ರಾಹುಲ್ ಗಾಂಧಿ 'ವಿಚಿತ್ರ ಉತ್ತರ'ಕ್ಕೆ ಮುಸಿಮುಸಿ ನಕ್ಕ ವಿದ್ಯಾರ್ಥಿಗಳು!
Recommended Video

ಅಮೇಥಿ, ಏಪ್ರಿಲ್ 17: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದಲ್ಲ ಒಂದು ಕಾರಣಕ್ಕೆ ಹೋದಲ್ಲೆಲ್ಲ ಸುದ್ದಿಯಾಗುತ್ತಾರೆ. ಪಕ್ಷದ ಅಧ್ಯಕ್ಷರಾದ ಮೇಲಂತೂ ಸದಾ ಪ್ರವಾಸದಲ್ಲೇ ಇರುವ ರಾಹುಲ್ ಗಾಂಧಿ, ಎಲ್ಲೇ ತೆರಳಿದರೂ ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಪರಿಪಾಠ ಇಟ್ಟುಕೊಂಡಿದ್ದಾರೆ.
ನಿನ್ನೆ(ಏಪ್ರಿಲ್ 16) ತಮ್ಮ ಸ್ವಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿಗೆ ತೆರಳಿದ್ದ ರಾಹುಲ್ ಗಾಂಧಿ ಎಂದಿನಂತೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಆದರೆ ಈ ಸಂದರ್ಭದಲ್ಲಿ ಅವರು ನೀಡಿದ ವಿಚಿತ್ರ ಉತ್ತರಗಳು ವಿದ್ಯಾರ್ಥಿಗಳು ನಕ್ಕು ಹಗುರಾಗುವಂತೆ ಮಾಡಿದವು!
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಇತ್ತೀಚೆಗೆ ಮೈಸೂರಿಗೆ ಆಗಮಸಿದ್ದಾಗ ಇಲ್ಲಿನ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ವಿದ್ಯಾರ್ಥಿನಿಯೊಬ್ಬರು ಎನ್ ಸಿಸಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ, 'ಈ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದರು. ಅವರ ಈ ಉತ್ತರಕ್ಕೆ ಸಹ ಹಲವು ಟೀಕೆಗಳು ಎದುರಾಗಿದ್ದವು.

ಅಮೇಥಿಯಲ್ಲಿ ಸಂವಾದ
ಅಮೇಥಿಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬಳು ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಿದ್ದಾಳೆ. "ಸರ್ಕಾರ ಹಲವು ಕಾನೂನನ್ನು ಪರಿಚಯಿಸಿದೆ. ಆದರೆ ಅವುಗಳೆಲ್ಲ ಹಳ್ಳಿಗಳಲ್ಲಿ ಸರಿಯಾಗಿ ಜಾರಿಗೆ ಬರುತ್ತಿಲ್ಲವಲ್ಲ. ಯಾಕೆ?" ಎಂಬುದು ವಿದ್ಯಾರ್ಥಿನಿಯ ಪ್ರಶ್ನೆ. ಇದಕ್ಕೆ ನಗುತ್ತಲೇ ಉತ್ತರಿಸಿದ ರಾಹುಲ್ ಗಾಂಧಿ, "ನೀವು ಈ ಪ್ರಶ್ನೆಯನ್ನು ;ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಶ್ನೆಯನ್ನು ನಮ್ಮ ಸರ್ಕಾರಕ್ಕೇ ಕೇಳಿ" ಎಂದರು!

ಒಳಗೊಳಗೇ ನಕ್ಕರು ಹಲವರು!
ರಾಹುಲ್ ಗಾಂಧಿಯವರ ಈ ಉತ್ತರವನ್ನು ಕೇಳಿ ಅಲ್ಲಿದ್ದ ಹಲವರು ಒಳಗೊಳಗೇ ನಕ್ಕರು! ಕೆಲವು ಮಕ್ಕಳು ಸಹ. ಏಕೆಂದರೆ ಯಾವುದೇ ಕಾನೂನನ್ನು ಸಂಸತ್ತು ಅಂಗೀಕರಿಸಿದರೂ, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಆಯಾ ರಾಜ್ಯ ಸರ್ಕಾರಗಳ ಕೆಲಸ. ಅದಕ್ಕಾಗಿ ಕೇಂದ್ರ ಸರ್ಕಾರವನ್ನು ತೆಗಳುವುದಕ್ಕೆ ಬರುವುದಿಲ್ಲ ಎಂಬುದು ಹಲವು ವಿದ್ಯಾರ್ಥಿಗಳಿಗೂ ತಿಳಿದ ವಿಚಾರ. ಆದ್ದರಿಂದ ರಾಹುಲ್ ಈ ಉತ್ತರ ನೀಡುತ್ತಿದ್ದಂತೆಯೇ ಹಲವರು ಮುಸಿ ಮುಸಿ ನಕ್ಕಿದ್ದು ಕಂಡುಬಂತು!

