ಜನಾಕ್ರೋಶ ರ್ಯಾಲಿಯಲ್ಲಿ ಮೋದಿ ವಿರುದ್ಧ ಗುಡುಗಿದ ರಾಹುಲ್
ನವದೆಹಲಿ, ಏಪ್ರಿಲ್ 29: ರಾಷ್ಟ್ರ ರಾಜಧಾನಿಯ ರಾಮ್ ಲೀಲಾ ಮೈದಾನದಲ್ಲಿ ಇಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ 'ಜನಾಕ್ರೋಶ ರ್ಯಾಲಿ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೈತರ ಸಮಸ್ಯೆ ಬಗ್ಗೆ ಮತ್ತು ದೇಶದ ಸಂಸ್ಥೆಗಳು ದುರ್ಬಲವಾಗುತ್ತಿರುವುದರ ಬಗ್ಗೆ 'ಚೌಕಿದಾರ್' ಮೌನವಾಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
"ಚೀನಾ ಭೇಟಿ ವೇಳೆ ದೋಕ್ಲಾಂ ವಿಚಾರದ ಬಗ್ಗೆ ಒಂದೇ ಒಂದು ಶಬ್ದವನ್ನೂ ಮೋದಿ ಪ್ರಸ್ತಾಪಿಸಿಲ್ಲ. ಇವರೆಂಥಾ ಪ್ರಧಾನಿ," ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
"ಪ್ರಧಾನಿ ಮೋದಿ ನಿರುದ್ಯೋಗ, ಗಬ್ಬರ್ ಸಿಂಗ್ ಟ್ಯಾಕ್ಸ್ ನೀಡಿದರು. ಅವರ ಅವಧಿಯಲ್ಲಿ ಬಿಜೆಪಿ ಶಾಸಕ ಮಹಿಳೆಯ ಮೇಲೆ ದೌರ್ಜರ್ನ್ಯ ಎಸಗುತ್ತಾನೆ," ಎಂದು ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

"ಕಾಂಗ್ರೆಸ್ ಈ ದೇಶದಲ್ಲಿ ಪ್ರೀತಿ ಹರಡಿ ಎಲ್ಲಾ ಸಮುದಾಯಗಳನ್ನು ಕಳೆದ 70 ವರ್ಷಗಳಲ್ಲಿ ಒಟ್ಟುಗೂಡಿಸಿತ್ತು. ಬಿಜೆಪಿಯಂತೆ ದಲಿತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿಲ್ಲ. ಇವತ್ತು ರೈತರು ಒತ್ತಡದಲ್ಲಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ. ಬದಲು ಕಾರ್ಪೊರೇಟ್ ಸಂಸ್ಥೆಗಳ ಸಾಲವನ್ನು ಮನ್ನಾ ಮಾಡಿದ್ದಾರೆ," ಎಂದರು.
"ಕೃಷಿಕರ ಸಮಸ್ಯೆ ಬಗ್ಗೆ ನಾನು ಅವರನ್ನು ಭೇಟಿಯಾದೆ. ಆದರೆ ಅವರು ನಮ್ಮ ಮಾತು ಕೇಳಲು ಸಿದ್ಧವೇ ಇರಲಿಲ್ಲ," ಎಂದು ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಕರ್ನಾಟಕ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಢದ ವಿಧಾನಸಭೆಯಲ್ಲಿ ಗೆಲುವು ಸಾಧಿಸಲಿದೆ. ಜೊತೆಗೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದೆ ಎಂದು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಹಿರಿಯ ನಾಯಕರು ಮತ್ತು ಯುವಕರು ಇಬ್ಬರನ್ನೂ ಗೌರವಿಸುತ್ತಿದೆ. ಈ ಮೂಲಕ ಪಕ್ಷದಲ್ಲಿ ಭಿನ್ನ ಅಭಿಪ್ರಾಯಗಳು ರೂಪುಗೊಳ್ಳುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಿಂಹದ ಮರಿಗಳಿಗೆ ಹೋಲಿಸಿದ ರಾಹುಲ್ ಗಾಂಧಿ, ಕಾರ್ಯಕರ್ತರು ಸತ್ಯ ಮತ್ತು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಬಣ್ಣಿಸಿದರು.
ಹುಬ್ಬಳ್ಳಿಗೆ ಬರುವ ವೇಳೆ ವಿಮಾನದಲ್ಲಿ ಕಾಣಿಸಿಕೊಂಡ ದೋಷವನ್ನು ಪ್ರಸ್ತಾಪಿಸಿದ ರಾಹುಲ್, ಈ ಸಂದರ್ಭದಲ್ಲಿ ನಾನು ದೇವರನ್ನು ನೆನಪಿಸಿಕೊಂಡೆ ಎಂದರು. ಜೊತೆಗೆ ಕರ್ನಾಟಕ ಚುನಾವಣೆ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದಾಗಿ ಹೇಳಿದರು.












Click it and Unblock the Notifications