ಮದನ್ ಮೋಹನ್ ಮಾಳವೀಯ ಜೀವನ ಅವಲೋಕನ
'ಭಾರತದ ನಿರ್ಮಾತೃ', ನನ್ನ ಹಿರಿಯಣ್ಣ ಎಂದು ಮಹಾತ್ಮಾ ಗಾಂಧೀಜಿ ಅವರಿಂದ ಕರೆಸಿಕೊಂಡಿದ್ದ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಸಮಾಜ ಸುಧಾರಕ, ಆಸೀಮ ದೇಶಭಕ್ತ ಮದನ್ ಮೋಹನ್ ಮಾಳವೀಯ ಅವರ 153ನೇ ಹುಟ್ಟುಹಬ್ಬಕ್ಕೂ ಮುನ್ನ ದಿನ ನರೇಂದ್ರ ಮೋದಿ ಸರ್ಕಾರ ದೇಶದ ಅತ್ಯುನ್ನತ ನಾಗರೀಕ ಗೌರವ 'ಭಾರತ ರತ್ನ' ಪ್ರಶಸ್ತಿ ಘೋಷಿಸಿದೆ.
ಏಷ್ಯಾದ ಅತಿದೊಡ್ಡ ವಸತಿ ಶಾಲೆ, ವಿಶ್ವದ ದೊಡ್ಡ ಶಾಲೆಗಳಲ್ಲಿ ಒಂದೆನಿಸಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಿರ್ಮಾತೃವಾಗಿರುವ ಮದನ್ ಮೋಹನ್ ಮಾಳವೀಯ ಅವರು ಬಿಟ್ಟು ಹೋಗಿರುವ ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮ ಕರ್ತವ್ಯವಾಗಿದೆ.
ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದ ಮಾಳವೀಯ ಅವರು ರಾಜಕಾರಣಿಗಿಂತ ಶಿಕ್ಷಣ ತಜ್ಞ, ಸಮಾಜ ಸುಧಾರಕ, ನವ ಭಾರತ ನಿರ್ಮಾಣಗಾರರಾಗಿ ಗುರುತಿಸಬಹುದು. ಮಾಳವೀಯ ಅವರ ಬದುಕಿನ ಪ್ರಮುಖ ಘಟ್ಟಗಳತ್ತ ಒಂದು ಅವಲೋಕನ ಕಾಲಾನುಕ್ರಮವಾಗಿ ಇಂತಿದೆ: [ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ]

1861 : ಅಲಹಾಬಾದಿನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಡಿ.25 ರಂದು ಪಂಡಿತ್ ಭೈಜನಾಥ್ ಹಾಗೂ ಮೀನಾ ದೇವಿ ದಂಪತಿಗೆ ಜನಿಸಿದರು.
1868: ಹೊಸದಾಗಿ ಆರಂಭವಾದ ಸರ್ಕಾರಿ ಪ್ರೌಢಶಾಲೆಗೆ ಸೇರ್ಪಡೆ. ಬಾಲ್ಯದಿಂದಲೇ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ ಬಗ್ಗೆ ಒಲವು.
1878: ಕುಂದನ್ ದೇವಿ ಅವರೊಂದಿಗೆ ವಿವಾಹ.
1879: ಮೂಯಿರ್ ಸೆಂಟ್ರಲ್ ಕಾಲೇಜ್ ನಿಂದ ಮೆಟ್ರಿಕ್ಯುಲೇಷನ್ ಪಡೆದುಕೊಂಡರು.
1884: ಕಲ್ಕತ್ತಾ ವಿವಿಯಿಂದ ಬಿಎ ಪದವಿ ಅಲಹಾಬಾದಿನಲ್ಲಿ 40 ರು ಸಂಬಳಕ್ಕೆ ಶಿಕ್ಷಕ ವೃತ್ತಿ ಆರಂಭ.
1886: ದಾದಾಭಾಯಿ ನವರೋಜಿ ಅವರ ನೇತೃತ್ವದಲ್ಲಿ ನಡೆದ 2ನೇ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು.
1887: ನ್ಯಾಷಲಿಸ್ಟ್ ವೀಕ್ಲಿಯಲ್ಲಿ ಸಂಪಾದಕರಾಗಿ ವೃತ್ತಿ.
1889: ಸಂಪಾದಕ ವೃತ್ತಿಯನ್ನು ತೊರೆದು ಅಲಹಾಬಾದಿಗೆ ತೆರಳಿ ಎಲ್ ಎಲ್ ಬಿಗೆ ಸೇರಿಕೊಂಡರು.
1891: ಎಲ್ಎಲ್ ಬಿ ಮುಗಿಸಿ ಅಲಹಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ವೃತ್ತಿ ಆರಂಭ.
1893: ಅಲಹಾಬಾದ್ ಹೈಕೋರ್ಟಿನಲ್ಲಿ ಕಾನೂನಿನ ವ್ಯಾಸಂಗ.
1907: ಅಭ್ಯುದಯ ಹೆಸರಿನ ಹಿಂದಿ ವಾರಪತ್ರಿಕೆ ಆರಂಭಿಸಿದರು.
1909: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
1910: ಮರ್ಯಾದಾ ಹೆಸರಿನಲ್ಲಿ ಹಿಂದಿ ಮಾಸಿಕ ಆರಂಭಿಸಿದರು.
1911: ಸಮಾಜ ಉದ್ಧಾರಕ್ಕಾಗಿ ವಕೀಲಿಕೆ ವೃತ್ತಿಯನ್ನು ತೊರೆದರು.
1912-1926: ಇಂಪಿರಿಯಲ್ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.
1914-1946: ಅಖಿಲ ಭಾರತ ಸೇವಾ ಸಮಿತಿ ಅಧ್ಯಕ್ಷರಾದರು.
1915: ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮಸೂದೆ ಮಂಡನೆಯಲ್ಲಿ ಮಹತ್ವದ ಪಾತ್ರವಹಿಸಿದರು.
1916: ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆ.
1916-1918: ಕೈಗಾರಿಕಾ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
1919-1939: ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕುಲಪತಿಗಳಾಗಿದ್ದರು.
1924-1946: ಹಿಂದೂಸ್ತಾನ್ ಟೈಮ್ಸ್ ನಿರ್ದೇಶಕ ಮಂಡಳಿಯ ಮುಖ್ಯಸ್ಥರಾಗಿದ್ದರು.
1928: ಸೈಮನ್ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
1931: ಮೊದಲ ದುಂಡು ಮೇಜಿನ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
1932: ಸ್ವದೇಶಿ ವಸ್ತು ಖರೀದಿ ಹೆಚ್ಚಿಸಲು ಚಳವಳಿ ಹಮ್ಮಿಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದರು.
1939: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಜೀವ ಪೋಷಕರಾದರು.
1941: ಗೋರಕ್ಷಾ ಮಂಡಳ ಸ್ಥಾಪಿಸಿದರು.
1946: ನ.12ರಂದು ಕಾಯಿಲೆಯಿಂದ ಬಳಲುತ್ತಿದ್ದ ಮದನ್ ಮೋಹನ್ ಮಾಳವೀಯ ಅವರು ಕೊನೆಯುಸಿರೆಳೆದರು.












Click it and Unblock the Notifications