ಯೋಗಿ ಆದಿತ್ಯನಾಥ್ ಮೇಲೆ ಗೂಬೆ
ನಂತರ ಅಮೇಥಿ ಬಗ್ಗೆಯೂ ಪ್ರಶ್ನೆ ಕೇಳಲಾಯಿತು. ಅಮೇಥಿ ಏಕೆ ಅಭಿವೃದ್ಧಿ ಹೊಂದುತ್ತಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತ, 'ಅಮೇಥಿಯಲ್ಲಿ ನಾನು ಆಡಳಿತ ಮಾಡುತ್ತಿಲ್ಲ. ನಾನು ಈ ಕ್ಷೇತ್ರದ ಸಂಸದ ಅಷ್ಟೇ. ಸಂಸತ್ತಿನ ಕಾರ್ಯಗಳಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ. ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುವುದು ಯೋಗಿ ಆದಿತ್ಯನಾಥ್ ಜವಾಬ್ದಾರಿ. ಆದರೆ ಅವರು ಮತ್ತೇನನ್ನೋ ಮಾಡುತ್ತಿದ್ದಾರೆ. ಅವರು ವಿದ್ಯುತ್, ನೀರು, ಶಿಕ್ಷಣ ಯಾವುದರ ಬಗ್ಗೆಯೂ ಕೆಲಸಮಾಡುತ್ತಿಲ್ಲ' ಎಂದು ಯೋಗಿ ಆದಿತ್ಯನಾಥ್ ಮೇಲೆ ಹರಿಹಾಯ್ದು ಅಲ್ಲಿಂದ ಹೊರಟುಬಿಟ್ಟರು. ವಿದ್ಯಾರ್ಥಿಗಳು ಮತ್ತಷ್ಟು ಪ್ರಶ್ನೆ ಕೇಳಬೇಕು ಎಂದುಕೊಳ್ಳುತ್ತಿರುವ ಹೊತ್ತಲ್ಲೇ ಅವರು ಅಲ್ಲಿಂದ ಹೊರಟುಬಿಟ್ಟಿದ್ದರು!

ಸಂಸದರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕಾಗುವುದಿಲ್ಲವೇ?
ರಾಹುಲ್ ಗಾಂಧಿ ಅವರು ಹೇಳಿದಂತೆ ಸಂಸದರ ಕೆಲಸ ಕೇವಲ ಸಂಸತ್ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವುದು ಮಾತ್ರವೇ? ಪಾರ್ಲಿಮೆಂಟಿನ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಎಲ್ಲಾ ಸಂಸದನೂ, ಎಂಪಿಎಲ್ ಎಡಿಎಸ್(Member of Parliament Local Area Development Scheme) ಅಡಿಯಲ್ಲಿ ತನ್ನ ಕ್ಷೇತ್ರದಲ್ಲಿ ಪ್ರತಿ ವರ್ಷ 5 ಕೋಟಿ ರೂ. ವರೆಗೆ ಖರ್ಚು ಮಾಡಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಬಹುದು. ಅಲ್ಲದೆ, ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆಯೋ ಇಲ್ಲವೋ ಎಂಬ ಕುರಿತು ನಿಗಾ ವಹಿಸಬಹುದಾದ ಅಧಿಕಾರವೂ ಸಂಸದರಿಗಿರುತ್ತದೆ. ಇವೆಲ್ಲ ತಿಳಿದಿದ್ದರೂ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕುರಿತು ಯೋಗಿ ಆದಿತ್ಯನಾಥ್ ಅವರ ಮೇಲೆ ರಾಹುಲ್ ಗಾಂಧಿ ಗೂಬೆ ಕೂರಿಸಿದ್ದು ಸರಿಯೇ ಎಂಬುದು ಈಗಿರುವ ಪ್ರಶ್ನೆ!












Click it and Unblock the Notifications