ರಾಜ ರಾಜ ಚೋಳ ಹಿಂದೂವಲ್ಲ ಎಂಬ ಹೇಳಿಕೆ; ಕಮಲ್, ವೆಟ್ರಿಮಾರನ್ ವಿರುದ್ಧ ಬಿಜೆಪಿ ಖಂಡನೆ
ಚೆನ್ನೈ, ಅ. 07: ರಾಜ ರಾಜ ಚೋಳ ಹಿಂದೂ ರಾಜನಲ್ಲ ಎಂದಿದ್ದ ನಿರ್ದೇಶಕ ವೆಟ್ರಿಮಾರನ್ ಮತ್ತು ನಟ, ನಿರ್ದೇಶಕ ಕಮಲ್ ಹಾಸನ್ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಚೋಳ ರಾಜ ಹಿಂದೂವೇ ಎಂದು ಬಿಜೆಪಿ ನಾಯಕರು ವಾದಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್ ಅವರು ರಾಜ ರಾಜ ಚೋಳ ಹಿಂದೂ ರಾಜನಲ್ಲ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಅವರ ಹೇಳಿಕೆಯನ್ನು ಕಮಲ್ ಹಾಸನ್ ಕೂಡ ಬೆಂಬಲಿಸಿದ್ದಾರೆ.
ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಭಾಗ 1, ರಾಜ ರಾಜ ಚೋಳನ ಜೀವನವನ್ನು ಚಿತ್ರಿಸುವ ಚಿತ್ರವಾಗಿದೆ. ರಾಜ ರಾಜ ಚೋಳ ಹಿಂದೂ ರಾಜನೇ ಎಂಬ ಚರ್ಚೆಯಲ್ಲಿ ಬಿಜೆಪಿ ನಾಯಕರು ಸೇರಿಕೊಂಡು ವಿವಾದವನ್ನು ಮತ್ತಷ್ಟು ದೊಡ್ಡದು ಮಾಡಿದ್ದಾರೆ. ಬಿಜೆಪಿ ಮುಖಂಡ ಎಚ್ ರಾಜಾ, ತೆಲಂಗಾಣ ಮತ್ತು ಪುದುಚೇರಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ.
ಶೈವ ಮತ್ತು ವೈಷ್ಣವ ಧರ್ಮ ಎರಡೂ ಹಿಂದೂಗಳ ಗುರುತುಗಳು
ತೆಲಂಗಾಣ ಮತ್ತು ಪುದುಚೇರಿ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು, 'ಚೋಳ ರಾಜನು ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ತಾನು ತಂಜಾವೂರಿನಲ್ಲಿರುವ ಅಂತಹ ಒಂದು ದೇವಾಲಯದ ಸಮೀಪದಲ್ಲಿಯೇ ಬೆಳೆದಿದದ್ದು. ಹಿಂದೂ ಸಾಂಸ್ಕೃತಿಕ ಪ್ರತಿಮೆಗಳ ಗುರುತನ್ನು ಮರೆಮಾಚುವ ಪ್ರಯತ್ನಗಳನ್ನು ಜನರು ಒಪ್ಪಿಕೊಳ್ಳುವುದಿಲ್ಲ' ಎಂದು ನಡೆಯುತ್ತಿರುವ ವಿವಾದದ ನಡುವೆ ಹೇಳಿದ್ದಾರೆ.
ಕಮಲ್ ಹಾಸನ್ ಅವರ ಬೆಂಬಲ ಪಡೆದ ನಿರ್ದೇಶಕ ವೆಟ್ರಿಮಾರನ್ ಅವರ ಹೇಳಿಕೆಯನ್ನು ಖಂಡಿಸಿದ ರಾಜ್ಯಪಾಲರು, ಜನರು ಅವರ ವಿರುದ್ಧ ಧ್ವನಿ ಎತ್ತುತ್ತಾರೆ ಎಂದು ಹೇಳಿದ್ದಾರೆ.
'ಆರಾಧನೆಯ ಪರಿಕಲ್ಪನೆಯು ತಮಿಳರಲ್ಲಿ ಬೇರೂರಿದೆ ಮತ್ತು ಶೈವ ಮತ್ತು ವೈಷ್ಣವ ಧರ್ಮ ಎರಡೂ ಹಿಂದೂಗಳ ಗುರುತುಗಳು. ಚೋಳ ರಾಜನ ಆಳ್ವಿಕೆಯಲ್ಲಿ ನಿರ್ಮಿಸಲಾದ ತಂಜಾವೂರಿನ ಬೃಹತ್ ಬೃಹದೇಶ್ವರ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ತಾನು ಬೆಳೆದಿದ್ದೇನೆ' ಎಂದು ಸೌಂದರರಾಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿಮಾರನ್ ಹೇಳಿದ್ದೇನು?
ಮಣಿರತ್ನಂ ಅವರ PS-1 ಬಿಡುಗಡೆಯಾದ ಒಂದು ದಿನದ ನಂತರ, ರಾಷ್ಟ್ರೀಯ ಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್, PS-1 ನಲ್ಲಿ ಚಿತ್ರಿಸಲಾಗಿರುವಂತೆ ರಾಜ ರಾಜ ಚೋಳ ಹಿಂದೂ ಅಲ್ಲ ಎಂದು ಹೇಳಿದ್ದರು.
