ದಲಿತ ವಿರೋಧಿ ಪಟ್ಟಕಟ್ಟಿಕೊಳ್ಳಲು ವಿರೋಧಿಗಳು ಸಿದ್ಧವೆ?
ನವದೆಹಲಿ, ಜೂನ್ 19 : ಬಿಹಾರದ ರಾಜ್ಯಪಾಲ ಮತ್ತು ಬಿಜೆಪಿಯ ದಲಿತ ಮೋರ್ಚಾದ ಮಾಜಿ ನಾಯಕ ರಾಮ್ ನಾಥ್ ಕೋವಿಂದ್ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಘೋಷಿಸುವ ಮೂಲಕ ವಿರೋಧ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಇದಕ್ಕೆ ಕಾರಣ ಅವರು 'ದಲಿತ' ಹಣೆಪಟ್ಟಿ ಕಟ್ಟಿಕೊಂಡಿರುವುದು. ಕೋವಿಂದ್ ಅವರ ಹೆಸರನ್ನು ಮೊದಲೇ ನಮಗೆ ತಿಳಿಸಬೇಕಿತ್ತು ಎಂದು ವಿರೋಧ ಪಕ್ಷಗಳು ತಕರಾರು ತೆಗೆದಿದ್ದರೂ, ಬೆಂಬಲಿಸಬೇಕೋ ಬೇಡವೋ ಎಂಬ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಇದಕ್ಕೆ ಪೂರಕವಾಗಿ, "ಎಲ್ಲರೂ ಕೋವಿಂದ್ ಅವರ ಹೆಸರಿಗೆ ಬೆಂಬಲ ಸೂಚಿಸಲೇಬೇಕು. ಯಾರಾದರೂ ಬೆಂಬಲ ಸೂಚಿಸಲಿದ್ದರೆ ಅವರನ್ನು ದಲಿತ ವಿರೋಧಿ ಎಂದು ಕರೆಯಲಾಗುವುದು" ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಹೇಳಿರುವುದು ವಿರೋಧಿಗಳನ್ನು ಇಬ್ಬಂದಿಗೆ ಸಿಲುಕಿಸಿದೆ.
ಈ ವರ್ಷ 2017ರಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿವೆ. ಮುಂದಿನ ವರ್ಷ 2018ರಲ್ಲಿ ಕರ್ನಾಟಕ, ಛತ್ತೀಸಘಡ, ಮಧ್ಯಪ್ರದೇಶ, ಮೇಘಾಲಯ, ಮಿಜೋರಾಮ್ ನಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ.
ಈಗ ರಾಮ್ ನಾಥ್ ಕೋವಿಂದ್ ಅವರನ್ನು ವಿರೋಧಿಸಿದರೆ ಅಥವಾ ಬೇರೆ ಅಭ್ಯರ್ಥಿಯನ್ನು ಸ್ಪರ್ಧಿಯಾಗಿ ನಿಲ್ಲಿಸಿದರೆ, ದಲಿತರನ್ನು ವಿರೋಧಿಸಿದಂತಾಗುತ್ತದೆ. ಈಗಾಗಲೆ ಟಿಆರ್ಎಸ್, ಡಿಡಿಪಿ ಸೇರಿದಂತೆ ಹಲವಾರು ಪಕ್ಷಗಳು ಬೆಂಬಲ ಸೂಚಿಸಿರುವುದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ.
ಉತ್ತರಪ್ರದೇಶದ ಮಗ ರಾಮ್ ನಾಥ್ ಕೋವಿಂದ್ ಅವರನ್ನು ಎಲ್ಲ ಪಕ್ಷಭೇದ ಮರೆತು ಬೆಂಬಲಿಸಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸರ್ವ ಪಕ್ಷಗಳನ್ನು ಕೋರಿಕೊಂಡಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿಯಾದ ನಂತರ, ವೈಯಕ್ತಿಕವಾಗಿ ನನಗೆ ಇದು ಸಂತೋಷದ ಸಂಗತಿ. ಆದರೆ, ಈಗಲೇ ಏನನ್ನೂ ಹೇಳಲಾರೆ ಎಂದು ಜಾಣತನದಿಂದ ನುಣುಚಿಕೊಂಡಿದ್ದಾರೆ.












Click it and Unblock the Notifications