ಶಾಂತಿನಿಕೇತನಕ್ಕೂ ತಟ್ಟಿತೇ ಲೈಂಗಿಕ ದೌರ್ಜನ್ಯ ಕಳಂಕ
ಬೆಂಗಳೂರು, ಆ. 30 : ಪಶ್ಚಿಮ ಬಂಗಾಳದ ಪ್ರತಿಷ್ಠಿತ ಶಾಂತಿನಿಕೇತನ ವಿಶ್ವ ಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.
ಸಿಕ್ಕಿಂ ಮೂಲದ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿ ಮೂರು ಜನ ವಿದ್ಯಾರ್ಥಿಗಳಿಂದ ದೌರ್ಜನ್ಯವಾಗಿದೆ ಎಂದು ಆರೋಪಿಸಿದ್ದಾಳೆ. ಇದರಲ್ಲಿ ಒಬ್ಬ ದ್ವಿತೀಯ ಪದವಿ ವಿದ್ಯಾರ್ಥಿಯಾಗಿದ್ದು, ಇನ್ನಿಬ್ಬರು ಅಂತಿಮ ವರ್ಷದ ವಿದ್ಯಾರ್ಥಿಗಳು ಎಂದು ತಿಳಿಸಿದ್ದಾಳೆ.

ಅಲ್ಲದೇ ಆರೋಪಿಗಳು ನನ್ನ ಫೋಟೊ ಕೂಡ ತೆಗೆದಕೊಂಡಿದ್ದು ಘಟನೆಯನ್ನು ಬಾಯಿಬಿಟ್ಟರೆ ಎಲ್ಲರಿಗೂ ನೀಡುತ್ತೇವೆ ಎಂದು ಬೆದರಿಸಿದ್ದಾರೆ ಎಂದು ವಿದ್ಯಾರ್ಥಿನಿ ಗಂಭೀರ ಆರೋಪ ಮಾಡಿದ್ದಾಳೆ.
ಬೇಕಂತಲೇ ವಿಳಂಬ ಮಾಡಿದರು
ಕಾಲೇಜಿನ ಆಡಳಿತ ಮಂಡಳಿ ಅಧಿಕಾರಿಗಳು ನಾವು ಪೊಲೀಸ್ ಮತ್ತು ಮಾಧ್ಯಮದವರ ಬಳಿ ಹೋಗದಂತೆ ತಡೆದಿದ್ದಾರೆ ಎಂದು ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದಾರೆ. ಮೊದಲು ವೈಸ್ ಛಾನ್ಸೆಲೆರ್ ಸುಲ್ತಾನ್ ಗುಪ್ತಾ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದೇವು. ಆದರೆ ಇಲ್ಲಿ ಬೇಕಂತಲೇ ಎರಡು ಗಂಟೆ ನಮ್ಮನ್ನು ಕಾಯಿಸಿ ನಂತರ ಮಾತುಕತೆ ನಡೆಸಲು ಮತ್ತೊಂದು ಕಟ್ಟಡಕ್ಕೆ ಕರೆದೊಯ್ಯಲಾಯಿತು ಎಂದಿದ್ದಾರೆ.
ಮಾತುಕತೆ ಮುಗಿದ ತಕ್ಷಣ ನಮ್ಮನ್ನು ಕೂಡಲೇ ಕೋಲ್ಕತ್ತಾಕ್ಕೆ ತೆರಳಲು ಸೂಚಿಸಲಾಯಿತು. ಅಲ್ಲದೇ ವಿಶ್ವವಿದ್ಯಾಲಯದ ಕಾರಿನಲ್ಲೇ ಬೋಲ್ಪುರ್ ರೈಲು ನಿಲ್ದಾಣಕ್ಕೆ ತಂದು ಬಿಡಲಾಯಿತು. ಪೊಲೀಸರು ಮತ್ತು ಮಾಧ್ಯಮದವರೆದುರು ನಾವು ಮಾತನಾಡಬಾರದು ಎಂಬುದೇ ಅವರ ಉದ್ದೇಶವಾಗಿತ್ತು ಎಂದು ವಿದ್ಯಾರ್ಥಿನಿಯ ತಂದೆ ದೂರಿದ್ದಾರೆ.
ಈ ವಿಷಯದ ಕುರಿತು ಮಾತನಾಡಿದ ಕಾಲೇಜಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷೆ ಮೌಸುಮಿ ಭಟ್ಟಾಚಾರ್ಯ, ಕಲಾ ಭವನದ ಪ್ರಾಚಾರ್ಯರಿಂದ ದೂರು ಸ್ವೀಕರಿಸಲಾಗಿದೆ. ಘಟನೆ ಬಗ್ಗೆ ಕೂಡಲೇ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಿದ್ಯಾಥರ್ಥಿನಿ ಮತ್ತು ಆಕೆಯ ಪಾಲಕರೊಂದಿಗೆ ಮಾತನಾಡಿ ಸೂಕ್ತ ವಿಚಾರಣೆ ನಡೆಸಿ ಸಂಬಂಧಿಸಿದವರಿಗೆ ವರದಿ ನೀಡುತ್ತೇವೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.












Click it and Unblock the Notifications