ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ 'ಎಲೆಕ್ಷನ್ ಕಿಂಗ್'
ನವದೆಹಲಿ, ಜೂನ್ 15: ಭಾರತೀಯ ಚುನಾವಣಾ ಇತಿಹಾಸದಲ್ಲಿ ಎಲೆಕ್ಷನ್ ಕಿಂಗ್ ಎಂದು ಕರೆಸಿಕೊಂಡಿರುವ ಲಿಮ್ಕಾ ದಾಖಲೆ ವಿಜೇತ ತಮಿಳುನಾಡಿನ ಕೆ. ಪದ್ಮರಾಜನ್ ಅವರು ಗಿನ್ನಿಸ್ ದಾಖಲೆಗಾಗಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿದಿದ್ದಾರೆ.
2014ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದು ಸೋಲು ಕಂಡಿದ್ದರು. ಒಟ್ಟಾರೆ, 150ಕ್ಕೂ ಅಧಿಕ ಚುನಾವಣೆಯಲ್ಲಿ ಸೋಲು ಕಂಡಿರುವ ಪದ್ಮರಾಜನ್ ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪದ್ಮರಾಜನ್ ಸೇರಿದಂತೆ ಆರು ಮಂದಿ ಬುಧವಾರ(ಜೂನ್ 14)ದಂದು ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ ಎಂದು ಲೋಕಸಭೆಯ ಮುಖ್ಯ ಕಾರ್ಯದರ್ಶಿ ಅನೂಪ್ ಮಿಶ್ರಾ ಹೇಳಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವುದೇ ಹವ್ಯಾಸ ಮಾಡಿಕೊಂಡಿರುವ ತಮಿಳುನಾಡಿನ ಮೆಟ್ಟೂರು ಮೂಲದ ನಿವಾಸಿ ಡಾ.ಕೆ.ಪದ್ಮರಾಜನ್ ಅವರು ಈವರೆಗೂ ಅವರು 160 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ದೇಶದಲ್ಲಿ ನಡೆದಿರುವ 15 ಲೋಕಸಭೆ ಚುನಾವಣೆ ಸೇರಿದಂತೆ ಅಸೆಂಬ್ಲಿ ಚುನಾವಣೆಗಳಲ್ಲೂ ಪದ್ಮರಾಜನ್ ಸ್ಪರ್ಧೆಗಿಳಿದಿದ್ದಾರೆ.
ಈವರೆಗೆ ಒಟ್ಟು 160 ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಪದ್ಮರಾಜನ್ ಸ್ಥಳೀಯ ಚುನಾವಣೆಗಳಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಸ್ಪರ್ಧಿಸಿರುವುದು ವಿಶೇಷವಾಗಿದೆ. ಆದರೆ, ಎಲ್ಲಿಯೂ ಕೂಡ ಅವರು ತಮ್ಮ ಠೇವಣಿಯನ್ನು ಉಳಿಸಿಕೊಂಡಿಲ್ಲ. ಆದರೂ ಚುನಾವಣೆಗೆ ಸ್ಪರ್ಧಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಸಂತಸ ಬರುತ್ತದೆಯಂತೆ. ಪದ್ಮರಾಜನ್ ಅವರ ರಾಜಕೀಯ ಇತಿಹಾಸ ಮುಂದೆ ಓದಿ

ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿರುವ ರಾಜನ್
ಈ ಹಿಂದೆ ಪದ್ಮರಾಜನ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ,ಪಿವಿ ನರಸಿಂಹರಾವ್, ಡಾ.ಮನಮೋಹನ್ ಸಿಂಗ್(ರಾಜ್ಯಸಭೆ), ಮಾಜಿ ರಾಷ್ಟ್ರಪತಿಗಳಾದ ಕೆ. ಆರ್ ನಾರಾಯಣನ್, ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಸೇರಿದಂತೆ ಅನೇಕರ ಎದುರು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದರು. ರಾಜ್ಯ ಮಟ್ಟದಲ್ಲಿ ಜೆ ಜಯಲಲಿತಾ, ಕೆ ಕರುಣಾನಿಧಿ, ಎಕೆ ಎಂಟನಿ, ಎಸ್ಎಂ ಕೃಷ್ಣ, ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ.

ಯಾವುದೇ ಎಲೆಕ್ಷನ್ ಇರಲಿ ಪದ್ಮರಾಜನ್ ಹಾಜರು
ಹಳ್ಳಿಯಿಂದ ದಿಲ್ಲಿ ತನಕ, ಜಿಲ್ಲಾ ಪಂಚಾಯಿತಿಯಿಂದ ದೇಶದ ಪ್ರಥಮಪ್ರಜೆ ಚುನಾವಣೆ ತನಕ ಹೋಮಿಯೋಪತಿ ಡಾಕ್ಟರ್ ಕೆ ಪದ್ಮರಾಜನ್ ಸ್ಪರ್ಧಿಸಿದ್ದಾರೆ.
ಲೋಕಸಭೆ, ವಿಧಾನ ಪರಿಷತ್, ವಿಧಾನ ಸಭೆ, ರಾಜ್ಯಸಭೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ನಗರ ಪಾಲಿಕೆ, ತಾಪಂ, ಜಿಪಂ ಸೇರಿದಂತೆ ಪ್ರತಿ ಹಂತದ ಚುನಾವಣೆಗೂ ಸ್ಪರ್ಧಿಸಿದ್ದಾರೆ.

