ವಿರೋಧ ಪಕ್ಷಗಳಿಂದ ಹಳೆ ನೋಟುಗಳ ತಿಂಗಳ ತಿಥಿ
ನವದೆಹಲಿ, ಡಿಸೆಂಬರ್ 08 : ಹಳೆ 500 ಮತ್ತು 1000 ನೋಟುಗಳ ಮೇಲೆ 'ಸರ್ಜಿಕಲ್ ಸ್ಟ್ರೈಕ್' ನಡೆದು ಸರಿಯಾಗಿ ಒಂದು ತಿಂಗಳಾಗುತ್ತಿದ್ದಂತೆ ವಿರೋಧಪಕ್ಷಗಳು ನರೇಂದ್ರ ಮೋದಿ ಸರಕಾರದ ವಿರುದ್ಧ ರಣಕಹಳೆ ಊದಿವೆ. ನವೆಂಬರ್ 8ರಂದು ಸಂಜೆ 8 ಗಂಟೆಯ ಸುಮಾರಿಗೆ ಮೋದಿ ಹಳೆ ನೋಟು ಹಿಂತೆಗೆಯುವ ಯಜ್ಞಕ್ಕೆ ಹವಿಸ್ಸು ಹಾಕಿದ್ದರು.
ನವೆಂಬರ್ 9ರಂದು ಕರಾಳ ದಿನ ಆಚರಿಸಬೇಕೆಂದು ವಿರೋಧಪಕ್ಷಗಳು ನಿರ್ಧರಿಸಿದ್ದು, ಅದಕ್ಕೆ ಪೂರ್ವಭಾವಿಯಾಗಿ ಸಂಸತ್ತಿನ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆ ಎದಿರು ಅಪನಗದೀಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಸೀತಾರಾಂ ಯಚೂರಿ, ಗುಲಾಂ ನಬಿ ಆಝಾದ್, ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾಧಿತ್ಯ ಸಿಂಧ್ಯಾ ಮುಂತಾದವರು ಭಾಗಿಯಾಗಿದ್ದಾರೆ.[ಹೈದರಾಬಾದ್ : ಐಟಿ ದಾಳಿ, 17 ಲಕ್ಷ ಅಕ್ರಮ ಹಣ ವಶ]
'1 Month of Death Anniversary' ಎಂಬ ಫಲಕಗಳನ್ನು ತಗುಲಿಹಾಕಿಕೊಂಡು ನೂರಾರು ಕಾರ್ಯಕರ್ತರು ಮೈನಡುಗಿಸುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 500 ಮತ್ತು 1000 ನೋಟುಗಳ ಫಲಕಕ್ಕೆ ಹೂವಿನ ಹಾರ ಹಾಕಿ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ನರೇಂದ್ರ ಮೋದಿ ಅವರು ಎಲ್ಲ ಸರಿಪಡಿಸಲು ಮೊದಲಿಗೆ 5 ದಿನ ಕೇಳಿದರು, ಐದು ವಾರಗಳು ಉರುಳಿದವು, ಈಗ 50 ದಿನಗಳೂ ಉರುಳುವ ಹಂತಕ್ಕೆ ಬಂದಿವೆ. ಆದರೆ, ಈ ಒಂದು ತಿಂಗಳಲ್ಲಿ ಶೇ.50ರಷ್ಟು ಕೂಡ ಪರಿಸ್ಥಿತಿ ಸುಧಾರಿಸಲಿಲ್ಲ ಎಂದರು.
ರಾಹುಲ್ ಗಾಂಧಿಯವರು, ಅಪನಗದೀಕರಣ ಬಡವರನ್ನು, ರೈತರನ್ನು, ದಿನಗೂಲಿ ನೌಕರರ ಜೀವನ ಸರ್ವನಾಶ ಮಾಡಿದೆ. ಈ ವಿಷಯದ ಮೇಲೆ ಚರ್ಚೆಯಾಗಬೇಕು. ಮತಚಲಾವಣೆಯಾಗಬೇಕು. ಆದರೆ, ಇದು ಕೇಂದ್ರ ಸರಕಾರಕ್ಕೆ ಬೇಕಿಲ್ಲ. ಮೋದಿ ಪಲಾಯನ ಮಾಡುತ್ತಿದ್ದಾರೆ. ಈ ಬಾರಿ ಸದನಕ್ಕೆ ಬಂದರೆ ಅವರನ್ನು ಬಿಡುವುದಿಲ್ಲ ಎಂದು ಕ್ರೋಧದ ಕಿಡಿ ಕಾರಿದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ಅನಂತ್ ಕುಮಾರ್ ಅವರು, ಮಾಧ್ಯಮಗಳ ಲಕ್ಷ್ಯವನ್ನು ಸೆಳೆಯಲೆಂದು ವಿರೋಧ ಪಕ್ಷದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಸದನದಲ್ಲಿ ಚರ್ಚೆಗೆ ಕೇಂದ್ರ ಯಾವತ್ತೂ ತಯಾರಿದೆ ಎಂದರು.