13 ವರ್ಷದಲ್ಲಿ ಮೋದಿ ಟಾರ್ಗೆಟ್ ಆದಷ್ಟು ಬೇರೆ ಯಾರೂ ಆಗಿಲ್ಲ: ಜೇಟ್ಲಿ
ನವದೆಹಲಿ, ನ 2: ಕಾಂಗ್ರೆಸ್ ಮತ್ತು ಎಡಪಕ್ಷಗಳು ದೇಶದಲ್ಲಿ ಹೆಚ್ಚುತ್ತಿರುವ ಸೈದ್ಧಾಂತಿಕ ಅಸಹಿಸ್ಣುತೆಗೆ ಭಾರತೀಯ ಜನತಾ ಪಕ್ಷವನ್ನು ಗುರಿಯಾಗಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಲೇ ಇದೆ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಳೆದ ಹದಿಮೂರು ವರ್ಷಗಳಲ್ಲಿ ಸೈದ್ಧಾಂತಿಕ ಅಸಹಿಷ್ಣುತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಕೆಟ್ಟ ರೀತಿಯಲ್ಲಿ ಬಲಿಪಶುವಾಗಿದ್ದಾರೆಂದು ಅರುಣ್ ಜೇಟ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರನ್ನು ಒಂದು ಕೋಮಿನವರ ವಿರುದ್ದ ಎಂದು ಬಿಂಬಿಸುವ ಮೂಲಕ ಸಮಾಜದಲ್ಲಿ ಬಿಜೆಪಿ ಮತ್ತು ಮೋದಿ ವಿರುದ್ದ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಕೆಲ ರಾಜಕೀಯ ಶಕ್ತಿಗಳು ವ್ಯವಸ್ಥಿತ ಪ್ರಚಾರದ ಮೂಲಕ ನಡೆಸುತ್ತಲೇ ಬಂದಿವೆ. (ಅರ್ಥ ವ್ಯವಸ್ಥೆ ಸುಧಾರಣೆಗೆ ಕೇಂದ್ರದ ಹೊಸ ಕ್ರಮ)
ಪರಿಸ್ಥಿತಿ ಹೀಗಿರುವಾಗ ನಮ್ಮ ಪಕ್ಷದ ಕಾರ್ಯಕರ್ತರಿಂದ ಹಿಡಿದು, ಶಾಸಕರು, ಸಂಸದರು, ಸಚಿವರು ಧಾರ್ಮಿಕ ಅಥವಾ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಯಾವುದೇ ಹೇಳಿಕೆಯನ್ನು ನೀಡಬಾರದೆಂದು ಜೇಟ್ಲಿ ಸ್ವಪಕ್ಷೀಯರಿಗೆ ಎಚ್ಚರಿಕೆ ಮಿಶ್ರಿತ ಸಂದೇಶ ರವಾನಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸೇರಿದಂತೆ ದೇಶದ ಪ್ರಮುಖ ಪಕ್ಷಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಬಿಜೆಪಿ ಮತ್ತು ಮೋದಿ ವಿರುದ್ದ ಸಮಾಜದಲ್ಲಿ ತಪ್ಪು ಸಂದೇಶ ಬರುವಂತಹ ಕೆಲಸವನ್ನು ಇಂತಹ ರಾಜಕೀಯ ಪಕ್ಷಗಳು ಮಾಡುತ್ತಿವೆ. ಫೇಸ್ ಬುಕ್ ನಲ್ಲಿ ಜೇಟ್ಲಿ ಬರೆದ ಪೂರ್ಣಪಾಠಕ್ಕೆ ಇಲ್ಲಿ ಕ್ಲಿಕ್ಕಿಸಿ
ಫೇಸ್ ಬುಕ್ ನ ತನ್ನ ಟೈಂಲೈನ್ ನಲ್ಲಿ ಬರೆದುಕೊಂಡಿರುವ ಜೇಟ್ಲಿ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ವಿಶ್ವಬ್ಯಾಂಕ್ ನಲ್ಲಿ ನಮ್ಮ ದೇಶದ ರೇಟಿಂಗ್ ಹನ್ನೆರಡು ಅಂಕಕ್ಕೆ ಮೇಲೇರಿದೆ. ಕಳೆದ ವಿಶ್ವ ಆರ್ಥಿಕ ಫಾರಂ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆ. ಮುಂದೆ ಓದಿ..

