ಸೌದೆ ಮಾರಿ ಮಗನಿಗೆ ಐಐಟಿ ಸೀಟು ಗಿಟ್ಟಿಸಿಕೊಟ್ಟ ದಾಂತೇವಾಡದ ತಾಯಿ
ದಾಂತೇವಾಡ (ಛತ್ತೀಸ್ ಗಢ), ಜೂನ್ 15: ಮಗ ಜನಿಸಿ ಆಗಿನ್ನೂ ಹತ್ತೇ ತಿಂಗಳು. ಮನೆಯ ಸಕಲ ಜವಾಬ್ದಾರಿಯ ಹೊಣೆ ಹೊತ್ತ ಪತಿಯ ಅಕಾಲಿಕ ಮರಣ! ಅನಕ್ಷರಸ್ಥ ಹೆಣ್ಣು ಮಗಳೊಬ್ಬಳು ಆ ಸಮಯದಲ್ಲಿ ಏನು ಮಾಡೋಕೆ ಸಾಧ್ಯ?
ಕೈಯಲ್ಲಿ ಕೆಲಸವಿಲ್ಲ, ಆದಾಯದ ಮೂಲವೆನ್ನುವುದೇ ಇಲ್ಲ, ಕಂಕಳಲ್ಲಿ ಹಸುಗೂಸು... ದಿಕ್ಕು ತೋಚದಾದಾಗ ಕಂಡಿದ್ದು ಸೌದೆ ಮಾರುವ ಕೆಲಸ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಆಕೆ ಆರಿಸಿಕೊಂಡ ಕೆಲಸವೇ ಮುಂದೆ ಮಗ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದಲ್ಲಿ ಸೀಟು ಪಡೆಯುವಲ್ಲಿಯವರೆಗೂ ಅವರನ್ನು ಕಾದಿದೆ.

ಜೂನ್ 11 ರಂದು ಪ್ರಕರಣವಾದ ಐಐಟಿ ಪ್ರವೇಶಕ್ಕಾಗಿ ನಡೆದ ಜಾಂಯಿಂಟ್ ಎಂಟರೆನ್ಸ್ ಪರೀಕ್ಷೆಯ(JEE) ಫಲಿತಾಂಶದಲ್ಲಿ, ಉತ್ತಮ ರ್ಯಾಂಕ್ ಪಡೆದು ಭಾರತದ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೀಟು ಖಾತ್ರಿ ಮಾಡಿಕೊಂಡಿದ್ದಾರೆ ವಾಮನ್ ಮಾಂಡವಿ. ಇವರು ಮೂಲತಃ ಛತ್ತೀಸ್ ಗಡದ ದಾಂತೇವಾಡದ ಕಿರಂದುಲ್ ಎಂಬ ಹಳ್ಳಿಯ ಬುಡಕಟ್ಟು ಜನಾಂಗದ ಯುವಕ. ಓದಿದ್ದು ಸರ್ಕಾರಿ ಶಾಲೆ- ಕಾಲೇಜಿನಲ್ಲೇ.
ಮನೆಯಲ್ಲಿ ಸಾಕಷ್ಟು ಬಡತನವಿದ್ದರೂ ಮಗನು ಓದುವುದನ್ನು ನಿಲ್ಲಿಸುವುದಕ್ಕೆ ತಾಯಿ ಚಾಮ್ರೋ ರಾಮ್ ಮಾಂಡವಿ ಎಂದಿಗೂ ಅವಕಾಶ ಮಾಡಿಕೊಡಲಿಲ್ಲ. ಸರ್ಕಾರ, ಜಿಲ್ಲಾಡಳಿತ, ಗ್ರಾಮ ಪಂಚಾಯತ್ ಗಳು ಬಡ ಮಕ್ಕಳಿಗೆ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಿದ್ದರಿಂದ ಹಣಕಾಸಿನ ಹೊರೆ ಹೆಚ್ಚು ಕಾಡಲಿಲ್ಲ.
ಐಐಟಿ ಸೇರಿದ ಮೇಲೆ ಮಗನ ಓದಿಗೆ ಬೇಕಾಗುವ ಖರ್ಚನ್ನು ಸೌದೆ ಮಾರಿಯೇ ಹೊಂದಿಸುತ್ತೇನೆ ಎಂದು ಆತ್ಮವಿಶ್ವಾಸದಲ್ಲೇ ಹೇಳುತ್ತಾರೆ ತಾಯಿ. ಆತ ನಮ್ಮಂತೆ ಅನಕ್ಷರಸ್ಥನಾಗುವುದು ನನಗೆ ಇಷ್ಟವಿಲ್ಲ. ಆತ ಎಲ್ಲರೂ ಗೌರವಿಸುವಂಥ ವ್ಯಕ್ತಿಯಾಗಬೇಕು ಎನ್ನುತ್ತ ತಾಯಿ ಆನಂದ ಬಾಷ್ಪ ಸುರಿಸುತ್ತಾರೆ.
'ನನ್ನ ತಾಯಿಯೇ ನನಗೆ ಸ್ಫೂರ್ತಿ. ನಾನು ಏನೇ ಸಾಧನೆ ಮಾಡಿದ್ದರೂ ಅದಕ್ಕೆ ಕಾರಣ ನನ್ನ ತಾಯಿಯೇ. ತಾಯಿಯ ಕನಸುಗಳನ್ನು ಈಡೇರಿಸುವುದೇ ನನ್ನ ಗುರಿ' ಎಂದು ವಾಮನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಛತ್ತೀಸ್ ಗಡದ ದಾಂತೇವಾಡ ಎಂದೊಡನೆ ಕಣ್ಣಿಗೆ ಬರುವುದು ಮಾವೋವಾದಿಗಳ ಅಟ್ಟಹಾಸ. 2010 ರಲ್ಲಿ 76 ಸಿಆರ್ ಪಿಎಫ್ ಯೋಧರ ಮಾರಣಹೋಮ ಮಾಡಿದ ಆ ಘಟನೆ ನೆನಪಾಗಿ, ಆಕ್ರೋಶ ಹುಟ್ಟುತ್ತದೆ. ಆದರೆ ಇದೀಗ ದಾಂತೇವಾಡದ ಕುಖ್ಯಾತಿಯನ್ನು ಮರೆಯಾಗಿಸಿ, ಅದಕ್ಕೊಂದು ಉತ್ತಮ ಹಣೆಪಟ್ಟಿ ನೀಡಲು ಹೊರಟಿದ್ದಾರೆ ಈ ಯುವಕ.












Click it and Unblock the Notifications