ತಮಿಳಿನ ಗುರುತನ್ನು ಕದಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ವೆಟ್ರಿಮಾರನ್ ಆರೋಪಿಸಿದ್ದಾರೆ. "ಅವರು ಈಗಾಗಲೇ ತಿರುವಳ್ಳುವರ್ ಅವರನ್ನು ಕೇಸರಿಮಯಗೊಳಿಸಲು ಪ್ರಯತ್ನಿಸಿದ್ದಾರೆ. ನಾವು ಅದಕ್ಕೆ ಎಂದಿಗೂ ಅವಕಾಶ ನೀಡಬಾರದು. ತಮಿಳುನಾಡು ಜಾತ್ಯತೀತ ರಾಜ್ಯವಾಗಿ ಉಳಿದಿದೆ, ಬಾಹ್ಯ ಶಕ್ತಿಗಳನ್ನು ವಿರೋಧಿಸುತ್ತದೆ "ಎಂದು ವೆಟ್ರಿಮಾರನ್ ಹೇಳಿದ್ದರು.
ರಾಜ ರಾಜ ಚೋಳನ ಅವಧಿಯಲ್ಲಿ ಹಿಂದೂ ಧರ್ಮ ಇರಲಿಲ್ಲ!
ವೆಟ್ರಿಮಾರನ್ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾದಾಗ, ಕಮಲ್ ಹಾಸನ್ ಅವರ ಹೇಳಿಕೆಗಳನ್ನು ಬೆಂಬಲಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಾಜ ರಾಜ ಚೋಳನ ಅವಧಿಯಲ್ಲಿ ಹಿಂದೂ ಧರ್ಮ ಇರಲಿಲ್ಲ ಎಂದು ಹೇಳಿದ್ದರು.
"ವೈನವಂ, ಶಿವಂ ಮತ್ತು ಸಮಾನಂ ಇತ್ತು ಮತ್ತು ಹಿಂದೂ ಪದವನ್ನು ಬ್ರಿಟಿಷರು ರಚಿಸಿದರು, ಏಕೆಂದರೆ, ಇವುಗಳನ್ನು ಸಾಮೂಹಿಕವಾಗಿ ಹೇಗೆ ಉಲ್ಲೇಖಿಸಬೇಕೆಂದು ಅವರಿಗೆ ತಿಳಿದಿರಲಿಲ್ಲ. ಅವರು ಹೇಗೆ ತುತ್ತುಕುಡಿಯನ್ನು ಹೇಗೆ ಟುಟಿಕೋರಿನ್ ಆಗಿ ಬದಲಾಯಿಸಿದ್ದರೋ ಇದು ಹಾಗೆಯೇ" ಎಂದು ಕಮಲ್ ಹಾಸನ್ ಹೇಳಿದ್ದರು.
ಅಂದಿನ ಯುಗದಲ್ಲಿ ಹಲವಾರು ಧರ್ಮಗಳು ಇದ್ದವು. 8ನೇ ಶತಮಾನದಲ್ಲಿ ಆದಿಶಂಕರರು 'ಷಣ್ಮತ ಸ್ತಬನಂ' ಅನ್ನು ರಚಿಸಿದರು ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಚೋಳ ರಾಜ ನಿರ್ಮಿಸಿದ ಚರ್ಚ್, ಮಸೀದಿಗಳನ್ನು ತೋರಿಸಲಿ
ರಾಜರಾಜ ಚೋಳ ನಿಜವಾಗಿಯೂ ಹಿಂದೂ ರಾಜನಾಗಿದ್ದ ಎಂದು ಬಿಜೆಪಿಯ ಎಚ್. ರಾಜಾ ಹೇಳಿದ್ದಾರೆ.
"ನನಗೆ ವೆಟ್ರಿಮಾರನ್ ಅವರಂತೆ ಇತಿಹಾಸದ ಬಗ್ಗೆ ಅಷ್ಟಾಗಿ ತಿಳಿದಿಲ್ಲ, ಆದರೆ, ರಾಜ ರಾಜ ಚೋಳ ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಅವರು ಎತ್ತಿ ತೋರಿಸಲಿ. ರಾಜ ತನ್ನನ್ನು ತಾನು ಶಿವಪಾದ ಶೇಖರನ್ ಎಂದು ಕರೆದುಕೊಂಡಿದ್ದಾರೆ. ಹಾಗಾದರೆ ಅವರು ಹಿಂದೂ ಅಲ್ಲವೇ?" ಎಂದು ಕಿಡಿ ಕಾರಿದ್ದಾರೆ.
ರಾಜ ರಾಜ ಚೋಳನ ಕುರಿತಾದ ಹೇಳಿಕೆ ತಮಿಳುನಾಡಿನಲ್ಲಿ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ.
2019 ರಲ್ಲಿ, ಚಲನಚಿತ್ರ ನಿರ್ದೇಶಕ ಪ.ರಂಜಿತ್ ಅವರು ರಾಜ ರಾಜ ಚೋಳನನ್ನು ಟೀಕಿಸಿ ವಿವಾದವನ್ನು ಹುಟ್ಟುಹಾಕಿದ್ದರು. ಹಿಂದಿನ ಅರಸರ ಆಡಳಿತ ದಲಿತರ ಪಾಲಿಗೆ ಕರಾಳ ಯುಗವಾಗಿತ್ತು ಎಂದು ಆರೋಪಿಸಿದ್ದರು.
"ರಾಜ ರಾಜ ಚೋಳನ ಆಳ್ವಿಕೆಯಲ್ಲಿ ದಲಿತರಿಂದ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲಾಯಿತು. ಜಾತಿ ದಬ್ಬಾಳಿಕೆಯ ಹಲವು ರೂಪಗಳು ಪ್ರಾರಂಭವಾಯಿತು" ಎಂದು ಪ.ರಂಜಿತ್ ಆರೋಪಿಸಿದ್ದರು.