ಗುಜರಾತಿನ ಮೋರ್ಬಿ ತೂಗು ಸೇತುವೆ ದುರಂತದ ಹಿಂದಿನ ರಹಸ್ಯ ಬಹಿರಂಗ
ನವದೆಹಲಿ, ನವೆಂಬರ್ 05: ಗುಜರಾತ್ ನಲ್ಲಿ ನಡೆದ ಮೋರ್ಬಿ ತೂಗು ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯಲ್ಲಿ ಆಘಾತಕಾರಿ ಅಂಶವೊಂದು ಹೊರ ಬಿದ್ದಿದೆ. ಈ ಸೇತುವೆ ನವೀಕರಣಕ್ಕಾಗಿ ನಿಗದಿಪಡಿಸಿದ್ದ 2 ಕೋಟಿ ರೂಪಾಯಿ ಹಣದಲ್ಲಿ ಗುತ್ತಿಗೆದಾರ ಕಂಪನಿಯು ಕೇವಲ 12 ಲಕ್ಷ ರೂಪಾಯಿ ಅನ್ನು ಖರ್ಚು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊರ್ಬಿಯಲ್ಲಿನ ವಸಾಹತುಶಾಹಿ ಕಾಲದ ತೂಗು ಕೇಬಲ್ ಸೇತುವೆಯ ನವೀಕರಣ ಮತ್ತು ದುರಸ್ತಿ ಕಾಮಗಾರಿಯನ್ನು ಅಜಂತಾ ಅಂಗಸಂಸ್ಥೆಯಾಗಿದ್ದ ಒರೆವಾ ಸಮೂಹಕ್ಕೆ ನೀಡಲಾಗಿತ್ತು. ಈ ಸೇತುವೆ ದುರಸ್ಥಿಗಾಗಿ 2 ಕೋಟಿ ರೂಪಾಯಿ ಹಣವನ್ನು ನಿಗದಿಪಡಿಸಲಾಗಿತ್ತು. ಆದರೆ ಕಂಪನಿಯು ನಿಗದಿಪಡಿಸಿರುವ ಒಟ್ಟು ಮೊತ್ತದ ಶೇ.6ರಷ್ಟು ಹಣವನ್ನು ಮಾತ್ರ ನವೀಕರಣಕ್ಕೆ ಬಳಸಿಕೊಂಡಿದೆ. ಅಂದರೆ 2 ಕೋಟಿ ರೂಪಾಯಿ ಹಣದಲ್ಲಿ ಕೇವಲ 12 ಲಕ್ಷ ರೂಪಾಯಿ ಅನ್ನು ಬಳಸಿಕೊಂಡು ನವೀಕರಣ ಮತ್ತು ದುರಸ್ಥಿ ಕಾರ್ಯವನ್ನು ಮುಗಿಸಿರುವುದು ತನಿಖೆಯಿಂದ ಗೊತ್ತಾಗಿದೆ.
ಇದೇ ವರ್ಷದ ಮಾರ್ಚ್ನಲ್ಲಿ ಮೋರ್ಬಿ ಸೇತುವೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದ್ದ ಓರೆವಾ ಗ್ರೂಪ್ ಅಧ್ಯಕ್ಷ ಜಯಸುಖ್ ಪಟೇಲ್ ಅಕ್ಟೋಬರ್ 24 ರಂದು ಗುಜರಾತಿ ಹೊಸ ವರ್ಷದಂದು ಸೇತುವೆಯನ್ನು ಮತ್ತೆ ತೆರೆಯಲು ಸುರಕ್ಷಿತವಾಗಿದೆ ಎಂದು ಘೋಷಿಸಿದ್ದರು.

