ಹಾಳಾಯ್ತು ಹವಾಮಾನ: ನವದೆಹಲಿಯಲ್ಲಿ ನ.5ರಿಂದಲೇ ಶಾಲೆಗಳಿಗೆ ರಜೆ ಘೋಷಣೆ
ನವದೆಹಲಿ, ನವೆಂಬರ್ 04: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ನವೆಂಬರ್ 5ರ ಶನಿವಾರದಿಂದ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಮತ್ತು ಮಾಲಿನ್ಯದ ಮಟ್ಟವು ಇಡೀ ಉತ್ತರ ಭಾರತದ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲು ಕೇಂದ್ರ ಸರ್ಕಾರವು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಡೀ ನಗರವು ಶುಕ್ರವಾರವೂ ಸಹ ''ತೀವ್ರ'' ವಿಭಾಗದಲ್ಲಿ ದಾಖಲಾಗಿರುವ ಗಾಳಿಯ ಗುಣಮಟ್ಟದೊಂದಿಗೆ ಕಣ್ಣು ಕುಟುಕುವ ಮಾಲಿನ್ಯದಿಂದ ತತ್ತರಿಸಿ ಹೋಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರದಿಂದ ಐದನೇ ತರಗತಿಯವರೆಗಿನ ಶಾಲೆಗಳನ್ನು ಮುಚ್ಚಲಾಗುವುದು. ಐದನೇ ತರಗತಿಗಿಂತ ಹೆಚ್ಚಿನ ತರಗತಿಗಳಿಗೆ ಹೊರಾಂಗಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.
ಸಮ-ಬೆಸ ಯೋಜನೆ ಜಾರಿ ಬಗ್ಗೆ ಚಿಂತನೆ
ನವದೆಹಲಿಯಲ್ಲಿ ವಾಹನಗಳ ಓಡಾಟಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸಮ ಬೆಸ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆಯೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ಚಿಂತನೆ ನಡೆಸುತ್ತಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಇದ್ದರು. ಪಂಜಾಬಿನಲ್ಲಿ ಬೆಳೆಗಳಿಗೆ ಬೆಂಕಿ ಹಚ್ಚಿರುವ ಘಟನೆಗೆ ಸಂಬಂಧಿಸಿದಂತೆ ಉಭಯ ನಾಯಕರು ಚರ್ಚಿಸಿದರು.
ಪಂಜಾಬ್ನಲ್ಲಿ ಹುಲ್ಲು ಸುಡುವುದರ ಕುರಿತು ಪ್ರಸ್ತಾಪ
ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಹದಗೆಡುವುದಕ್ಕೆ ಪಂಜಾಬ್ನಲ್ಲಿ ಹುಲ್ಲುಗಳಿಗೆ ಬೆಂಕಿ ಹಚ್ಚುವುದು ಕೂಡ ಒಂದು ಕಾರಣವಾಗಿದೆ. ಆ ರಾಜ್ಯದಲ್ಲಿ ತಮ್ಮದೇ ಸರ್ಕಾರವು ಅಸ್ತಿತ್ವದಲ್ಲಿದ್ದು, ಅದರ ಹೊಣೆಯನ್ನು ತಾವೇ ಹೊತ್ತುಕೊಳ್ಳುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. "ನಮ್ಮ ಸರ್ಕಾರ ಪಂಜಾಬ್ನಲ್ಲಿ ಇರುವುದರಿಂದ, ಕೋಲು ಸುಡುವಿಕೆಗೆ ನಾವೇ ಹೊಣೆ, ನಾವು ಅಲ್ಲಿ ಸರ್ಕಾರವನ್ನು ರಚಿಸಿ ಕೇವಲ ಆರು ತಿಂಗಳಾಗಿದೆ. ಅಲ್ಲಿ ಸಮಸ್ಯೆಗಳಿವೆ, ನಾವು ಪರಿಹಾರಗಳನ್ನು ಹುಡುಕುತ್ತಿದ್ದೇವೆ. ನಾವು ಆ ಸಮಸ್ಯೆಗಳನ್ನು ಪರಿಹರಿಸಲು ಒಂದು ವರ್ಷದ ಸಮಯ ನೀಡಿ," ಎಂದು ಕೇಳಿದರು.
ಬುಧವಾರವೊಂದೇ ದಿನ 3634 ಕಡೆ ಹುಲ್ಲಿಗೆ ಬೆಂಕಿ
ಪಂಜಾಬ್ನಲ್ಲಿ ಬುಧವಾರವೊಂದೇ ದಿನದಲ್ಲಿ 3,634 ಕೋಲು ಸುಡುವ ಪ್ರಕರಣಗಳು ದಾಖಲಾಗಿವೆ. ಇದು ಈ ಋತುವಿನಲ್ಲೇ ಒಂದೇ ದಿನ ಅತಿಹೆಚ್ಚು ಹುಲ್ಲು ಸುಟ್ಟ ಘಟನೆಯಾಗಿದೆ. 677 ಪ್ರಕರಣಗಳು ಅತಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಪಟಿಯಾಲದಲ್ಲಿ 395, ಫಿರೋಜ್ಪುರದಲ್ಲಿ 342, ಬಟಿಂಡಾದಲ್ಲಿ 317, ಬರ್ನಾಲಾದಲ್ಲಿ 278, ಲುಧಿಯಾನದಲ್ಲಿ 198, ಮಾನ್ಸಾದಲ್ಲಿ 191, ಮೊಗಾ ಮತ್ತು ಮುಕ್ತಸರ್ನಲ್ಲಿ ತಲಾ 173 ಮತ್ತು ಫರೀದ್ಕೋಟ್ನಲ್ಲಿ 167 ಪ್ರಕರಣಗಳು ದಾಖಲಾಗಿವೆ.
ಸಾಮಾನ್ಯವಾಗಿ ಗಾಳಿಯ ಗುಣಮಟ್ಟ ಎಷ್ಟಿರಬೇಕು?
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೀಗ ಕಳಪೆ ಹಂತಕ್ಕೆ ತಲುಪಿದೆ. ಸಾಮಾನ್ಯವಾಗಿ ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ.