಮಧ್ಯಪ್ರದೇಶ ಸಾರ್ವಜನಿಕ ಆಸ್ತಿಗೆ ಹಾನಿಯ ವಸೂಲಾತಿ ಕಾಯ್ದೆಯನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಅಂಗೀಕರಿಸಲಾಗಿದೆ. ಮುಷ್ಕರಗಳು, ಪ್ರತಿಭಟನೆಗಳು ಮತ್ತು ಗುಂಪು ಘರ್ಷಣೆಗಳ ಸಮಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಉದ್ದೇಶಪೂರ್ವಕ ಹಾನಿಯಿಂದಾಗುವ ನಷ್ಟವನ್ನು ತುಂಬಿಕೊಡುವಂತೆ ಪರಿಹಾರವನ್ನು ಪಡೆಯಲು ಕಾನೂನು ಸಹಾಯ ಮಾಡುತ್ತದೆ.
ರಾಮನವಮಿಯಂದು ಹಿಂಸಾಚಾರ: ಕತ್ತಿ ಹಿಡಿದವನಿಂದ ಪೊಲೀಸರ ಮೇಲೆ ಗುಂಡು
ಹಲವು ಸಂದರ್ಭಗಳಲ್ಲಿ ಉತ್ತರ ಪ್ರದೇಶದಲ್ಲಿ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳಿವೆ.
343ರಲ್ಲಿ 34 ದೂರಗಳನ್ನು ಸ್ವೀಕರಿಸಿರುವ ನ್ಯಾಯಮಂಡಳಿ
ರಾಮನವಮಿಯ ಘರ್ಷಣೆ ಬಳಿಕ ರಾಜ್ಯ ನ್ಯಾಯಮಂಡಳಿಗೆ 343 ದೂರುಗಳು ಬಂದಿವೆ. ಅದರಲ್ಲಿ ಅದು ಕೇವಲ 34 ಅನ್ನು ಸ್ವೀಕರಿಸಿದೆ. ಇದುವರೆಗೆ, ಇದು ಆರು ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಇದರಲ್ಲಿ ನಾಲ್ಕು ಮಂದಿ ಹಿಂದೂಗಳು ಮತ್ತು ಇಬ್ಬರು ಮುಸ್ಲಿಮರು ಸೇರಿದ್ದಾರೆ. 50 ಮಂದಿಯಿಂದ 7.46 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.
ಎಪ್ರಿಲ್ 10 ರಂದು ನಡೆದ ರಾಮನವಮಿ ಮೆರವಣಿಗೆ ವೇಳೆ ಗುಂಪು ಹಲ್ಲೆ ನಡೆಸಿದಾಗ ತನ್ನ ಆಸ್ತಿಗೆ ಹಾನಿಯಾಗಿದೆ ಎಂದು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ದೂರುದಾರ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
'ಗಲಭೆ ನಡೆದಾಗ ನಾವು ಮಲಗಿದ್ದೆವು, ನನ್ನ ಮಗ ಅಪ್ರಾಪ್ತ'
ಬಾಲಕನಿಗೆ ಕಳುಹಿಸಲಾದ ನೋಟಿಸ್ನಲ್ಲಿ ಆತನಿಗೆ 12 ವರ್ಷ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜೊತೆಗೆ 2.9 ಲಕ್ಷ ರೂಪಾಯಿ ಮೊತ್ತದ ಹಾನಿಗೆ ಆತನನ್ನು ಹೊಣೆಗಾರನಾಗಿ ಮಾಡಲಾಗಿದೆ. ಬಾಲಕ ಮತ್ತು ಇತರರು ತಮ್ಮ ಮನೆಯನ್ನು ದರೋಡೆ ಮಾಡಿ ಧ್ವಂಸ ಮಾಡಿದ್ದಾರೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಬಾಲಕ ಮತ್ತು ಅವನ ತಂದೆಯಲ್ಲದೆ, ವಯಸ್ಕರಾದ ಇತರ ಆರು ಮಂದಿಗೆ ನೋಟಿಸ್ ಕಳುಹಿಸಲಾಗಿದೆ.