ಒರೆವಾ ಗ್ರೂಪ್ನ ವಿರುದ್ಧ ಅಕ್ರಮದ ಆರೋಪ
ಮೋರ್ಬಿ ದುರಂತಕ್ಕೆ ಕಾರಣವೇನು ಎಂದು ನಡೆಸಿದ ತನಿಖೆಯಲ್ಲಿ ಒರೆವಾ ಗ್ರೂಪ್ನ ಹಲವಾರು ಅಕ್ರಮಗಳು ಬಹಿರಂಗವಾಗಿವೆ. ಈ ಗ್ರೂಪ್ ನವೀಕರಣವನ್ನು ಉಪ-ಗುತ್ತಿಗೆ ನೀಡಿತು. ಮೋರ್ಬಿ ಸೇತುವೆಯನ್ನು ಸರಿಪಡಿಸುವ ಜವಾಬ್ದಾರಿಯನ್ನು ಧ್ರಂಗಾಧ್ರ ಮೂಲದ ಸಂಸ್ಥೆಯಾದ ದೇವಪ್ರಕಾಶ್ ಸೊಲ್ಯೂಷನ್ಗೆ ನೀಡಿತ್ತು. ಒರೆವಾರಂತೆ, ಉಪಗುತ್ತಿಗೆದಾರರು ಸಹ ಅಂತಹ ಕೆಲಸಕ್ಕೆ ಅಗತ್ಯವಾದ ತಾಂತ್ರಿಕ ಜ್ಞಾನದ ಕೊರತೆಯನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ. ದೇವಪ್ರಕಾಶ್ ಸೊಲ್ಯೂಷನ್ಸ್ನಿಂದ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಸೇತುವೆ ದುರಸ್ತಿಗೆ ಖರ್ಚು ಮಾಡಿರುವ ಹಣ ಎಷ್ಟು ಎಂಬುದನ್ನು ಉಲ್ಲೇಖಿಸಲಾಗಿದೆ.

ಅಜಂತಾ ಕಂಪನಿಯೊಂದಿಗೆ ನಿರ್ವಹಣಾ ಒಪ್ಪಂದ
ಗುಜರಾತಿನ ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಓರೆವಾ ಗ್ರೂಪ್ನ ಮೂಲ ಕಂಪನಿಯಾದ ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ನಡುವೆ 15 ವರ್ಷಗಳ ನಿರ್ವಹಣಾ ಒಪ್ಪಂದಕ್ಕೆ ಮಾರ್ಚ್ 2022ರಲ್ಲಿ ಸಹಿ ಹಾಕಲಾಗಿದ್ದು, ಅದು 2037 ರವರೆಗೆ ಮಾನ್ಯವಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಎಂಟರಿಂದ ಹನ್ನೆರಡು ತಿಂಗಳವರೆಗೆ ನಿರ್ವಹಣಾ ಕೆಲಸಕ್ಕೆ ಹೂಡಿಕೆ ಮಾಡಬೇಕಾಗಿತ್ತು. ಆದಾಗ್ಯೂ, ಕಂಪನಿಯು ಈ ನಿಯಮಗಳನ್ನು ಉಲ್ಲಂಘಿಸಿದೆ. ಮೋರ್ಬಿ ನಾಗರಿಕ ಸಂಸ್ಥೆಗೆ ತಿಳಿಸದೆ ಮುಚ್ಚಿದ ಏಳು ತಿಂಗಳೊಳಗೆ ಸೇತುವೆಯನ್ನು ಪುನಃ ತೆರೆದಿದೆ.

ಮೋರ್ಬಿ ದುರಂತದ ಬಗ್ಗೆ ತನಿಖೆ ವೇಳೆ ತಿಳಿದಿದ್ದೇನು?
* ಈ ಸೇತುವೆಯ ನಿರ್ವಹಣೆಗೆ ಓರೆವಾ ಗ್ರೂಪ್ ನಿಗದಿಪಡಿಸಿದ 2 ಕೋಟಿ ರೂ.ಗಳಲ್ಲಿ ಕೇವಲ 12 ಲಕ್ಷ ರೂಪಾಯಿ ಅನ್ನು ಬಳಸಿಕೊಂಡಿದೆ
* ಓರೆವಾ ಗ್ರೂಪ್ ದುರಸ್ತಿ ಕಾರ್ಯವನ್ನು ಧ್ರಂಗಧ್ರ ಮೂಲದ ಸಂಸ್ಥೆ ದೇವಪ್ರಕಾಶ್ ಸೊಲ್ಯೂಷನ್ಸ್ಗೆ ಉಪ ಗುತ್ತಿಗೆ ನೀಡಿತ್ತು
* ಒರೆವಾದಂತೆ, ದೇವಪ್ರಕಾಶ್ ಸೊಲ್ಯೂಷನ್ಸ್ ಕೂಡ ಅಂತಹ ಕೆಲಸಕ್ಕೆ ಅಗತ್ಯವಾದ ತಾಂತ್ರಿಕ ಜ್ಞಾನವನ್ನು ಹೊಂದಿರುವುದಿಲ್ಲ
* ಮೊರ್ಬಿ ನಗರ ಪಾಲಿಕೆಯ ಮುಖ್ಯ ಅಧಿಕಾರಿ ಸಂದೀಪ್ಸಿನ್ಹ್ ಝಲಾ ಅವರನ್ನು ಅಮಾನತುಗೊಳಿಸಲಾಗಿದೆ
* ರಿಪೇರಿ ಮಾಡಲಾದ ಸೇತುವೆಯನ್ನು ಒರೆವಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ಭಾಯ್ ಪಟೇಲ್ ಉದ್ಘಾಟಿಸಿದ್ದಾರೆ ಎಂದು ವರದಿಯಾಗಿದೆ
* ಈ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲು ಓರೆವಾಗೆ ಅನುಮತಿ ಇಲ್ಲ ಎಂದು ಗುಜರಾತ್ ಅಧಿಕಾರಿಗಳು ಹೇಳಿದ್ದಾರೆ
* ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಓರೆವಾ ಗ್ರೂಪ್ನ ಮೂಲ ಕಂಪನಿಯಾದ ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ನಡುವೆ 15 ವರ್ಷಗಳ ನಿರ್ವಹಣಾ ಒಪ್ಪಂದಕ್ಕೆ ಮಾರ್ಚ್ 2022 ರಲ್ಲಿ ಸಹಿ ಹಾಕಲಾಯಿತು, ಅದು 2037 ರವರೆಗೆ ಮಾನ್ಯವಾಗಿತ್ತು.

