Get Updates
Get notified of breaking news, exclusive insights, and must-see stories!

ಗಣರಾಜ್ಯೋತ್ಸವ: ರಾಷ್ಟ್ರಪತಿ ಕೋವಿಂದ್ ಭಾಷಣದ ಪ್ರಮುಖಾಂಶಗಳು

ನವದೆಹಲಿ, ಜನವರಿ 25: ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದರ ನಡುವೆ 73ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿ ಸೇರಿದಂತೆ ಜನವರಿ, 26ರಂದು ದೇಶಾದ್ಯಂತ ಗಣರಾಜ್ಯೋತ್ಸವವನ್ನು ಹಬ್ಬದ ರೀತಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

1950ರ ಜನವರಿ 26ರಂದು ಭಾರತವು ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದ್ದು, ಅಂದು ದೇಶ ನಿಜವಾಗಿಯೂ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದ್ದು ಈ ದಿನವನ್ನು ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ. ಗಣರಾಜ್ಯೋತ್ಸವ ದಿನವು ಬ್ರಿಟಿಷ್ ಆಡಳಿತದ ವಿರುದ್ಧದ ಮೊದಲ ಕ್ರಾಂತಿಯ ಸೂಚಕವಾಗಿದೆ. ಈ ವರ್ಷ ಆಚರಿಸುತ್ತಿರುವ 73ನೇ ಗಣರಾಜ್ಯೋತ್ಸವವನ್ನು ಎಂದಿಗಿಂತ ವಿಭಿನ್ನ ಮತ್ತು ವಿಶೇಷವಾಗಿ ಪ್ರಸಾರ ಮಾಡುವುದಕ್ಕೆ ದೂರದರ್ಶನದ ಸಿದ್ಧತೆ ನಡೆಸಿದೆ.

ಈ ನಡುವೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇಂದು ಕೂಡಾ ನಾವು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯ. ಕೋವಿಡ್‌ ಮಾರ್ಗಸೂಚಿ ಪಾಲಿಸುವುದು ನಮ್ಮ ರಾಷ್ಟ್ರ ಧರ್ಮವಾಗಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. ರಾಷ್ಟ್ರಪತಿ ಭಾಷಣದ ಪ್ರಮುಖಾಂಶಗಳು ಈ ಕೆಳಗಿದೆ, ಮುಂದೆ ಓದಿ..

