ಅಮೆರಿಕದಲ್ಲಿ ರಾಹುಲ್: ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ವ್ಯಂಗ್ಯ
ರಾಹುಲ್ ಗಾಂಧಿ ವಂಶಪಾರಂಪರ್ಯ ಸಾಮ್ರಾಜ್ಯದ ವಿಫಲ ರಾಜಕಾರಣಿ. ತನಗಿರುವ ರಾಜಕೀಯ ಅಪ್ರಬುದ್ದತೆಯನ್ನು ಅಮೆರಿಕಾದಲ್ಲಿ ಅನಾವರಣ ಮಾಡುತ್ತಿದ್ದಾರೆ ಎನ್ನುವ ಎನ್ನುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ತಿರುಗೇಟು.
ಎರಡು ವಾರದ ಅಮೆರಿಕಾ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಡಿರುವ ಮಾತಿಗೆ ಬಿಜೆಪಿ ತಿರುಗೇಟು ನೀಡಿದೆ.
ನವದೆಹಲಿಯಲ್ಲಿ ಮಂಗಳವಾರ (ಸೆ 12) ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಂಶಪಾರಂಪರ್ಯ ಸಾಮ್ರಾಜ್ಯದ ವಿಫಲ ರಾಜಕಾರಣಿ. ತನಗಿರುವ ರಾಜಕೀಯ ಅಪ್ರಬುದ್ದತೆಯನ್ನು ಅಮೆರಿಕಾದಲ್ಲಿ ಅನಾವರಣ ಮಾಡುತ್ತಿದ್ದಾರೆಂದು ಇರಾನಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಮಾತಿನ ಚಾತುರ್ಯ, ಮೊನಚು ವ್ಯಂಗ್ಯ
ಸ್ಮೃತಿ ಇರಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಾಮಾಜಿಕ ತಾಣದ ಮುಖ್ಯಸ್ಥೆ, ಮಾಜಿ ಚಿತ್ರನಟಿ ರಮ್ಯಾ, ಇದೇ ವಿಫಲ ರಾಜಕಾರಣಿಯ ಎದುರಲ್ಲವೇ ನೀವು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಎಂದು ವ್ಯಂಗ್ಯವಾಡಿದ್ದಾರೆ.
ಅಮೆರಿಕಾದ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ವಂಶಪಾರಂಪರ್ಯ ರಾಜಕಾರಣ ಎನ್ನುವುದು ಭಾರತದಲ್ಲಿ ಹೊಸದಲ್ಲ ಎಂದು ಅಖಿಲೇಶ್ ಯಾದವ್, ಅಭಿಷೇಕ್ ಬಚ್ಚನ್, ಮುಖೇಶ್ ಅಂಬಾನಿ ಮುಂತಾದವರನ್ನು ಉಲ್ಲೇಖಿಸಿ ಹೇಳಿದ್ದರು.
ಕಾಂಗ್ರೆಸ್ಸಿನಂತೆ ಬಿಜೆಪಿ ಪಕ್ಷ ಯಾವುದೇ ವಂಶಪಾರಂಪರ್ಯ ರಾಜಕಾರಣಿಗಳಿಂದ ಅಸ್ತಿತ್ವದಲ್ಲಿಲ್ಲ. ರಾಷ್ಟ್ರಪತಿಯಾಗಲಿ, ಉಪರಾಷ್ಟ್ರಪತಿಯಾಗಲಿ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಯಾವುದೇ ರಾಜಕೀಯ ಕುಟುಂಬದ ಹಿನ್ನಲೆಯವರಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಮುಂದೆ ಓದಿ
ಎಐಸಿಸಿ ಉಪಾಧ್ಯಕ್ಷರಿಗೆ ಚಿಂತನಾ ಶಕ್ತಿಯಿಲ್ಲ
ರಾಹುಲ್ ಗಾಂಧಿಗೆ ತಿಳುವಳಿಕೆ, ಚಿಂತನಾ ಶಕ್ತಿ ಕಮ್ಮಿಯಿರುವುದರಿಂದ ಪ್ರಧಾನಿ ಮೋದಿಯ ಎಲ್ಲಾ ಕೆಲಸಗಳನ್ನು ಟೀಕೆ ಮಾಡುತ್ತಾರೆ. ಜಮ್ಮು, ಕಾಶ್ಮೀರ ಸೇರಿದಂತೆ ದೇಶದಲ್ಲಿನ ಆಗುಹೋಗುಗಳ ಬಗ್ಗೆ ರಾಹುಲ್ ಗಾಂಧಿಗೆ ಅರಿವಿಲ್ಲ. ಹಾಗಾಗಿ ಏನೇನೋ ಹೇಳಿಕೆಯನ್ನು ನೀಡುತ್ತಾರೆ - ಸ್ಮೃತಿ ಇರಾನಿ
ಬಿಜೆಪಿಯ ಸಾಮಾಜಿಕ ಜಾಲತಾಣ ನನ್ನ ಹಿಂದೆ ಬಿದ್ದಿದೆ
ಬಿಜೆಪಿಯ ಸಾಮಾಜಿಕ ಜಾಲತಾಣ ನನ್ನ ಹಿಂದೆ ಬಿದ್ದಿದೆ. ನನ್ನ ಬಗ್ಗೆ ಇಲ್ಲಸಲ್ಲದ ಸಂಗತಿಗಳನ್ನು ಹಬ್ಬಿಸುತ್ತಿರುತ್ತಾರೆ, ಆರೋಪ ಮಾಡುತ್ತಿರುತ್ತಾರೆ. ನಾನೊಬ್ಬ ರಾಜಕೀಯಕ್ಕೆ ಒಗ್ಗದ ರಾಜಕಾರಣಿ, ನಾನೊಬ್ಬ ಶತಮೂರ್ಖ ಎಂದು ಸಾಬೀತು ಮಾಡುವುದೇ ಬಿಜೆಪಿಯ ಸಾಮಾಜಿಕ ತಾಣದ ಉದ್ದೇಶ ಎಂದು ರಾಹುಲ್, ಅಮೆರಿಕಾದಲ್ಲಿ ಹೇಳಿದ್ದರು.
ಎಐಸಿಸಿ ವಕ್ತಾರ ಆನಂದ ಶರ್ಮಾ ಹೇಳಿಕೆ
ದೇಶ ಎದುರಿಸುತ್ತಿರುವ ಸಮಸ್ಯೆ, ಎಪ್ಪತ್ತು ವರ್ಷಗಳಲ್ಲಿ ದೇಶ ಏನೇನು ಸಾಧನೆ ಮಾಡಿದೆ. ಭಾರತ ಇಂದು ವಿಶ್ವದಲ್ಲಿ ಶ್ರೇಷ್ಟ ಮಟ್ಟದಲ್ಲಿ ನಿಲ್ಲಲು ಏನೇನು ಕಾರಣವಾಯಿತು ಎನ್ನುವುದನ್ನು ರಾಹುಲ್ ಗಾಂಧಿ, ಅಮೆರಿಕಾದಲ್ಲಿ ವಿವರಿಸಿದ್ದಾರೆಂದು ಎಐಸಿಸಿ ವಕ್ತಾರ ಆನಂದ ಶರ್ಮಾ ಹೇಳಿದ್ದಾರೆ.
ರಾಹುಲ್ ಗಾಂಧಿ ವಿಫಲ ರಾಜಕಾರಣಿ ಎಂದ ಸ್ಮೃತಿ ಇರಾನಿ
ರಾಹುಲ್ ಗಾಂಧಿಯವರನ್ನು ಸ್ಮೃತಿ ಇರಾನಿ ವಿಫಲ ರಾಜಕಾರಣಿ ಎಂದು ಹೇಳುತ್ತಾರೆ. ಇದೇ ವ್ಯಕ್ತಿಯ ಎದುರು ತಾನೇ ಕಳೆದ ಲೋಕಸಭಾ ಚುನಾವಣೆಯಲ್ಲಿ (ಅಮೇಠಿ)ಯಲ್ಲಿ ಸ್ಮೃತಿ ಪರಾಭವಗೊಂಡಿದ್ದು ಎಂದು ದಿವ್ಯಾ ಸ್ಪಂದನ ಆಲಿಯಾಸ್ ರಮ್ಯಾ ಲೇವಡಿ ಮಾಡಿದ್ದಾರೆ.
ಸ್ಮೃತಿ ಹೇಳಿಕೆಗೆ ರಮ್ಯಾ ತಿರುಗೇಟು
ಈಗ ಸ್ಮೃತಿ ಯಾವುದೇ ಚುನಾವಣೆಯಲ್ಲಿ ಗೆಲ್ಲದೇ ಕೇಂದ್ರ ಸಚಿವೆ ಸ್ಥಾನದ ಸೀಟಿನಲ್ಲಿ ಕೂತಿದ್ದಾರೆ. ರಾಹುಲ್ ಗಾಂಧಿ ದೇಶದ ಮೌಲ್ಯವನ್ನು ಎತ್ತುವ ಕೆಲಸವನ್ನು ಅಮೆರಿಕಾದಲ್ಲಿ ಮಾಡಿದ್ದಾರೆಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಸ್ಮೃತಿ ಇರಾನಿಯವರನ್ನು 1,07,903 ಮತಗಳ ಅಂತರದಿಂದ ಸೋಲಿಸಿದ್ದರು.