ಖಾಸಗಿತನ ಮೂಲಭೂತ ಹಕ್ಕಿನ ಭಾಗ : ಅಪ್ಪ, ಮಗನ ತೀರ್ಪು ಏನು?
ಬೆಂಗಳೂರು, ಆಗಸ್ಟ್, 25 : ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು. ಜೀವಿಸುವ ಹಕ್ಕನ್ನು ಮೊಟಕುಗೊಳಿಸುವ ಇಂದಿರಾ ಗಾಂಧಿ ಅವರ ಸರ್ಕಾರದ ನಿರ್ಧಾರವನ್ನು ಕೋರ್ಟ್ ಎತ್ತಿ ಹಿಡಿದಿತ್ತು.
ಈ ಕುರಿತ ತೀರ್ಪನ್ನು ಬರೆದಿದ್ದು ನ್ಯಾಯಮೂರ್ತಿ ಎಂ.ಎಚ್.ಬೇಗ್. ಈ ತೀರ್ಪು ಪ್ರಕಟಿಸಿದ ಪೀಠದಲ್ಲಿದ್ದ ಮುಖ್ಯನ್ಯಾಯಮೂರ್ತಿ ಎ.ಎನ್.ರಾಯ್, ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎನ್.ಭಗವತಿ ಇದಕ್ಕೆ ಒಪ್ಪಿದ್ದರು. ಆದರೆ, ಇದೇ ಪೀಠದಲ್ಲಿದ್ದ ನ್ಯಾಯಮೂರ್ತಿ ಎಚ್.ಆರ್.ಖನ್ನಾ ತೀರ್ಪು ವಿರೋಧಿಸಿದ್ದರು.

ಗುರುವಾರ ಸುಪ್ರೀಂಕೋರ್ಟ್ ಖಾಸಗಿ ತನದ ಬಗ್ಗೆ ಐತಿಹಾಸಿಕ ತೀರ್ಪು ನೀಡಿದೆ. ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿ ಚಂದ್ರದೂಡ್ ಅವರ ಪುತ್ರ, ಧನಂಜಯ್ ವೈ.ಚಂದ್ರಚೂಡ್ ಇದ್ದರು. 1976ರಲ್ಲಿ ನೀಡಿದ್ದ ಆದೇಶವನ್ನು ಗುರುವಾರದ ತೀರ್ಪು ರದ್ದುಗೊಳಿಸಿದೆ.
ನ್ಯಾಯಮೂರ್ತಿ ಧನಂಜಯ್ ವೈ.ಚಂದ್ರಚೂಡ್ ಅವರು ಖಾಸಗಿತನ ಸಂವಿಧಾನ ನೀಡಿದ ಮೂಲಭೂತ ಹಕ್ಕಿನ ಭಾಗವೇ ಆಗಿದೆ ಎಂದು ತೀರ್ಪು ನೀಡಿದ್ದಾರೆ. ಇದರಿಂದಾಗಿ ಅಪ್ಪ ನೀಡಿದ್ದ ತೀರ್ಪನ್ನು ಮಗ ರದ್ದುಗೊಳಿಸಿದಂತಾಗಿದೆ.
ಸಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ಎಸ್.ಎ. ಬೊಬ್ಡೆ, ಆರ್.ಕೆ. ಅಗರ್ವಾಲ್, ಆರ್.ಎಫ್. ನಾರಿಮನ್, ಎ.ಎಂ. ಸಪ್ರೆ, ಡಿ.ವೈ. ಚಂದ್ರಚೂಡ್, ಎಸ್. ಕೆ. ಕೌಲ್, ಎಸ್. ಅಬ್ದುಲ್ ನಜೀರ್ ಇದ್ದರು.












Click it and Unblock the Notifications