ವಿರೋಧ ಪಕ್ಷಗಳಿಂದ ಹಳೆ ನೋಟುಗಳ ತಿಂಗಳ ತಿಥಿ
ನವದೆಹಲಿ, ಡಿಸೆಂಬರ್ 08 : ಹಳೆ 500 ಮತ್ತು 1000 ನೋಟುಗಳ ಮೇಲೆ 'ಸರ್ಜಿಕಲ್ ಸ್ಟ್ರೈಕ್' ನಡೆದು ಸರಿಯಾಗಿ ಒಂದು ತಿಂಗಳಾಗುತ್ತಿದ್ದಂತೆ ವಿರೋಧಪಕ್ಷಗಳು ನರೇಂದ್ರ ಮೋದಿ ಸರಕಾರದ ವಿರುದ್ಧ ರಣಕಹಳೆ ಊದಿವೆ. ನವೆಂಬರ್ 8ರಂದು ಸಂಜೆ 8 ಗಂಟೆಯ ಸುಮಾರಿಗೆ ಮೋದಿ ಹಳೆ ನೋಟು ಹಿಂತೆಗೆಯುವ ಯಜ್ಞಕ್ಕೆ ಹವಿಸ್ಸು ಹಾಕಿದ್ದರು.
ನವೆಂಬರ್ 9ರಂದು ಕರಾಳ ದಿನ ಆಚರಿಸಬೇಕೆಂದು ವಿರೋಧಪಕ್ಷಗಳು ನಿರ್ಧರಿಸಿದ್ದು, ಅದಕ್ಕೆ ಪೂರ್ವಭಾವಿಯಾಗಿ ಸಂಸತ್ತಿನ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆ ಎದಿರು ಅಪನಗದೀಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಸೀತಾರಾಂ ಯಚೂರಿ, ಗುಲಾಂ ನಬಿ ಆಝಾದ್, ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾಧಿತ್ಯ ಸಿಂಧ್ಯಾ ಮುಂತಾದವರು ಭಾಗಿಯಾಗಿದ್ದಾರೆ.[ಹೈದರಾಬಾದ್ : ಐಟಿ ದಾಳಿ, 17 ಲಕ್ಷ ಅಕ್ರಮ ಹಣ ವಶ]

'1 Month of Death Anniversary' ಎಂಬ ಫಲಕಗಳನ್ನು ತಗುಲಿಹಾಕಿಕೊಂಡು ನೂರಾರು ಕಾರ್ಯಕರ್ತರು ಮೈನಡುಗಿಸುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 500 ಮತ್ತು 1000 ನೋಟುಗಳ ಫಲಕಕ್ಕೆ ಹೂವಿನ ಹಾರ ಹಾಕಿ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ನರೇಂದ್ರ ಮೋದಿ ಅವರು ಎಲ್ಲ ಸರಿಪಡಿಸಲು ಮೊದಲಿಗೆ 5 ದಿನ ಕೇಳಿದರು, ಐದು ವಾರಗಳು ಉರುಳಿದವು, ಈಗ 50 ದಿನಗಳೂ ಉರುಳುವ ಹಂತಕ್ಕೆ ಬಂದಿವೆ. ಆದರೆ, ಈ ಒಂದು ತಿಂಗಳಲ್ಲಿ ಶೇ.50ರಷ್ಟು ಕೂಡ ಪರಿಸ್ಥಿತಿ ಸುಧಾರಿಸಲಿಲ್ಲ ಎಂದರು.
ರಾಹುಲ್ ಗಾಂಧಿಯವರು, ಅಪನಗದೀಕರಣ ಬಡವರನ್ನು, ರೈತರನ್ನು, ದಿನಗೂಲಿ ನೌಕರರ ಜೀವನ ಸರ್ವನಾಶ ಮಾಡಿದೆ. ಈ ವಿಷಯದ ಮೇಲೆ ಚರ್ಚೆಯಾಗಬೇಕು. ಮತಚಲಾವಣೆಯಾಗಬೇಕು. ಆದರೆ, ಇದು ಕೇಂದ್ರ ಸರಕಾರಕ್ಕೆ ಬೇಕಿಲ್ಲ. ಮೋದಿ ಪಲಾಯನ ಮಾಡುತ್ತಿದ್ದಾರೆ. ಈ ಬಾರಿ ಸದನಕ್ಕೆ ಬಂದರೆ ಅವರನ್ನು ಬಿಡುವುದಿಲ್ಲ ಎಂದು ಕ್ರೋಧದ ಕಿಡಿ ಕಾರಿದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ಅನಂತ್ ಕುಮಾರ್ ಅವರು, ಮಾಧ್ಯಮಗಳ ಲಕ್ಷ್ಯವನ್ನು ಸೆಳೆಯಲೆಂದು ವಿರೋಧ ಪಕ್ಷದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಸದನದಲ್ಲಿ ಚರ್ಚೆಗೆ ಕೇಂದ್ರ ಯಾವತ್ತೂ ತಯಾರಿದೆ ಎಂದರು.












Click it and Unblock the Notifications