ಕಾಂಗ್ರೆಸ್ಸಿಗೆ ಮೋಸ ಮಾಡಿದ ನಿತೀಶ್ : ರಾಹುಲ್ ವಾಗ್ದಾಳಿ
ನವದೆಹಲಿ, ಜುಲೈ 27 : ಸಂಜೆಗೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿ, ಮರುದಿನ ಬೆಳಿಗ್ಗೆಯೇ ಬಿಜೆಪಿ ಬೆಂಬಲದಿಂದ ನಿತೀಶ್ ಕುಮಾರ್ ಹೊಸ ಸರಕಾರ ರಚಿಸುತ್ತಿರುವುದು ಕಾಂಗ್ರೆಸ್ಸಿಗೆ ಮುಟ್ಟಿಕೊಂಡು ನೋಡುವಂಥ ಆಘಾತ ನೀಡಿದೆ.
ನಿತೀಶ್ ಕುಮಾರ್ ಅವರು ನನಗೆ ಮೋಸ ಮಾಡಿದ್ದಾರೆ. ಕೆಲ ಎರಡೇ ಎರಡು ದಿನಗಳ ಹಿಂದೆ ಭೇಟಿ ಮಾಡಿದ್ದಾಗಲೂ ರಾಜೀನಾಮೆ ನೀಡುವ ಬಗ್ಗೆ ಒಂದು ಮಾತನ್ನೂ ಹೇಳಿರಲಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ನೀಡಿದ ನಿತೀಶ್ ಉದುರಿಸಿದ 10 ನುಡಿಮುತ್ತು
ರಾಜೀನಾಮೆ ನೀಡಿ ಇಡೀ ಘಟಬಂಧನಕ್ಕೆ ನಿತೀಶ್ ಕುಮಾರ್ ಮೋಸ ಮಾಡಿದ್ದಾರೆ, ಘಟಬಂಧನಕ್ಕೆ ಬೆಂಬಲ ನೀಡಿದ್ದ ಕಾಂಗ್ರೆಸ್ಸಿನ ಬೆನ್ನಿಗೆ ನಿತೀಶ್ ಕುಮಾರ್ ಚೂರಿ ಹಾಕಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿಯನ್ನು ನಡೆಸಿದ್ದಾರೆ.
ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಮತ್ತು ಅವರನ್ನು ಬೆಂಬಲಿಸಿದ ಇತರ ಪಕ್ಷಗಳಿಗೆ ಮಾತ್ರ ಮೋಸ ಮಾಡಿಲ್ಲ, ಇಡೀ ಬಿಹಾರಕ್ಕೆ ಮೋಸ ಮಾಡಿದ್ದಾರೆ. ನಮ್ಮ ಬೆನ್ನ ಹಿಂದೆ ನಮ್ಮ ವಿರೋಧಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ವಾಗ್ಬಾಣ ಬಿಟ್ಟಿದ್ದಾರೆ.
ಕೋಮುವಾದಿಗಳನ್ನು ಮಟ್ಟಹಾಕಲೆಂದು ಬಿಹಾರದ ಜನತೆ ನಿತೀಶ್ ಕುಮಾರ್ ಅವರ ನೇತೃತ್ವದ ಮಹಾಘಟಬಂಧನಕ್ಕೆ ಬಹುಮತ ನೀಡಿದ್ದರು. ಆದರೆ, ಜನರು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನಿತೀಶ್ - ಲಾಲೂ ಅಪವಿತ್ರ ಮೈತ್ರಿಕೂಟದ ಟೈಮ್ ಲೈನ್
ಇದಕ್ಕೆ ಪ್ರತ್ಯುತ್ತರ ನೀಡಿರುವ ಜೆಡಿಯು, ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ, ನಿತೀಶ್ ಕುಮಾರ್ ರಾಜೀನಾಮೆ ನೀಡಿ ಘಟಬಂಧನದಿಂದ ಹೊರಬರುವ ಬಗ್ಗೆ ರಾಹುಲ್ ಗಾಂಧಿಗೆ ಮೊದಲೇ ತಿಳಿಸಲಾಗಿತ್ತು ಎಂದು ತಿರುಗೇಟು ನೀಡಿದೆ.