'ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ, ಹುಡುಕಿಕೊಟ್ಟವರಿಗೆ ಬಹುಮಾನ'
ಅಮೇಥಿ, ಆಗಸ್ಟ್ 8: "ಅಮೇಥಿಯ ಗೌರವಾನ್ವಿತ ಸಂಸದರಾದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ ಬಹುಮಾನ" ಎಂಬ ಒಕ್ಕಣೆಯುಳ್ಳ ಪೋಸ್ಟರ್ ಉತ್ತರಪ್ರದೇಶದ ಅಮೇಥಿ ಕ್ಷೇತ್ರದಾದ್ಯಂತ ರಾರಾಜಿಸುತ್ತಿದೆ.
ಈ ಪೋಸ್ಟರ್ ನಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿದೆ. ಇದು ಬಿಜೆಪಿ-ಆರೆಸ್ಸೆಸ್ ನ ಕೈವಾಡ ಎಂದು ಆರೋಪ ಮಾಡಿದೆ. ಆರು ತಿಂಗಳ ಹಿಂದೆ ಉತ್ತರಪ್ರದೇಶ ಚುನಾವಣೆ ಪ್ರಚಾರಕ್ಕಾಗಿ ಅಮೇಥಿಗೆ ಬಂದಿದ್ದ ರಾಹುಲ್ ಗಾಂಧಿ ಮತ್ತೆ ಇತ್ತ ತಲೆ ಹಾಕಿಲ್ಲ. ಆದ್ದರಿಂದ ಬಿಜೆಪಿಯು ರಾಹುಲ್ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದೆ.

ಅಮೇಥಿ ಕ್ಷೇತ್ರವು ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ. ಆದರೆ ಹಲವು ಕಾಲದಿಂದ ಇಲ್ಲಿ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಈ ಬಾರಿ ನಡೆದ ವಿಧಾನಸಭಾ ಚುನಾವಣೆಯ ವೇಳೆ ಹಳ್ಳಿಯೊಂದರ ಜನ ಮತದಾನ ಮಾಡದೆ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ರಾಹುಲ್ ಗಾಂಧಿ ನಡವಳಿಕೆಯಿಂದ ಶ್ರೀಸಾಮಾನ್ಯರಿಗೆ ಅವಮಾನ ಆಗಿದೆ, ವಂಚನೆ ಆಗಿದೆ ಎಂದು ಕೂಡ ಪೋಸ್ಟರ್ ನಲ್ಲಿ ಹಾಕಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ ಮಿಶ್ರಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕಾಂಗ್ರೆಸ್ ಗೆ ಕೆಟ್ಟ ಹೆಸರು ತರಲು ಬಿಜೆಪಿ ಹಾಗೂ ಆರೆಸ್ಸೆಸ್ ಮಾಡಿರುವ ಷಡ್ಯಂತ್ರ ಎಂದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ.
ಇನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉಮಾಶಂಕರ್ ಪಾಂಡೆ ಮಾತನಾಡಿ, ರಾಹುಲ್ ಗಾಂಧಿ ಅಮೇಥಿ ಕ್ಷೇತ್ರಕ್ಕಾಗಿ ಏನಾದರೂ ಒಳ್ಳೆಯದು ಮಾಡಿದ್ದರೆ ಇಂಥ ಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದಿದ್ದಾರೆ.












Click it and Unblock the Notifications