Rahul Gandhi: ಜೂನ್ 29 ರಂದು ಹಿಂಸಾಪೀಡಿತ ಮಣಿಪುರಕ್ಕೆ ತೆರಳಲಿರುವ ರಾಹುಲ್: ಬಿಜೆಪಿ ಸರ್ಕಾರಕ್ಕೆ ಭದ್ರತೆಯದ್ದೇ ಸಮಸ್ಯೆ
ನವದೆಹಲಿ, ಜೂನ್ 27: ಮಣಿಪುರದಲ್ಲಿ ಕಳೆದ ಐವತ್ತು ದಿನಗಳಿಂದ ಜನಾಂಗೀಯ ಗಲಭೆಯ ನಡೆಯುತ್ತಿದೆ. ಗಲಭೆಯನ್ನು ನಿಯಂತ್ರಿಸಲು ಸರ್ಕಾರಗಳು ವಿಫಲವಾಗಿದೆ. ಈಗಾಗಲೇ ನೂರಕ್ಕೂ ಅಧಿಕ ಜನರು ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೂನ್ 29 ಹಾಗೂ 30 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಮಣಿಪುರ ಭೇಟಿಯ ಸಮಯದಲ್ಲಿ ಅವರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಇಂಫಾಲ್ ಮತ್ತು ಚುರಾಚಂದಪುರದಲ್ಲಿ ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಘರ್ಷ ಪೀಡಿತ ಮಣಿಪುರಕ್ಕೆ ರಾಹುಲ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಭದ್ರತೆ ತಲೆನೋವಾಗಿ ಪರಿಣಮಿಸಲಿದೆ ಎಂದು ತಿಳಿದುಬಂದಿದೆ.

ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಹುಲ್ ಗಾಂಧಿ ಭೇಟಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
'ಮಣಿಪುರವು ಸುಮಾರು ಎರಡು ತಿಂಗಳುಗಳಿಂದ ಹೊತ್ತಿ ಉರಿಯುತ್ತಿದೆ. ಸಮಾಜವು ಸಂಘರ್ಷದಿಂದ ಶಾಂತಿಯತ್ತ ಸಾಗಬೇಕಿದೆ. ಅದಕ್ಕೆ ಸಂತೈಸುವ ಸ್ಪರ್ಶ ಬೇಕಿದೆ. ಆ ಮೂಲಕ ಗಾಯವನ್ನು ಗುಣಪಡಿಸುವ ಅಗತ್ಯವಿದೆ. ಇದು ಮಾನವೀಯ ದುರಂತವಾಗಿದೆ. ದ್ವೇಷವಲ್ಲವನ್ನಲ್ಲ, ಪ್ರೀತಿಯನ್ನು ಶಕ್ತಿಯನ್ನಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ.
ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯ ವಿರುದ್ಧ ಪ್ರತಿಭಟಿಸಲು ಗುಡ್ಡಗಾಡು ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ'ಯ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದವು.

ಮೀಟೈ ಸಮುದಾಯವು ರಾಜ್ಯದ ಜನಸಂಖ್ಯೆಯ ಸುಮಾರು 53 ಪ್ರತಿಶತವನ್ನು ಒಳಗೊಂಡಿದೆ. ಈ ಸಮುದಾಯವು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಮತ್ತೊಂದೆಡೆ, ನಾಗಾಗಳು ಮತ್ತು ಕುಕಿಗಳಂತಹ ಆದಿವಾಸಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ. ಅವರು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.












Click it and Unblock the Notifications