ಪೌರತ್ವ ತಿದ್ದುಪಡಿ ಮಸೂದೆ: ಭಾರತ್ ಬಂದ್ ಗೆ ಕರೆ
ಬೆಂಗಳೂರು, ಡಿ 28: ದೇಶಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ, ಭಾರತ್ ಬಂದ್ ಗೆ ಕರೆನೀಡಲಾಗಿದೆ.
ಎಡಪಕ್ಷಗಳು ಜನವರಿ 8, 2020ರಂದು (ಬುಧವಾರ) ಬಂದ್ ಗೆ ಕರೆನೀಡಿದೆ. ಇದಕ್ಕೂ ಮುನ್ನ, "ಜನವರಿ ಒಂದರಿಂದ ಏಳರವರೆಗೆ ಜನಜಾಗೃತಿ ಆಂದೋಲನ ನಡೆಸಲು ನಿರ್ಧರಿಸಲಾಗಿದೆ" ಎಂದು ಸಿಪಿಐ ಮುಖಂಡರು ಹೇಳಿದ್ದಾರೆ.
"ಪೌರತ್ವ ತಿದ್ದುಪಡಿ, NRC ಮತ್ತು ಕೇಂದ್ರ ಸರಕಾರದ ಧೋರಣೆಯ ವಿರುದ್ದ ಭಾರತ್ ಬಂದ್ ಗೆ ಕರೆನೀಡಲಾಗಿದೆ" ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ತಿಳಿಸಿದ್ದಾರೆ.
"ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ನಿರುದ್ಯೋಗ ಮುಂತಾದ ಸಮಸ್ಯೆಗಳು ತಾಂಡವಾಡುತ್ತಿದೆ. ಇದರಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯಲು, ಪೌರತ್ವ ಮಸೂದೆಯನ್ನು ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿದೆ" ಎಂದು ರಾಜಾ ದೂರಿದ್ದಾರೆ.
"ರಾಜಕೀಯ ಮತ್ತು ಸಾರ್ವಜನಿಕರ ವಿಚಾರದಲ್ಲಿ, ಸೇನೆ ತಲೆಹಾಕಿದ ಉದಾಹರಣೆಗಳಿಲ್ಲ. ಆದರೆ, ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪೌರತ್ವದ ವಿಚಾರದ ಹೋರಾಟದ ಬಗ್ಗೆ ಹೇಳಿಕೆ ನೀಡಿರುವುದು ಕಳವಳಕಾರಿ" ಎಂದು ರಾಜಾ, ಬೇಸರ ವ್ಯಕ್ತಪಡಿಸಿದ್ದಾರೆ.
"ಭಾರತ್ ಬಂದ್ ಸಂಬಂಧದ ರೂಪುರೇಷೆಗಳ ಬಗ್ಗೆ ಮುಂದಿನ ಕೆಲವು ದಿನಗಳಲ್ಲಿ ವಿವರಣೆ ನೀಡಲಾಗುವುದು. ಬಿಜೆಪಿ ಮತ್ತು ಸಂಘ ಪರಿವಾರವೇ ಈ ದೇಶದ ತುಕ್ಡೆತುಕ್ಡೆ ಗ್ಯಾಂಗ್" ಎಂದು ರಾಜಾ ಹೇಳಿದ್ದಾರೆ.