ಪ್ರಿಯಾಂಕ ಗಾಂಧಿ ಆಪ್ತನಿಂದ, ಸೋನಿಯಾ 'ಪುತ್ರ ವ್ಯಾಮೋಹ'ದ ಬಾಂಬ್
ನವದೆಹಲಿ, ನ 4: ದಶಕಗಳಿಂದ ಕಾಂಗ್ರೆಸ್ಸಿನ ನಿಷ್ಟಾವಂತ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯ ಆಪ್ತರೊಬ್ಬರು ನೀಡಿರುವ ಹೇಳಿಕೆ, ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದೊಡ್ಡಿದೆ.
ಕಾಂಗ್ರೆಸ್ ಯಾಕೆ ದಿನದಿಂದ ದಿನಕ್ಕೆ ಹಿನ್ನಡೆಯನ್ನು ಅನುಭವಿಸುತ್ತಿದೆ ಎನ್ನುವುದರ ಬಗ್ಗೆ ಸೂಕ್ಷ್ಮವಾಗಿ ಹೇಳಿರುವ ಇವರು, ಪಕ್ಷದ ಹಿಂದಿನ ಗತವೈಭವವನ್ನು ಮರುಕಳಿಸಲು ಏನು ಮಾಡಬೇಕು ಎನ್ನುವುದರ ಬಗ್ಗೆಯೂ ಹೇಳಿದ್ದಾರೆ.
ನಿಮಗೆ ತಾಕತ್ತಿದ್ರೆ ಚುನಾವಣೆ ಎದುರಿಸಿ: ಸಿದ್ದರಾಮಯ್ಯಗೆ ಬಿಎಸ್ವೈ ಸವಾಲು
ಕಳೆದ ಲೋಕಸಭಾ ಚುನಾವಣೆಯ ವೇಳೆ, ಪ್ರಿಯಾಂಕ ಗಾಂಧಿಗೆ ಮಾಧ್ಯಮ ಸಲಹೆಗಾರರಾಗಿದ್ದ ಪಂಕಜ್ ಶಂಕರ್, ಹಿರಿಯ ಕಾಂಗ್ರೆಸ್ಸಿಗರ ವಿರುದ್ದ ಕಿಡಿಕಾರಿದ್ದಾರೆ. ಇದಕ್ಕೆ, ಕೂಡಲೇ ಪ್ರತಿಕ್ರಿಯಿಸಿರುವ ಎಐಸಿಸಿ ವಕ್ತಾರರು, "ಶಂಕರ್, ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಯೇ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ಇಷ್ಟಕ್ಕೂ ಸುಮ್ಮನಾಗದ ಪತ್ರಕರ್ತರೂ ಆಗಿರುವ ಪಂಕಜ್ ಶಂಕರ್, ರಾಹುಲ್ ಗಾಂಧಿ ವೈಫಲ್ಯದ ಬಗ್ಗೆ ವೆಬ್ ಸೀರೀಸ್ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಅಧಃಪತನಕ್ಕೆ 'ಪುತ್ರ ವ್ಯಾಮೋಹ'ವೇ ಕಾರಣ ಎಂದು ಇವರು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ
ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದೊಂದಿಗೆ, ಹಲವು ವರ್ಷಗಳ ಒಡನಾಟ ಹೊಂದಿರುವ ಮಾಜಿ ಪತ್ರಕರ್ತ ಪಂಕಜ್ ಶಂಕರ್, "ಪ್ರಿಯಾಂಕಾ ಗಾಂಧಿ ವಾಧ್ರಾ ಮಾತ್ರ ಕಾಂಗ್ರೆಸ್ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಶಕ್ತಿಯನ್ನು ಹೊಂದಿದ್ದಾರೆ. ಆದರೆ, ಸೋನಿಯಾ ಗಾಂಧಿಯವರ ಪುತ್ರ ವ್ಯಾಮೋಹ ದಿಂದಾಗಿ, ಪ್ರಿಯಾಂಕ ಅಗ್ರಪಂಕ್ತಿಗೆ ಬರಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ.
