ಬಿಜೆಪಿಯನ್ನು ಬೇಸ್ತು ಬೀಳಿಸಲು ರಾಹುಲ್ ಗಾಂಧಿ ಮಾಸ್ಟರ್ ಪ್ಲಾನ್!
ನವದೆಹಲಿ, ಮೇ 23 : ಎಕ್ಸಿಟ್ ಪೋಲ್ ಫಲಿತಾಂಶವೇನೋ ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಗಳಿಸುತ್ತದೆಂದು ತಿಳಿಸಿದೆ. ಆದರೆ, ಒಂದು ವೇಳೆ, ಸಮೀಕ್ಷೆಗಳು ಸ್ವಲ್ಪ ಏರುಪೇರಾಗಿ, ಎನ್ಡಿಎ 272 ಸ್ಥಾನಗಳ ಬಹುಮತ ಗಳಿಸಲು ವಿಫಲವಾದರೆ ಮುಂದೇನು ಮಾಡುವುದು ಎಂಬ ಲೆಕ್ಕಾಚಾರದಲ್ಲಿ ವಿರೋಧ ಪಕ್ಷಗಳು ಮುಳುಗಿವೆ.
ಜನಾದೇಶ ಆಡಳಿತ ಪಕ್ಷದ ವಿರೋಧವಾಗಿ ಬಂದು, ವಿರೋಧ ಪಕ್ಷಗಳ ಪರವಾಗಿ ಬಂದರೆ ಏನು ಮಾಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದರ ಪ್ರಕಾರ, ಅಭಿಷೇಕ್ ಮನು ಸಿಂಘ್ವಿ ಅವರು ಮೂರು ಪತ್ರಗಳನ್ನು ಡ್ರಾಫ್ಟ್ ಮಾಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಮಹಾಘಟಬಂಧನ್ ಅನ್ನು ಬದಿಗೆ ಸರಿಸಿ, ಹೊಸ ಹೆಸರಿನಲ್ಲಿ ಹೊಸ ಮೈತ್ರಿಕೂಟವನ್ನು ರಚಿಸಲಿದೆ. ಇದರಲ್ಲಿ ಯುಪಿಎ ಅಂಗಪಕ್ಷಗಳ ಜೊತೆ ಇತರ ಪಕ್ಷಗಳೂ ಬಂದು ಸೇರಿಕೊಳ್ಳುವ ನಿರೀಕ್ಷೆಯಿದೆ. ಈ ಎಲ್ಲ ಅಂಗ ಪಕ್ಷಗಳ ಸಹಿಯೊಂದಿಗೆ ಪತ್ರವನ್ನು ರಾಷ್ಟ್ರಪತಿಗೆ ಕಳುಹಿಸುವ ಯೋಜನೆ ಇದಾಗಿದೆ.

ಆ ಪತ್ರದೊಂದಿಗೆ ಇನ್ನೆರಡು ಪತ್ರಗಳನ್ನೂ ಅಭಿಷೇಕ್ ಮನು ಸಿಂಘ್ವಿ ಅವರು ರಾಹುಲ್ ಗಾಂಧಿ ಅವರ ಆದೇಶದಂತೆ ಬರೆದಿದ್ದಾರೆ. ಎರಡನೆಯದರಲ್ಲಿ, ಎಲ್ಲ ಮಿತ್ರಪಕ್ಷಗಳೊಂದಿಗೆ ಸರಕಾರ ರಚಿಸುವುದಾಗಿದ್ದರೆ, ಮೂರನೇ ಪತ್ರದಲ್ಲಿ, ಆ ಹೊಸ ಮೈತ್ರಿಕೂಟದ ನಾಯಕ ಅಥವಾ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದಿದೆ.
ಇದನ್ನು ಕ್ಷಿಪ್ರಗತಿಯಲ್ಲಿ ಕಾರ್ಯರೂಪಕ್ಕೆ ತರಲು ಒಂದು ಪುಟ್ಟ ತಂಡವನ್ನು ರಾಹುಲ್ ಗಾಂಧಿ ಅವರು ರಚಿಸಿದ್ದಾರೆ. ಅದರಲ್ಲಿ, ಅಹ್ಮದ್ ಪಟೇಲ್, ಜೈರಾಮ್ ರಮೇಶ್ ಮತ್ತು ರಾಹುಲ್ ಗಾಂಧಿ ಅವರ ಸಹಾಯಕ ಕೆ ರಾಜು ಅವರಿದ್ದಾರೆ.
ಎಕ್ಸಿಟ್ ಪೋಟ್ ಅತ್ಯಂತ ಸ್ಪಷ್ಟವಾಗಿ ನರೇಂದ್ರ ಮೋದಿ ನೇತೃತ್ವದ ಎನ್ಡಿಗೆ ಬಹುಮತ ದೊರೆಯುತ್ತದೆಂದು ಹೇಳಿದ್ದರೂ, ಇದನ್ನು ಒಪ್ಪಿಕೊಳ್ಳಲು ಯಾವುದೇ ಪ್ರತಿಪಕ್ಷಗಳು ಸಿದ್ದರಿಲ್ಲ. ಏನಾದರೂ ಮ್ಯಾಜಿಕ್ ಆಗಿ ಚುನಾವಣೋತ್ತರ ಸಮೀಕ್ಷೆಗಳು ಸಂಪೂರ್ಣ ತಿರುವುಮುರುವು ಆಗುತ್ತದೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕರ್ನಾಟಕದಲ್ಲಿ ಅನುಸರಿಸಿದಂತೆಯೆ, ಸಂದರ್ಭ ಬಂದರೆ ಹೆಚ್ಚು ಸ್ಥಾನ ಗಳಿಸಿದ ಪ್ರಾದೇಶಿಕ ಪಕ್ಷಕ್ಕೇ ಆಡಳಿತ ನಡೆಸುವ ಅಧಿಕಾರ ಮತ್ತು ಪ್ರಧಾನಿ ಪಟ್ಟವನ್ನು ಬಿಟ್ಟುಕೊಡಲು ರಾಹುಲ್ ಗಾಂಧಿ ಅವರು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಮತ್ತೆ ಬರಬಾರದು ಎಂಬುದೇ ಅವರ ಅಭಿಲಾಷೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏನಿಲ್ಲವೆಂದರೂ 120ರಿಂದ 150 ಕ್ಷೇತ್ರಗಳನ್ನು ಗೆಲ್ಲುವ ಆಶಾಭಾವನೆ ಹೊಂದಿದೆ. ಯುಪಿಎದಲ್ಲಿರುವ ಅಂಗಪಕ್ಷಗಳು ಮತ್ತು ಇತರ ಪ್ರಾದೇಶಿಕ ಪಕ್ಷಗಳನ್ನು ಸೇರಿಸಿ ಮ್ಯಾಜಿಕಲ್ ನಂಬರ್ ಆದ 272 ಅನ್ನು ದಾಟುವ ನಿರೀಕ್ಷೆ ಇಟ್ಟುಕೊಂಡಿದೆ. ಏನಾಗಲಿದೆ ಎಂಬುದು ಇಂದು ಸಂಜೆ ತಿಳಿದುಬರಲಿದೆ.












Click it and Unblock the Notifications