ದಾದ್ರಿ ಘಟನೆ
ದಾದ್ರಿ ಘಟನೆ ಖಂಡನಾರ್ಹ, ಇಂತಹ ಘಟನೆಗಳು ಮರುಕಳಿಸಬಾರದು. ಇಂತಹ ವಿಷಯದ ಮೂಲಕ ಭಾರತದಲ್ಲಿ ಧಾರ್ಮಿಕ ಮತ್ತು ಸೈದ್ಧಾಂತಿಕ ಅಸಹಿಷ್ಣುತೆಗೆ ಸಂಬಂಧಿಸಿದಂತೆ ಘಟನೆಗಳು ನಡೆಯುತ್ತಲೇ ಇರುತ್ತವೆ ಎನ್ನುವುದನ್ನು ವಿಶ್ವಮಟ್ಟದಲ್ಲಿ ಬಿಂಬಿಸುವ ವ್ಯವಸ್ಥಿತ ಪ್ರಚಾರ ನಡೆಯುತ್ತಲೇ ಇದೆ. ಮೋದಿ ಹದಿಮೂರು ವರ್ಷದಲ್ಲಿ ಅತ್ಯಂತ ಹೆಚ್ಚುಬಾರಿ ಈ ವಿಚಾರದಲ್ಲಿ ಬಲಿಪಶುವಾಗಿದ್ದಾರೆ - ಜೇಟ್ಲಿ.

ನಿರೀಕ್ಷಿಸಿದಷ್ಟು ಸುಧಾರಣೆ ಸಾಧ್ಯವಾಗಲಿಲ್ಲ
ಕಳೆದ ಹದಿನೇಳು ತಿಂಗಳಲ್ಲಿ ಆರ್ಥಿಕ ಸುಧಾರಣೆಗೆ ನಾವು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ನೂತನ ಕ್ರಮಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಣೆಯಾಗ ಬೇಕಾಗಿತ್ತು. ಆದರೆ ನಾವು ನಿರೀಕ್ಷಿಸಿದಷ್ಟು ಸುಧಾರಣೆ ಸಾಧ್ಯವಾಗಲಿಲ್ಲ ಎಂದು ಜೇಟ್ಲಿ ಫೇಸ್ ಬುಕ್ ನಲ್ಲಿ ಬರೆದು ಕೊಂಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ
ದೇಶದ ಅಭಿವೃದ್ದಿಗೆ ತುರ್ತು ನಿರ್ಧಾರ, ಭ್ರಷ್ಟಾಚಾರ ನಿಗ್ರಹ ಮುಂತಾದವು ಪ್ರಮುಖ. ದೇಶದಲ್ಲಿ ಬಂಡವಾಳ ಹೂಡಿಕೆಗೆ ಇದ್ದ ಕೆಲವೊಂದು ಅಡೆತಡೆಗಳನ್ನು ನಿವಾರಿಸಿದ್ದೇವೆ. ಬಂಡವಾಳ ಹೂಡಿಕೆಗೆ ದೆಹಲಿಯಲ್ಲಿ ಸಚಿವಾಲಯದ ಮುಂದೆ ಕ್ಯೂ ನಿಲ್ಲುವ ಅಥವಾ ಲಾಬಿ ನಡೆಸುವ ಅಗತ್ಯವಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.

ಬಂಡವಾಳ ಸ್ನೇಹಿ
ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳು ಕೂಡಾ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡಿರುವುದು ಗಮನಾರ್ಹ. ಆರ್ಥಿಕ ಕ್ಷೇತ್ರದಲ್ಲಿ ಸುಧಾರಣೆಯಾಗ ಬೇಕಿದ್ದರೆ ಬಂಡವಾಳ ಪ್ರಮುಖಾಂಶ. ಬಂಡವಾಳ ಸ್ನೇಹಿ ರಾಜ್ಯಗಳು ಹೆಚ್ಚಿನ ಅಭಿವೃದ್ದಿ ಸಾಧಿಸಲಿದೆ - ಅರುಣ್ ಜೇಟ್ಲಿ

ಗುಜರಾತ್ ಮಾದರಿ
ಗುಜರಾತ್ ಮಾದರಿ ಅಭಿವೃದ್ದಿ ಕೆಲಸದ ಐಡಿಯಾವನ್ನು ದೇಶದ ಹಲವು ರಾಜ್ಯಗಳು ಬಳಸಿಕೊಂಡವು. ಅದರಲ್ಲಿ ಪ್ರಮುಖವಾಗಿ ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳು. ರಾಜಸ್ಥಾನ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಬಂಡವಾಳ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ - ಅರುಣ್ ಜೇಟ್ಲಿ












Click it and Unblock the Notifications