ರಾಹುಲ್ ಗಾಂಧಿ ವೈಫಲ್ಯದ ಬಗ್ಗೆ ವೆಬ್ ಸೀರೀಸ್
ರಾಹುಲ್ ಗಾಂಧಿ ವೈಫಲ್ಯದ ಬಗ್ಗೆ ವೆಬ್ ಸೀರೀಸ್ ಮಾಡಲು ಹೊರಟಿರುವ ಪಂಕಜ್ ಶಂಕರ್, "ನಾನು ತೆಗೆಯಲು ಹೊರಟಿರುವ ವೆಬ್ ಸೀರೀಸ್ ನಲ್ಲಿ, ಕಾಂಗ್ರೆಸ್ ನಾಯಕತ್ವದ ವೈಫಲ್ಯವನ್ನು ಪರಿಚಯಿಸುವ ಅಂಶಗಳು ಇರುತ್ತದೆ" ಎಂದು ಹೇಳಿದ್ದಾರೆ. ಪಂಕಜ್ ಹೇಳಿಕೆ ಸಂಚಲನ ಮೂಡಿಸುತ್ತಿದ್ದತೆಂಯೇ, ಸ್ಪಷ್ಟನೆ ನೀಡಿದ ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲಾ, "ಪಂಕಜ್, ಕಾಂಗ್ರೆಸ್ ಅಥವಾ ಪ್ರಿಯಾಂಕ ಗಾಂಧಿ ಪರವಾಗಿ ಕೆಲಸವೇ ಮಾಡಿಲ್ಲ" ಎನ್ನುವ ಸ್ಪಷ್ಟನೆಯನ್ನು ನೀಡಿದ್ದಾರೆ.
ಪಂಕಜ್ ಅವರ ಹೇಳಿಕೆ ಅವರ ವೈಯಕ್ತಿಕವಾದದ್ದು
"ಪಂಕಜ್ ಅವರ ಹೇಳಿಕೆ ಅವರ ವೈಯಕ್ತಿಕವಾದದ್ದು. ಪ್ರಿಯಾಂಕ ಗಾಂಧಿ ಆಪ್ತರಾಗಿದ್ದರೂ, ಅವರ ಕಚೇರಿಯಲ್ಲಿ ಅವರು ಕೆಲಸ ಮಾಡಿರಲಿಲ್ಲ. ಅವರು ನೀಡುತ್ತಿರುವ ಈ ಹೇಳಿಕೆಗಳು ಪ್ರಚಾರಕ್ಕಾಗಿಯೋ ಅಥವಾ ಬಿಜೆಪಿಯನ್ನು ಓಲೈಸಲೋ ಎನ್ನುವುದು ಗೊತ್ತಿಲ್ಲ" ಎಂದು ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.
ತಾವು ಹೇಳಿದ್ದೇ ಸರಿ, ಅದೇ ನಡೆಯಬೇಕು ಎನ್ನುವ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು
"ತಾವು ಹೇಳಿದ್ದೇ ಸರಿ, ಅದೇ ನಡೆಯಬೇಕು ಎನ್ನುವ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರಿಂದ, ಪಕ್ಷ ಈ ಮಟ್ಟಕ್ಕೆ ಇಳಿದಿದೆ. ಪ್ರಿಯಾಂಕ ಗಾಂಧಿ ಅವರಿಂದ ಮಾತ್ರ, ಸದ್ಯದ ಪರಿಸ್ಥಿತಿಯಿಂದ ಕಾಂಗ್ರೆಸ್ ಅನ್ನು ಮೇಲೆತ್ತಲು ಸಾಧ್ಯ. ಆದರೆ, ಸೋನಿಯಾ ಗಾಂಧಿಯವರ ಪುತ್ರ ವ್ಯಾಮೋಹ, ಪ್ರಿಯಾಂಕಾಗೆ ಅಡ್ದಿಯಾಗಿ ಪರಿಣಮಿಸುತ್ತಿದೆ" ಎಂದು ಪಂಕಜ್ ಶಂಕರ್ ಹೇಳಿದ್ದಾರೆ.
ರಾಹುಲ್ ಗಾಂಧಿಯ ಅವಧಿಯಲ್ಲಿ ಪಕ್ಷ ಹಿನ್ನಡೆ ಅನುಭವಿಸುತ್ತಾ ಬಂತು
"2004-2013ರ, ರಾಹುಲ್ ಗಾಂಧಿಯ ಅವಧಿಯಲ್ಲಿ ಪಕ್ಷ ಹಿನ್ನಡೆ ಅನುಭವಿಸುತ್ತಾ ಬಂತು ಎಂದು 13 ಸರಣಿಯ ವೆಬ್ ಸೀರೀಸ್ ಮಾಡಲಿದ್ದೇನೆ" ಎಂದು ಪಂಕಜ್ ಶಂಕರ್ ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ, ಹಿರಿಯ ಕಾಂಗ್ರೆಸ್ಸಿಗರ ವಿರುದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಚಿನ್ ಪೈಲಟ್ ಮುಂತಾದ ಮುಖಂಡರೂ ಬೇಸರ ವ್ಯಕ್ತಪಡಿಸಿದ್ದರು.