President Ram Nath Kovinds Republic Day address: Top quotes here

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣದ ಪ್ರಮುಖಾಂಶಗಳು

* ಭಾರತೀಯರಾದ ನಮ್ಮೆಲ್ಲರ ಸಾಮೂಹಿಕ ದೃಷ್ಟಿಕೋನದ ಪ್ರೇರಣೆಯಿಂದ ಮೈದಳೆದ ಸಂವಿಧಾನವನ್ನು ಅನುಷ್ಠಾನಗೊಳಿಸಿದ ದಿನ ಇದಾಗಿದೆ. ನಮ್ಮ ಪ್ರಜಾತಂತ್ರದ ವೈವಿಧ್ಯ ಮತ್ತು ಸ್ಪಂದನಶೀಲತೆ, ಜಗತ್ತಿನೆಲ್ಲೆಡೆ ಮನ್ನಣೆ ಪಡೆದಿದೆ. ಏಕತೆ ಮತ್ತು ಒಂದು ದೇಶ ಎಂಬ ಮನೋಭಾವನೆಯನ್ನು ಪ್ರತಿವರ್ಷ ಗಣರಾಜ್ಯ ದಿನವಾಗಿ ಆಚರಿಸಲಾಗುತ್ತಿದೆ. ಸಾಂಕ್ರಾಮಿಕದಿಂದಾಗಿ ಈ ವರ್ಷದ ಗಣರಾಜ್ಯೋತ್ಸವ ಸಂಭ್ರಮ ಕಳೆಗುಂದಿರಬಹುದು, ಆದರೆ ಆ ಹುರುಪು ಎಂದಿನಂತೆ ಚೈತನ್ಯ ಶೀಲವಾಗಿದೆ.
* ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು, ಕೆಚ್ಚೆದೆಯ ಹೋರಾಟ ನಡೆಸಿದ ಮತ್ತು ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಮಹಾನ್ ಸ್ವಾತಂತ್ರ ಸೇನಾನಿಗಳನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸೋಣ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯಕ್ಕಾಗಿ ನೀಡಿದ ಕೊಡುಗೆ ನಮಗೆ ಸ್ಫೂರ್ತಿ
* ರಾಷ್ಟ್ರೀಯ ಸೇವೆಗೆ ಕರೆ ಕೊಟ್ಟಾಗ, ತಮ್ಮ ಮೂಲಭೂತ ಕರ್ತವ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೋಟ್ಯಂತರ ಜನರು, ಸ್ವಚ್ಛಭಾರತ್ ಅಭಿಯಾನ್ ಮತ್ತು ಕೋವಿಡ್ ಲಸಿಕಾ ಅಭಿಯಾನವನ್ನು ಜನಾಂದೋಲನವಾಗಿ ಪರಿವರ್ತಿಸಿದರು. ಇಂತಹ ಆಂದೋಲನಗಳ ಯಶಸ್ಸಿನ ಮಹಾನ್ ಕೀರ್ತಿ ನಮ್ಮ ಕರ್ತವ್ಯ ನಿಷ್ಠ ಜನತೆಗೆ ಸಲ್ಲಬೇಕು.
* ಪೂರ್ಣ ಸ್ವರಾಜ್ ದಿನವನ್ನು ಹೇಗೆ ಆಚರಿಸಬೇಕೆಂಬ ಬಗ್ಗೆ ಸಹ ದೇಶವಾಸಿಗಳಿಗೆ ಮಹಾತ್ಮಗಾಂಧಿಯವರು ಕೆಲ ಸಲಹೆಗಳನ್ನು ಬರೆದಿದ್ದಾರೆ. ಅವರು ಹೇಳಿರುವುದನ್ನು ನಾನು ಉಲ್ಲೇಖಿಸುತ್ತಿದ್ದೇನೆ - ನೆನಪಿಡಿ, ನಾವು ನಮ್ಮ ಗುರಿಯನ್ನು ಅಹಿಂಸಾತ್ಮಕವಾಗಿ ಮತ್ತು ಸತ್ಯಮಾರ್ಗಗಳ ಮೂಲಕ ಸ್ಥಾಪಿಸಬೇಕೆಂಬ ಬಯಕೆ ಹೊಂದಿದ್ದೇವೆ. ಆತ್ಮ ಪರಿಶುದ್ಧತೆಯಿಂದ ಮಾತ್ರ ನಾವಿದನ್ನು ಮಾಡಬಹುದಾಗಿದೆ. ಆದ್ದರಿಂದ ಈ ದಿನವನ್ನು ನಮ್ಮ ಸಾಮರ್ಥ್ಯಕ್ಕನುಸಾರ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಮರ್ಪಿಸಿಕೊಳ್ಳೋಣ.
* ಜಗತ್ತು ಈಗಿನಂತೆ, ಹಿಂದೆಂದೂ ಇಷ್ಟೊಂದು ನೆರವಿನ ಅಗತ್ಯ ಎಣಿಸಿರಲಿಲ್ಲ. ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಮಾನವಕುಲ ಕೊರೋನಾ ವೈರಾಣು ವಿರುದ್ಧ ಸೆಣೆಸುತ್ತಲೇ ಇದೆ. ನೂರಾರು ಸಾವಿರಾರು ಜೀವಗಳನ್ನು ಕಳೆದುಕೊಂಡಿದ್ದೇವೆ. ಇದರ ದುಷ್ಪರಿಣಾಮದಿಂದ ಆರ್ಥಿಕತೆ ತತ್ತರಿಸಿದೆ. ಮನುಕುಲಕ್ಕೆ ಇದೊಂದು ಅಸಾಧಾರಣ ಸವಾಲಾಗಿದೆ.
* ನಮ್ಮಲ್ಲಿ ಜನಸಂಖ್ಯೆ ಸಾಂದ್ರತೆ ವಿಪರೀತ, ಜೊತೆಗೆ ಒಂದು ಅಭಿವೃದ್ಧಿಶೀಲ ದೇಶವಾಗಿದ್ದು, ಕಣ್ಣಿಗೆ ಕಾಣದ ಈ ವೈರಾಣು ವಿರುದ್ಧ ಹೋರಾಡುವಷ್ಟು ಸಂಪನ್ಮೂಲ - ಮೂಲಸೌಕರ್ಯ ನಮ್ಮಲ್ಲಿಲ್ಲ. ಆದರೆ ಇಂತಹ ಸಂಕಷ್ಟದ ಸಮಯಗಳಲ್ಲೇ ದೇಶದ ಅಂತಃಶಕ್ತಿ ಪ್ರಜ್ವಲಿಸಬೇಕಾಗಿರುವುದು. ಕೊರೋನಾ ವೈರಾಣು ವಿರುದ್ಧ ನಾವು ಸಾಟಿಯಿಲ್ಲದ ಸಾಮರ್ಥ್ಯ ಮೆರೆದಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಎನಿಸಿಸುತ್ತದೆ.
* ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಜನರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ಹಾಗೂ ಆರ್ಥಿಕತೆಗೆ ಶಕ್ತಿ ತುಂಬುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ನವೋದ್ಯಮ ಪರಿಸರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ, ವಿನೂತನ ಚಿಂತನೆಯ ನಮ್ಮ ಯುವ ಉದ್ಯಮಶೀಲರು ಯಶಸ್ಸಿನ ಹೊಸ ಮಾನದಂಡಗಳನ್ನೇ ಸ್ಥಾಪಿಸಿದ್ದಾರೆ. ಪ್ರತಿ ತಿಂಗಳು ಲಕ್ಷ ಲಕ್ಷ ಡಿಜಿಟಲ್ ವಹಿವಾಟುಗಳು ನಡೆಯುತ್ತಿರುವುದು, ದೇಶದ ಬೃಹತ್ ಮತ್ತು ಸದೃಢ ಡಿಜಿಟಲ್ ಪಾವತಿ ವೇದಿಕೆಯ ಯಶಸ್ಸನ್ನು ಸಾಕ್ಷೀಕರಿಸುತ್ತದೆ.
* ಕಳೆದ ವರ್ಷ ಒಲಿಂಪಿಕ್ಸ್ ನಲ್ಲಿ ತಮ್ಮ ಗುರುತು ಮೂಡಿಸುವ ಮೂಲಕ ನಮ್ಮ ಕ್ರೀಡಾ ಪಟುಗಳು ಹಿರಿಮೆ-ಗರಿಮೆಗಳನ್ನು ಮೆರೆದಿದ್ದಾರೆ. ಈ ಯುವ ಚಾಂಪಿಯನ್ ಗಳ ಆತ್ಮ ವಿಶ್ವಾಸ ಇಂದು ಲಕ್ಷಾಂತರ ಮಂದಿಗೆ ಸ್ಫೂರ್ತಿದಾಯಕ.
* ದೇಶಪ್ರೇಮ ಎಂಬುದು ನಾಗರಿಕರಲ್ಲಿನ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ನೀವು ವೈದ್ಯರಿರಬಹುದು, ವಕೀಲರಿರಬಹುದು, ವ್ಯಾಪಾರಸ್ಥರಿರಬಹುದು ಅಥವ ಕಚೇರಿ ಉದ್ಯೋಗಿ, ಪೌರಕಾರ್ಮಿಕ ಏನೇ ಇರಬಹುದು, ನಿಮ್ಮ ನಿಮ್ಮ ಕರ್ತವ್ಯಗಳನ್ನು ಉತ್ತಮವಾಗಿ ದಕ್ಷತೆಯಿಂದ ಮಾಡಿದಲ್ಲಿ, ಅದು ದೇಶಕ್ಕೆ ನೀವು ನೀಡುವ ಎಲ್ಲಕ್ಕಿಂತ ದೊಡ್ಡ ಕಾಣಿಕೆಯಾಗುತ್ತದೆ.
* ರಾಷ್ಟ್ರ ಘನತೆಯ ಪರಂಪರೆಯನ್ನು ಇಂದು ಮುಂದುವರಿಸಿಕೊಂಡು ಹೋಗುತ್ತಿರುವವರು ನಮ್ಮ ಯೋಧರು ಮತ್ತು ಭದ್ರತಾ ಸಿಬ್ಬಂದಿ. ತಮ್ಮ ಕುಟುಂಬ-ಪರಿವಾರಗಳಿಂದ ಬಹುದೂರ ಹೋಗಿ, ಹಿಮಾಲಯದ ಸಹಿಸಲಸಾಧ್ಯವಾದ ಛಳಿಯಲ್ಲಿ, ಮರುಭೂಮಿಯ ಸುಡುಸುಡುವ ಬಿಸಿಲ ಬೇಗೆಯಲ್ಲಿ ನಿಂತು, ಇವರು ತಾಯ್ನಾಡಿನ ರಕ್ಷಣೆಯಲ್ಲಿ ತೊಡಗಿದ್ದಾರೆ. ತಮ್ಮ ಸಹದೇಶವಾಸಿಗಳ ನೆಮ್ಮದಿಯ ಬದುಕಿಗಾಗಿ, ದೇಶದ ಗಡಿಗಳ ರಕ್ಷಣೆಯ ಹೊಣೆ ಹೊತ್ತು ನಿರಂತರ ನಿಗಾವಹಿಸುತ್ತಿರುವ ನಮ್ಮ ಸಶಸ್ತ್ರ ಪಡೆಗಳು ಹಾಗೂ ದೇಶದೊಳಗೆ ಆಂತರಿಕ ಭದ್ರತೆಯನ್ನು ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಧನ್ಯವಾದಗಳು.
* ಭಾರತ ಒಂದು ಪುರಾತನ ನಾಗರಿಕತೆಯ, ಆದರೆ ಯುವ ಗಣತಂತ್ರ ದೇಶ. ನಮಗೆ ದೇಶ ನಿರ್ಮಾಣ ಒಂದು ನಿರಂತರ ಕಾಯಕ. ಕುಟುಂಬದಂತೆಯೇ ದೇಶವೂ ಕೂಡ, ಒಂದು ಪೀಳಿಗೆ ತನ್ನ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಖಾತರಿ ಪಡಿಸಲು ಪರಿಶ್ರಮವಹಿಸುತ್ತದೆ. ನಾವು ಸ್ವಾತಂತ್ರ್ಯಗಳಿಸಿದಾಗ, ವಸಾಹತು ಆಡಳಿತದ ಶೋಷಣೆ ನಮ್ಮನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಿತ್ತು. ಆದರೆ 75 ವರ್ಷಗಳಲ್ಲಿ ನಾವು ಬೆರಗಾಗಿಸುವಷ್ಟು ಏಳ್ಗೆ ಸಾಧಿಸಿದ್ದೇವೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+