ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕಾದ ಉಸ್ತುವಾರಿಯೇ ಸೋಲಿನ ಸುಳಿಯಲ್ಲಿ!
ಇದೇ ಬರುವ ಶುಕ್ರವಾರ (ಜೂನ್ 10) ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಕರ್ನಾಟಕ, ರಾಜಸ್ಥಾನ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿ ಇರುವುದರಿಂದ ಚುನಾವಣೆ ರಂಗೇರಿದೆ. ಚುನಾವಣಾ ಫಲಿತಾಂಶ ಅಂದೇ ಹೊರಬೀಳಲಿದೆ.
ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಲಿದೆ. ಆದರೆ, ಉಳಿದ ಇನ್ನೊಂದು ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಇದೇ ರೀತಿಯ ಪರಿಸ್ಥಿತಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಕೂಡಾ. ಕ್ರಾಸ್ ವೋಟಿಂಗ್ ಸಾಧ್ಯತೆ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟಿಗೆ ಕಳುಹಿಸಿದೆ. ಸಾಮಾನ್ಯವಾಗಿ ಬಿಜೆಪಿಯ ಆಮಿಷದಿಂದ ತಪ್ಪಿಸಿಕೊಳ್ಳಲು ಇತರ ಪಕ್ಷಗಳು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದವು.
ರಾಜಸ್ಥಾನದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸದ್ಯದ ಶಾಸಕರ ಬಲದ ಆಧಾರದಲ್ಲಿ ಕಾಂಗ್ರೆಸ್ ಎರಡು ಮತ್ತು ಬಿಜೆಪಿ ಒಂದು ಸ್ಥಾನವನ್ನು ಗೆಲ್ಲಬಹುದಾಗಿದೆ. ಆದರೆ, ಕಾಂಗ್ರೆಸ್ ಇನ್ನೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿಯ ಬೆಂಬಲದೊಂದಿಗೆ ವಾಣಿಜ್ಯೋದ್ಯಮಿ ಸ್ಪರ್ಧೆಯಲ್ಲಿರುವುದರಿಂದ ಅಲ್ಲಿ ಯಾರ ಗೆಲವೂ ಸುಲಭವಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಕೆಪಿಸಿಸಿ ಉಸ್ತುವಾರಿಯೂ ಅಲ್ಲಿ ಮೂರು ಅಭ್ಯರ್ಥಿಗಳಲ್ಲೊಬ್ಬರು.

