ಮನೆಗೆ ನುಗ್ಗಿದವರ ಕ್ರೌರ್ಯ: ಪತಿ ಎದುರೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ!
ಜೈಪುರ್, ನವೆಂಬರ್ 12: ಜಗತ್ತಿನಲ್ಲಿ ಮಾನವೀಯತೆಯೇ ಮರೆಯಾಗುತ್ತಿದೆಯಾ ಎಂಬ ಅನುಮಾನವನ್ನು ಮೂಡಿಸುವ ಘಟನೆಗಳು ದಿನಂಪ್ರತಿ ವರದಿ ಆಗುತ್ತಿವೆ. ಅಂಥದ್ದೇ ಒಂದು ಘಟನೆಯು ರಾಜಸ್ಥಾನದಲ್ಲಿ ವರದಿಯಾಗಿದೆ.
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬಳ ಮೇಲೆ ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದಾರೆ. ಆಕೆಯ ಪತಿಯ ಎದುರೇ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ಹಿರಿಯ ಐಎಎಸ್ ಅಧಿಕಾರಿ ಅಮಾನತು
ಮನೆ ದರೋಡೆ ಮಾಡುವುದಕ್ಕಾಗಿ ನುಗ್ಗಿದ ಕಳ್ಳರು, ತದನಂತರದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಪತಿಯ ಕಣ್ಣೆದುರಿನಲ್ಲೇ ಪತ್ನಿಯ ಮೇಲೆ ದುರುಳರು ಅತ್ಯಾಚಾರ ನಡೆಸಿದ್ದು, ಈ ಪೈಕಿ ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದೊಬ್ಬ ಆರೋಪ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಘಟನೆ ಕುರಿತು ಒಂದು ವರದಿ ಇಲ್ಲಿದೆ ಓದಿ.
ಮನೆಯಿಂದ ಹೊರಬಾರದ ಸ್ಥಿತಿಗೆ ತಲುಪಿದ್ದ ದಂಪತಿ
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಕಳೆದ ಬುಧವಾರವೇ ಈ ಅತ್ಯಾಚಾರದ ಘಟನೆ ನಡೆದಿದೆ. ಆದರೆ ತೀವ್ರ ಆಘಾತಕ್ಕೊಳಗಾದ ದಂಪತಿಯು ಗುರುವಾರ ಇಡೀ ದಿನ ಮನೆಯಲ್ಲೇ ಮಂಕು ಬಡಿದವರಂತೆ ಕುಳಿತು ಬಿಟ್ಟಿದ್ದರು. ಶುಕ್ರವಾರದ ವೇಳೆಗೆ ಜಾಗೃತರಾದ ದಂಪತಿಯು ಕಳೆದ ದಿನ ರಾತ್ರಿ ನಡೆದ ಘಟನೆಯ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದರು. ಈ ಬಗ್ಗೆ ಸ್ವತಃ ಪೊಲೀಸರೇ ಹೇಳಿದ್ದಾರೆ.
ಮನೆ ದರೋಡೆಗಾಗಿ ಮನೆಗೆ ನುಗ್ಗಿದ ಚೋರರು
ಕಳೆದ ಬುಧವಾರ ರಾತ್ರಿ ದಂಪತಿ ಮಲಗಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮನೆಗೆ ನುಗ್ಗಿ ನಾಲ್ವರು ಆರೋಪಿಗಳು ಹಣವನ್ನು ನೀಡುವಂತೆ ಡಿಮ್ಯಾಂಡ್ ಇಟ್ಟರು. ಈ ವೇಳೆ ದಂಪತಿಯು ತಮ್ಮಲ್ಲಿದ್ದ 1400 ರೂಪಾಯಿ ಹಣವನ್ನು ನೀಡಿದರು. ಅದಾಗ್ಯೂ, ಮನೆಯನ್ನೆಲ್ಲ ಹುಡುಕಾಡಿದ ದರೋಡೆಕೋರರಿಗೆ ಕೆಲವು ಬೆಳ್ಳಿ ವಸ್ತುಗಳ ಹೊರತಾಗಿ ಬೇರೇನೂ ಸಿಗಲಿಲ್ಲ. ಆಗ ಅವರ ಕಣ್ಣು ಮಹಿಳೆಯ ಮೇಲೆ ಬಿದ್ದಿತ್ತು.
ಪತಿ ಎದುರಿನಲ್ಲೇ ಪತ್ನಿ ಮೇಲೆ ನಡೆಯಿತು ಅತ್ಯಾಚಾರ
ಮಹಿಳೆಯ ಪತಿ ಕಾವಲುಗಾರನಾಗಿ ಕೆಲಸ ಮಾಡುವ ಬಡ ಕುಟುಂಬದ ವ್ಯಕ್ತಿಯಾಗಿದ್ದಾನೆ. ಹೀಗಿರುವಾಗ ದರೋಡೆಕೋರರಿಗೆ 1400 ರೂಪಾಯಿ, ಕೆಲವು ಬೆಳ್ಳಿ ವಸ್ತುಗಳ ಹೊರತಾಗಿ ಬೇರೇನೂ ಸಿಗಲಿಲ್ಲ, ಆಗ ಅವರು ಮಹಿಳೆಯ ಮೇಲೆ ಕೆಟ್ಟಗಣ್ಣು ಬೀರಿದರು. ಗಂಡನ ಎದುರಿನಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಪಿಂಡ್ವಾರಾ) ಜೇತು ಸಿಂಗ್ ಹೇಳಿದ್ದಾರೆ.
ದೂರು ದಾಖಲಾದ 24 ಗಂಟೆಯೊಳಗೆ ಆರೋಪಿ ಅಂದರ್!
ಶುಕ್ರವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಂಪತಿಯು ಪ್ರಕರಣವನ್ನು ದಾಖಲಿಸಿದರು. ಅದಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಶನಿವಾರ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ಕನೆ ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಪಿಂಡ್ವಾರಾ) ಜೇತು ಸಿಂಗ್ ಮಾಹಿತಿ ನೀಡಿದ್ದಾರೆ.