ಮೋರ್ಬಿ ಸೇತುವೆ ದುರಂತದಲ್ಲಿ 130ಕ್ಕೂ ಹೆಚ್ಚು ಮಂದಿ ಸಾವು
ಕಳೆದ ಅಕ್ಟೋಬರ್ 30ರ ಭಾನುವಾರ ಮಚ್ಚು ನದಿಗೆ ವ್ಯಾಪಿಸಿರುವ ತೂಗು ಸೇತುವೆ ಕುಸಿದು ಸೇತುವೆಯ ಮೇಲಿದ್ದ ಎಲ್ಲರೂ ನೀರಿನಲ್ಲಿ ಮುಳುಗಿದ್ದು, 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಸೇತುವೆ ಮೇಲೆ ನಿಂತಿದ್ದ ಜನರು ಕ್ಷಣಮಾತ್ರದಲ್ಲಿ ಮುಳುಗಿಹೋದರು. ವರದಿಗಳ ಪ್ರಕಾರ, ವಡೋದರಾದಿಂದ 300 ಕಿಮೀ ದೂರದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಸೇತುವೆಯು ಕೇವಲ 125 ಜನರ ತೂಕವನ್ನು ತೆಗೆದುಕೊಳ್ಳುತ್ತದೆ, ಆದರೆ ಘಟನೆ ಸಂಭವಿಸಿದಾಗ ಸೇತುವೆಯ ಮೇಲೆ ಸುಮಾರು 400 ಜನರು ಇದ್ದರು. ಈ ದುರಂತಂದಲ್ಲಿ ಮೃತಪಟ್ಟವರಿಗೆ ತಲಾ 4 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಪ್ರಧಾನಮಂತ್ರಿ ವಿತ್ತೀಯ ನೆರವು ಘೋಷಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು.
ಸುಮಾರು 7 ತಿಂಗಳ ಹಿಂದೆ ಕಾರ್ಯಾಚರಣೆಯ ಬಳಕೆಗಾಗಿ ಸೇತುವೆಯನ್ನು ಮುಚ್ಚಲಾಗಿತ್ತು. ಓರೆವಾ ಗ್ರೂಪ್ (ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್) ಹೆಸರಿನ ಖಾಸಗಿ ಕಂಪನಿಗೆ ಈ ವರ್ಷದ ಮಾರ್ಚ್ನಲ್ಲಿ ಸೇತುವೆಯನ್ನು ನವೀಕರಿಸಲು ಮತ್ತು ನಿರ್ವಹಿಸಲು ಗುತ್ತಿಗೆ ನೀಡಲಾಯಿತು. ಜುಲ್ತಾ ಪುಲ್ ಎಂದೂ ಕರೆಯಲ್ಪಡುವ ತೂಗು ಸೇತುವೆಯನ್ನು ಈ ವರ್ಷ ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಸೇತುವೆಯ ನವೀಕರಣ ಕಾರ್ಯ ಪೂರ್ಣಗೊಂಡ ನಂತರ ಮತ್ತೆ ತೆರೆಯಲಾಗಿತ್ತು.












Click it and Unblock the Notifications