ಎಲ್ಲವೂ ದಾಖಲೆಗಾಗಿ ಎನ್ನುತ್ತಾರೆ ರಾಜನ್
ನಾನು 1988ರಿಂದಲೂ ಚುನಾವಣೆಗೆ ಸ್ಪರ್ಧಿಸುತ್ತ ಬಂದಿದ್ದೇನೆ. ನನಗೆ ಸೋಲು-ಗೆಲುವಿಗಿಂತಲೂ ದಾಖಲೆ ನಿರ್ಮಿಸಬೇಕೆಂಬುದೇ ಪ್ರಮುಖ ಉದ್ದೇಶ ಎನ್ನುತ್ತಾರೆ. ಗಿನ್ನಿಸ್ ದಾಖಲೆ ನಿರ್ಮಾಣಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರ ಮಾಡುವುದಿಲ್ಲ. ದಾಖಲೆಗಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಪದ್ಮರಾಜನ್ ಅವರ ಚುನಾವಣಾ ಚಿನ್ಹೆ ಬಲೂನ್.
ಕರ್ನಾಟಕ ಲೋಕಸಭೆಯಿಂದ 1996ರಲ್ಲಿ ಸಿ. ನಾರಾಯಣಸ್ವಾಮಿ, 2004ರಲ್ಲಿ ಬೀದರ್, 2009ರಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದರು. 2013ರಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧಿಸಿದ್ದರು. ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ಸಲ್ಲಿಸಿರುವ ನಾಮಪತ್ರದಲ್ಲಿ ಹಲವು ದೋಷಗಳಿತ್ತು. ಪಕ್ಷೇತರ ಅಭ್ಯರ್ಥಿಗೆ 10 ಸೂಚಕರ ಅವಶ್ಯಕತೆ ಇತ್ತು. ಯಾವುದೇ ಷರತ್ತು ಪಾಲಿಸದೆ ಸಲ್ಲಿಸಿದ್ದ ನಾಮಪತ್ರ ಅನುಮೋದಕರಿಲ್ಲದೆ ಕಸದ ಬುಟ್ಟಿ ಸೇರಿತ್ತು.

ವಿವಿಧ ರಾಜ್ಯಗಳಲ್ಲಿ ಪದ್ಮರಾಜನ್ ಸ್ಪರ್ಧೆ
ತಮಿಳುನಾಡು, ಪುದುಚೇರಿ, ಕೇರಳ, ಅಸ್ಸಾಂ, ಕರ್ನಾಟಕ ರಾಜ್ಯಗಳಿಂದ ರಾಜ್ಯಸಭೆಗೆ 28 ಬಾರಿ ಸ್ಪರ್ಧಿಸಿರುವ ಪದ್ಮರಾಜನ್, ವಿಧಾನಸಭಾ ಚುನಾವಣೆಗೆ 46 ಬಾರಿ ಸ್ಪರ್ಧಿಸಿದ್ದಾರೆ. 1988ರಲ್ಲಿ ಮೆಟ್ಟೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ನಂತರ ರಾಣಿಪೇಟ್, ಪೆರುಂದರಿ, ಮೈಲಾಪೂರ, ಆಂಧ್ರಪ್ರದೇಶದ ಕಡಪ, ಕೇರಳದ ತಿರುರಂಗಡಿ, ಅಟ್ಟೂರು, ಬೃಗೂರು, ಪುಡುಕೊಟ್ಟಿ, ಅರುಪ್ಪುಕೊಟ್ಟಿ, ತಿರುಚ್ಚಿ-2, ಆಂಡಿಪೆಟ್ಟಿ, ಸೈದಪೆಟ್ಟಿ, ತ್ರೀರುವಲ, ಕಂಚಿಪೂರಂ, ಕುಮಿಡಿಪೊಂಡಿ, ಅಕ್ಸಿಕೊಂಡೆ, ಪಯ್ಯಾನೂರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ.

ಟೈರ್ ರಿಮೋಲ್ಡಿಂಗ್ ವ್ಯವಹಾರ ಮಾಡುತ್ತಿದ್ದಾರೆ
ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಮೂಲತಃ ಹೋಮಿಯೋಪತಿ ವೈದ್ಯರಾಗಿರುವ 58 ವರ್ಷದ ಪದ್ಮರಾಜನ್ ಟೈರ್ ರಿಮೋಲ್ಡಿಂಗ್ ವ್ಯವಹಾರ ನಡೆಸುತ್ತಿದ್ದಾರೆ.
* 1988ರಲ್ಲಿ ಸಿಪಿಎಂನ ಮಾಜಿ ಶಾಸಕ ಸೆರಂಗನ್ ವಿರುದ್ಧ ಮೊದಲ ಸ್ಪರ್ಧೆ.
*1997ರಲ್ಲಿ ಕೆ.ಆರ್.ನಾರಾಯಣ್, 2002ರಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ, 2007ರಲ್ಲಿ ಪ್ರತಿಭಾ ಪಾಟೀಲ, 2012ರಲ್ಲಿ ಪ್ರಣಬ್ ಮುಖರ್ಜಿ ವಿರುದ್ಧ ಸ್ಪರ್ಧೆ.
* ಉಪ ರಾಷ್ಟ್ರಪತಿ ವಿರುದ್ಧ 1997ರಲ್ಲಿ ಕೃಷ್ಣಕಾಂತ, 2002ರಲ್ಲಿ ಭೈರೋನ್ ಸಿಂಗ್ ಶೆಖಾವತ್, 2007 ಮತ್ತು 2012ರಲ್ಲಿ ಎರಡು ಬಾರಿ ಹಮೀದ್ ಅನ್ಸಾರಿ ವಿರುದ್ಧ ಕಣಕ್ಕೆ
* ಪದ್ಮರಾಜನ್ ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಒಟ್ಟು 24 ಬಾರಿ ಸ್ಪರ್ಧೆ.












Click it and Unblock the Notifications