Rajasthan Election 2023: ಚುನಾವಣಾ ಪೋಸ್ಟರ್ಗಳಲ್ಲಿ ರೈತನ ಫೋಟೊ ದುರ್ಬಳಕೆ ಮಾಡಿಕೊಂಡ ಬಿಜೆಪಿ- ಕೇಸ್ ಜಡಿದ ಸಂತ್ರಸ್ತ
ಜೈಪುರ, ಅಕ್ಟೋಬರ್ 11: ರಾಜಸ್ಥಾನ ಚುನಾವಣೆಗೆ ದಿನಾಂಕಗಳು ಪ್ರಕಟಗೊಂಡಿವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ಆರಂಭಿಸಿವೆ. ಇದೇ ಬಿಜೆಪಿ ಯಡವಟ್ಟನ್ನು ಮಾಡಿಕೊಂಡಿದೆ. ಚುನಾವಣಾ ಪೋಸ್ಟರ್ಗಳಲ್ಲಿ ರೈತರೊಬ್ಬರ ಫೋಟೊವನ್ನು ದುರ್ಬಳಿಕೆ ಮಾಡಿಕೊಳ್ಳುವ ಮೂಲಕ ತೀವ್ರ ಮುಜುಗರಕ್ಕೆ ಒಳಗಾಗಿದೆ.
ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯು ತಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಂಡಿದೆ ಎಂದು 70 ವರ್ಷದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ಸಾಲ ಮಾಡಿದ ರೈತ ಜಮೀನು ಹರಾಜು ಮಾಡಿದ್ದಾರೆ ಎಂದು ಈ ಪೋಸ್ಟರ್ನಲ್ಲಿ ತಮ್ಮನ್ನು ಬಿಂಬಿಸಲಾಗಿದೆ ಎಂದು ಹಿರಿಯ ವ್ಯಕ್ತಿ ಆರೋಪಿಸಿದ್ದಾರೆ. ಈ ಸಂಬಂಧ ಪಕ್ಷದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜೈಸಲ್ಮೇರ್ ಜಿಲ್ಲೆಯ ರಾಮ್ದೇವ್ರಾ ನಿವಾಸಿ ಮಧುರಾಮ್ ಜೈಪಾಲ್ ಅವರು ದೂರು ನೀಡಿದ್ದಾರೆ. ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
'ಬಿಜೆಪಿ ಪಕ್ಷವು ತನ್ನನ್ನು ನಿಂದಿಸಿ ಅವಮಾನಿಸಿದೆ. ಜನರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹೀಗಾಗಿ ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದೇನೆ' ಎಂದು ಜೈಪಾಲ್ ಹೇಳಿದ್ದಾರೆ.
ನನ್ನ ಜಮೀನು ಹರಾಜಾಗಿಲ್ಲ. ನಾನು ಸಾಲವನ್ನೂ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಧುರಾಮ್ ಜೈಪಾಲ್ ಅವರು ರೈತಾಪಿ ಕುಟುಂಬಕ್ಕೆ ಸೇರಿದವರು. ಸುಮಾರು 200 ಬಿಘಾ ಭೂಮಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ತನ್ನ ಚುನಾವಣಾ ಪ್ರಚಾರದ ಭಾಗವಾಗಿ 'ನಹೀ ಸಹೇಗಾ ರಾಜಸ್ಥಾನ್' (ರಾಜಸ್ಥಾನ ಸಹಿಸುವುದಿಲ್ಲ) ಎಂಬ ಶೀರ್ಷಿಕೆಯೊಂದಿಗೆ ಜೈಪಾಲ್ ಅವರ ಚಿತ್ರವನ್ನು ಪೋಸ್ಟರ್ನಲ್ಲಿ ಹಾಕಿದೆ. ರಾಜ್ಯದ 19000 ಕ್ಕೂ ಹೆಚ್ಚು ರೈತರ ಜಮೀನುಗಳನ್ನು ಹರಾಜು ಮಾಡಲಾಗಿದೆ ಎಂದೂ ಬಿಜೆಪಿ ಆರೋಪಿಸಿದೆ.
ಜೈಪಾಲ್ ಅವರ ದೂರಿನ ಆಧಾರದ ಮೇಲೆ, ರಾಮದೇವ್ರಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖಮ್ಮರಂ ಬಿಷ್ಣೋಯ್ ಹೇಳಿದ್ದಾರೆ.

ಜೋಧ್ಪುರ ಮತ್ತು ಜೈಪುರದ ಪೋಸ್ಟರ್ಗಳಲ್ಲಿ ಬಿಜೆಪಿ ತಮ್ಮ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಜೈಪಾಲ್ ದೂರಿದ್ದಾರೆ.
ಬಿಜೆಪಿ ತಮ್ಮ ಮಾನಹಾನಿ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೈಪಾಲ್ ಒತ್ತಾಯಿಸಿದೆ ಎಂದು ಬಿಷ್ಣೋಯ್ ಹೇಳಿದ್ದಾರೆ.
ನಾವು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೋಸ್ಟರ್ಗಳನ್ನು ತೆಗೆದುಹಾಕುವಂತೆ ಮಾಡಿದ ಮನವಿಯನ್ನು ಬಿಜೆಪಿ ನಾಯಕರು ನಿರ್ಲಕ್ಷಿಸಿದ್ದಾರೆ. ಆ ನಂತರ ಜೈಪಾಲ್ ದೂರು ದಾಖಲಿಸಲು ಮುಂದೆ ಬಂದಿದ್ದಾರೆ ಎಂದು ಬಿಷ್ಣೋಯ್ ಹೇಳಿದ್ದಾರೆ.
ಭಾನುವಾರ ಜೈಪಾಲ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಎಲ್ಲಾ ಪೋಸ್ಟರ್ಗಳನ್ನು ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿದ ಗೆಹ್ಲೋಟ್, ಜೈಪಾಲ್ ಅವರೊಂದಿಗಿನ ಭೇಟಿಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications