ಪ್ರಾಧ್ಯಾಪಕಿ ಸಂಕಷ್ಟ ಕೇಳಿ ಭಾವುಕರಾದ ರಾಹುಲ್ ಗಾಂಧಿ
ಅಹಮದಾಬಾದ್, ನವೆಂಬರ್ 25: ಗುಜರಾತ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಶುಕ್ರವಾರ ಶಿಕ್ಷಕರ ಸಮುದಾಯದ ಜತೆ ಸಂವಾದ ನಡೆಸಿದರು. ಈ ವೇಳೆ ಭಾವಪೂರ್ಣ ಕ್ಷಣವೊಂದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷರು ಸಾಕ್ಷಿಯಾದರು.
ಸಂವಾದದಲ್ಲಿ ಪ್ರಾಧ್ಯಾಪಕಿಯೊಬ್ಬರು ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾ ರಾಹುಲ್ ಗಾಂಧಿಯವರನ್ನು ಬಿಗಿದಪ್ಪಿ ಅತ್ತೇ ಬಿಟ್ಟರು. ಈ ಚಿತ್ರ ನೋಡುಗರ ಕಣ್ಣಂಚಲ್ಲಿ ನೀರು ತರಿಸಿತು.
ಅವಸ್ಥಿಯ ಥಾಕೊರ್ಭಾಯ್ ದೇಸಾಯಿ ಹಾಲ್ ನಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂವಾದ ಮುಗಿದ ನಂತರ ಪ್ರಶ್ನೆ ಕೇಳಲು ರಂಜನಾ ಅವಸ್ಥಿ ಎಂಬ ಮಹಿಳೆಗೆ ಮೈಕ್ ನೀಡಲಾಯಿತು. ಇನ್ನೇನು ನಿವೃತ್ತಿಯ ಅಂಚಿನಲ್ಲಿರುವ ಅವಸ್ಥಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು.

ಅರೆಕಾಲಿಕ ಉಪನ್ಯಾಸಕರಾಗಿರುವ ಅವರು ತಮ್ಮ ಸಮುದಾಯ ಸಂಕಷ್ಟಗಳನ್ನು ದುಃಖಭರಿತ ಧ್ವನಿಯಲ್ಲಿ ತೆರೆದಿಟ್ಟರು. ಅರೆಕಾಲಿಕ ಉಪನ್ಯಾಸಕರಿಗೆ ಮೂಲ ಸೌಲಭ್ಯಗಳನ್ನು, ವೈದ್ಯಕೀಯ ರಜೆ, ಪಿಂಚಣಿ ನಿರಾಕರಿಸಿರುವುದನ್ನು ಹೇಳುತ್ತಾ ಅತ್ತೇ ಬಿಟ್ಟರು.
1994ರಲ್ಲಿ ಸಂಸ್ಕೃತಿದಲ್ಲಿ ಪಿಎಚ್ಡಿ ಮುಗಿಸಿ ಇವತ್ತಿಗೆ 22 ವರ್ಷ ಸೇವೆ ಅಲ್ಲಿಸಿಯೂ ಕೇವಲ 12,000 ಪಡೆಯುತ್ತಿದ್ದೇನೆ. ನಮಗೆ ಬಾಣಂತಿಯರ ರಜೆಗಳನ್ನು ನೀಡುತ್ತಿಲ್ಲ. ನಮಗೆ ಪಿಂಚಣಿಯೂ ಇಲ್ಲ. ಒಳ್ಳೆಯ ಜೀವನ ನಡೆಸುವ ಭರವಸೆಯೇ ನಮಗಿಲ್ಲ ಎಂದು ಅತ್ತು ಬಿಟ್ಟರು.
ಆಗ ರಾಹುಲ್ ಗಾಂಧಿ, ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು. ದಯವಿಟ್ಟು ನಮ್ಮಂತವರು ನಿವೃತ್ತರಾಗುವಾಗ ಪಿಂಚಣಿ ನೀಡಿ ಎಂದು ಮಹಿಳೆ ಕೇಳಿಕೊಂಡರು.

ಈ ಸಂದರ್ಭ ಅರೆ ಕ್ಷಣ ಭಾವುಕರಾದ ರಾಹುಲ್ ಸ್ಟೇಜ್ ನಿಂದ ಮೈಕ್ ಬಿಟ್ಟು ಹಾಗೇ ಇಳಿದು ಬಂದರು. ಮೂರನೇ ಸಾಲಿನಲ್ಲಿ ಕುಳಿತಿದ್ದ ಮಹಿಳೆಯ ಅಹವಾಲು ಕೇಳಿಸಿಕೊಂಡ ರಾಹುಲ್ ಮತ್ತೆ ಸ್ಟೇಜ್ಗೆ ಬರುವ ಮುಂಚೆ ಆಕೆಯನ್ನು ಬಿಗಿದ್ದಪ್ಪಿದರು.
ರಾಹುಲ್ ಗಾಂಧಿ ಅಪ್ಪುಗೆಯಲ್ಲಿ ಆಕೆಯೂ ಮತ್ತಷ್ಟು ಅತ್ತು ಹಗುರಾದರು. ಈ ಮಾನವೀಯ ನಡೆಗೆ ಅಲ್ಲಿದ್ದ ಪ್ರತಿಯೊಬ್ಬರೂ ಅರೆ ಕ್ಷಣ ಮೂಕ ವಿಸ್ಮಿತರಾದರು.












Click it and Unblock the Notifications