"ನನ್ನ ಮಗ ಅಪ್ರಾಪ್ತ. ಗಲಭೆ ನಡೆದಾಗ ನಾವು ಮಲಗಿದ್ದೆವು, ನಮಗೆ ನ್ಯಾಯ ಬೇಕು" ಎಂದು ಕಾಲು ಖಾನ್ ಹೇಳಿದ್ದಾರೆ. ಆತನ ಪತ್ನಿ ರಾಣು "ನನ್ನ ಮಗ ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂಬ ಆತಂಕದಲ್ಲಿಯೇ ಇದ್ದಾನೆ" ಎಂದು ಹೇಳಿದ್ದಾರೆ.
ಕುಟುಂಬದ ಅರ್ಜಿ ವಜಾಗೊಳಿಸಿದ್ದ ಇಂದೋರ್ ಪೀಠ
ನೋಟಿಸ್ ರದ್ದುಗೊಳಿಸುವಂತೆ ಕೋರಿ ಕುಟುಂಬವು ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಸೆಪ್ಟೆಂಬರ್ 12 ರಂದು ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ, ಯಾವುದೇ ಆಕ್ಷೇಪಣೆಗಳಿದ್ದರೇ ನ್ಯಾಯಮಂಡಳಿಗೆ ಸಲ್ಲಿಸಬೇಕು ಎಂದು ಹೇಳಿದೆ. "ಆಕ್ಷೇಪಣೆ ಸಲ್ಲಿಸಿದರೆ, ಅದನ್ನು ನ್ಯಾಯಮಂಡಳಿಯು ಕಾನೂನಿನ ಪ್ರಕಾರ ಪರಿಗಣಿಸಿ ನಿರ್ಧರಿಸುತ್ತದೆ" ಎಂದು ಆದೇಶದಲ್ಲಿ ತಿಳಿಸಿದೆ.
ನ್ಯಾಯಮಂಡಳಿಯು "ಕಾನೂನಿನ ಅಗತ್ಯಗಳನ್ನು ಅನ್ವಯಿಸದೆ ನಿರಂಕುಶವಾಗಿ ವರ್ತಿಸಿದೆ" ಎಂದು ಕುಟುಂಬದ ಪರ ವಕೀಲರು ಆರೋಪಿಸಿದ್ದಾರೆ.
ನ್ಯಾಯಮಂಡಳಿಯು ಬಿಜೆಪಿಯ ವಿಸ್ತೃತ ವಿಭಾಗ; ಕಾಂಗ್ರೆಸ್
ಹೊಸ ಕಾನೂನಿನ ಪ್ರಕಾರ, 15 ದಿನಗಳಲ್ಲಿ ಪರಿಹಾರವನ್ನು ಪಾವತಿಸದಿದ್ದರೆ, ಆರೋಪಿಯು ಶೇಕಡಾ 6 ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನ್ಯಾಯಾಧಿಕರಣವು ಸಿವಿಲ್ ನ್ಯಾಯಾಲಯಕ್ಕೆ ಸಮಾನವಾದ ಅಧಿಕಾರವನ್ನು ಹೊಂದಿದೆ. ಆರೋಪಿಗಳಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಹೊಸ ಕಾನೂನು ಅವಕಾಶ ನೀಡುತ್ತದೆ.
"ನ್ಯಾಯಮಂಡಳಿಯು ಬಿಜೆಪಿಯ ವಿಸ್ತೃತ ವಿಭಾಗದಂತೆ ಕಾರ್ಯನಿರ್ವಹಿಸುತ್ತಿದೆ. 12 ವರ್ಷದ ಮಗುವಿಗೆ ಹೇಗೆ ನ್ಯಾಯಮಂಡಳಿ ನೋಟಿಸ್ ನೀಡುತ್ತದೆ" ಎಂದು ಕಾಂಗ್ರೆಸ್ ವಕ್ತಾರ ಕೆಕೆ ಮಿಶ್ರಾ ಕಿಡಿಕಾರಿದ್ದಾರೆ.
ಎ.10 ರಂದು ಖಾರ್ಗೋನ್ನಲ್ಲಿ ರಾಮನವಮಿ ಮೆರವಣಿಗೆಗಳ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದ್ದವು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಹಿಂಸಾಚಾರದ ಸಂದರ್ಭದಲ್ಲಿ ಹಾನಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಾತಿ ಕಾಯಿದೆ-2021 ರ ನಿಬಂಧನೆಗಳ ಪ್ರಕಾರ ನ್ಯಾಯಮಂಡಳಿಯನ್ನು ರಚಿಸಲಾಗಿದೆ.