ರಫೇಲ್ ತನಿಖೆ ನಡೆದರೆ ಮೋದಿ, ಅಂಬಾನಿ ಹೆಸರು ಹೊರಬರುತ್ತದೆ: ರಾಹುಲ್
ಕಬಿರ್ಧಂ (ಛತ್ತೀಸ್ ಗಢ), ನವೆಂಬರ್ 15: ರಫೇಲ್ ಒಪ್ಪಂದದಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆಯಾದರೆ ಪ್ರಧಾನಿ ನರೇಂದ್ರ ಮೋದಿ, ಅನಿಲ್ ಅಂಬಾನಿ ಅವರೆಲ್ಲರ ಹೆಸರು ಹೊರಬರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಛತ್ತೀಸಗಢದಲ್ಲಿ ನಡೆಯುತ್ತಿರುವ ಎರಡನೆಯ ಹಂತದ ಚುನಾವಣೆಯ ಪ್ರಚಾರದ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದು ಯುದ್ಧ ವಿಮಾನಕ್ಕೆ 526 ಕೋಟಿ ನಿಗದಿಪಡಿಸಿದ್ದರೆ, ಎನ್ಡಿಎ ಸರ್ಕಾರ ಒಂದು ವಿಮಾನಕ್ಕೆ 1,600 ಕೋಟಿ ರೂ ನೀಡಿದೆ ಎಂದು ಆರೋಪ ಮಾಡಿದರು.
ರಫೇಲ್ ಒಪ್ಪಂದದ ವಾಸ್ತವಗಳು ಸಾರ್ವಜನಿಕವಾಗಿ ಲಭ್ಯವಾಗುವಂತಾದರೆ ಮಾತ್ರ ರಫೇಲ್ ವಿಮಾನಗಳ ಕುರಿತಾದ ಚರ್ಚೆ ನಡೆಸಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಮೊದಲ ಹೆಸರೇ ಅಂಬಾನಿ, ಮೋದಿ
'ರಫೇಲ್ ಒಪ್ಪಂದದ ಹಗರಣದ ಬಗ್ಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತನಿಖೆ ಆರಂಭಿಸಿದ್ದರು. ಅವರನ್ನು ಪ್ರಧಾನಿ ಮೋದಿ ರಾತ್ರಿ 12 ಗಂಟೆಗೆ ಕಿತ್ತೊಗೆದರು. ನಿಮಗೆ ಹೇಳುತ್ತಿದ್ದೇನೆ, ರಫೇಲ್ ಒಪ್ಪಂದದ ತನಿಖೆ ಆರಂಭವಾದ ದಿನವೇ ಮೊದಲು ಅನಿಲ್ ಅಂಬಾನಿ ಮತ್ತು ನರೇಂದ್ರ ಮೋದಿ ಹೆಸರು ಮುಂಚೂಣಿಯಲ್ಲಿ ಇರುತ್ತದೆ' ಎಂದು ರಾಹುಲ್ ಹೇಳಿದರು.

ಎಚ್ಎಎಲ್ ಬಿಟ್ಟರು
ವಿಮಾನಯಾನ ಮತ್ತು ರಕ್ಷಣಾ ವಲಯದಲ್ಲಿ ಸುದೀರ್ಘ ಅನುಭವ ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಬಿಟ್ಟು ಅಂಬಾನಿ ಅವರ ಅನನುಭವಿ ಕಂಪೆನಿಯನ್ನು ಮೋದಿ ಸರ್ಕಾರ ಆಯ್ದುಕೊಂಡಿದೆ ಎಂದು ರಾಹುಲ್ ಆರೋಪಿಸಿದರು.

ಬಡವರಿಗೆ ಸಂಕಷ್ಟ
ಅಪನಗದೀಕರಣದಿಂದ ಬಡವರು ತೀರ ಸಂಕಷ್ಟ ಅನುಭವಿಸಿದರು. ಹಳೆಯ 500 & 1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಯಾವ ಕೋಟ್ಯಧಿಪತಿಯೂ ಅಥವಾ ಕಪ್ಪುಹಣದ ಕಳ್ಳರೂ ಬ್ಯಾಂಕ್ನ ಮುಂದೆ ಸರದಿಯಲ್ಲಿ ನಿಂತುಕೊಳ್ಳಲಿಲ್ಲ ಎಂದು ರಾಹುಲ್ ಹೇಳಿದರು.

ಅತಿ ದೊಡ್ಡ ಹಗರಣ
ಅಪನಗದೀಕರಣವು ದೇಶದ ಅತಿ ದೊಡ್ಡ ಹಗರಣ. ಇದಕ್ಕಿಂತ ಅತಿ ದೊಡ್ಡ ಹಗರಣ ಇಲ್ಲ. ಅದರ ಸತ್ಯ ಹೊರಬರಲಿದೆ. ಮೋದಿ ಅವರು ಬಡಜನರ ಜೇಬಿನಿಂದ ಹಣವನ್ನು ಕಸಿದುಕೊಂಡು ನೀರವ್ ಮೋದಿ, ಅನಿಲ್ ಅಂಬಾನಿ ಮತ್ತು ಮೆಹುಲ್ ಚೋಕ್ಸಿ ಅವರಂತಹ ಕಳ್ಳರ ಕಿಸೆಗೆ ಹಾಕಿದ್ದಾರೆ ಎಂದು ರಾಹುಲ್ ದೂರಿದರು.












Click it and Unblock the Notifications