ಕಾಂಗ್ರೆಸ್ಸಿನ ಮೂವರು ಅಭ್ಯರ್ಥಿಗಳು ಗೆಲ್ಲುವುದು ಸುಲಭವಲ್ಲ
ರಾಜಸ್ಥಾನದಲ್ಲಿ ಉದ್ಯಮಿ ಸುಭಾಷ್ ಚಂದ್ರ ಕಣದಲ್ಲಿ ಇರುವುದರಿಂದ ಕಾಂಗ್ರೆಸ್ಸಿನ ಮೂವರು ಅಭ್ಯರ್ಥಿಗಳು ಗೆಲ್ಲುವುದು ಸುಲಭವಲ್ಲ ಎನ್ನುವ ವಾತಾವರಣವಿದೆ. ಸುಭಾಷ್ ಚಂದ್ರ ಅವರಿಗೆ ಬಿಜೆಪಿಯ ಬೆಂಬಲವಿದೆ ಎಂದು ಹೇಳಲಾಗುತ್ತಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿದೆ. ಅಲ್ಲಿ ಕಾಂಗ್ರೆಸ್ಸಿನಿಂದ ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿಯಾಗಿರುವ ಸುರ್ಜೇವಾಲ
ಕಳೆದ ಬಾರಿ ಸುಭಾಷ್ ಚಂದ್ರ ಅವರು ಹರ್ಯಾಣದಿಂದ ಸ್ಪರ್ಧಿಸಿ ಕಾಂಗ್ರೆಸ್ ಶಾಸಕರ ಕ್ರಾಸ್ ವೋಟಿಂಗ್ ನಿಂದ ಗೆಲುವು ಸಾಧಿಸಿದ್ದರು. ರಾಜಸ್ಥಾನ ಕಾಂಗ್ರೆಸ್ಸಿಗೆ ಈಗ ಅದೇ ತಲೆಬಿಸಿ ಕಾಡುತ್ತಿದೆ. ಇದರಿಂದಾಗಿ, ರಣದೀಪ್ ಸುರ್ಜೇವಾಲ ಮೊದಲು ತಮ್ಮ ಗೆಲುವಿಗೆ ಪ್ರಯತ್ನಿಸುವುದು ಮುಖ್ಯವಾಗಿದೆ. ಹಾಗಾಗಿ, ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿಯೂ ಆಗಿರುವ ಸುರ್ಜೇವಾಲಗೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಕಡೆ ಗಮನಕೊಡಲು ಆಗುತ್ತಿಲ್ಲ. ಇದರಿಂದಾಗಿ, ಕೆ. ಸಿ. ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಸುಭಾಷ್ ಚಂದ್ರ ಗೆಲುವಿನ ಲೆಕ್ಕಾಚಾರ
ರಾಜಸ್ಥಾನದಲ್ಲಿ 108 ಶಾಸಕರನ್ನು ಕಾಂಗ್ರೆಸ್ ಹೊಂದಿದೆ, ಎರಡು ಶಾಸಕರಿಗೆ ಮತ ಚಲಾಯಿಸಿದ ನಂತರ 26 ಮತಗಳು ಉಳಿಯಲಿವೆ. 41 ಮತ ಜಯಗಳಿಸಲು ಬೇಕಾಗಿರುವುದರಿಂದ ಮೂರನೇ ಅಭ್ಯರ್ಥಿ ಗೆಲುವಿಗೆ 15 ಮತಗಳು ಕಮ್ಮಿಯಾಗಲಿವೆ. ಇನ್ನೊಂದು ಕಡೆ, ಬಿಜೆಪಿ 71 ಶಾಸಕರ ಬಲವನ್ನು ಹೊಂದಿದೆ. ತನ್ನ ಅಭ್ಯರ್ಥಿಗೆ ಮತ ಚಲಾಯಿಸಿದ ನಂತರ 30 ಮತಗಳು ಬಿಜೆಪಿಗೆ ಉಳಿಯಲಿವೆ. ಈ ಮತಗಳು ಮತ್ತು ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಸುಭಾಷ್ ಚಂದ್ರ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.

ಸಿಎಂ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಬಣ ರಾಜಕೀಯ
ಆದರೆ, ಕಾಂಗ್ರೆಸ್ ತನಗೆ 126 ಶಾಸಕರ ಬೆಂಬಲವಿದೆ ಮತ್ತು ತಮ್ಮ ಮೂವರೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎನ್ನುವ ವಿಶ್ವಾಸದ ಮಾತನ್ನಾಡುತ್ತಿವೆ. ಆದರೆ, ಕಾಂಗ್ರೆಸ್ ಲೆಕ್ಕಾಚಾರ ಅಷ್ಟು ಸುಲಭವಲ್ಲ ಎನ್ನುವುದಕ್ಕೆ ಕಾರಣ ಅಲ್ಲಿ ತೀವ್ರವಾಗಿರುವ ಸಿಎಂ ಗೆಹ್ಲೋಟ್ ಮತ್ತು ವರ್ಚಸ್ವೀ ನಾಯಕ ಸಚಿನ್ ಪೈಲಟ್ ನಡುವಿನ ಬಣ ರಾಜಕೀಯ. ಬಿಜೆಪಿಯಿಂದ ಅಲ್ಲಿ ಘನಶ್ಯಾಮ್ ತಿವಾರಿ ನಾಮಪತ್ರ ಸಲ್ಲಿಸಿದ್ದಾರೆ.












Click it and Unblock the Notifications