ಗರ್ಭಿಣಿ ಮತ್ತು ದಿವ್ಯಾಂಗ ಉದ್ಯೋಗಿಗಳಿಗೆ Work From Home: ಇಲ್ಲಿದೆ ಮಾರ್ಗಸೂಚಿ
ನವದೆಹಲಿ, ಜನವರಿ 10: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ ಏರಿಕೆ ಆಗುತ್ತಿರುವ ಹಿನ್ನೆಲೆ ಗರ್ಭಿಣಿ ಹಾಗೂ ದಿವ್ಯಾಂಗ ಚೇತನರು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ತಿಳಿಸಿದ್ದಾರೆ.
"ಕೊರೊನಾವೈರಸ್ ಸಂಖ್ಯೆ ಹೆಚ್ಚಾಗಿರುವ ನಿರ್ಬಂಧಿತ ವಲಯಗಳಲ್ಲಿ ಇರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ, ನಿರ್ಬಂಧಿತ ವಲಯ ಘೋಷಣೆ ರದ್ದಾಗುವವರೆಗೆ ಕಚೇರಿಗಳಿಗೆ ಬರುವುದಕ್ಕೆ ವಿನಾಯಿತಿ ನೀಡಲಾಗಿದೆ. ಇದರ ಜೊತೆ ಗರ್ಭಿಣಿ ಹಾಗೂ ದಿವ್ಯಾಂಗ ಉದ್ಯೋಗಿಗಳು ಕಚೇರಿಗೆ ಹಾಜರಾಗಬೇಕಿಲ್ಲ, ಆದರೆ ಮನೆಯಿಂದಲೇ ಕೆಲಸವನ್ನು ಮಾಡಬೇಕಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಭೌತಿಕ ಹಾಜರಾತಿಯನ್ನು ಮಿತಿಗೊಳಿಸಲಾಗಿದೆ. ಅಧೀನ ಕಾರ್ಯದರ್ಶಿ ಮಟ್ಟದಲ್ಲಿ ವಾಸ್ತವ ಸಾಮರ್ಥ್ಯಕ್ಕಿಂತ ಶೇ.50ರಷ್ಟು ಮಾತ್ರ ಭೌತಿಕವಾಗಿ ಹಾಜರಾಗಬೇಕು, ಮತ್ತು ಉಳಿದ ಶೇ.50ರಷ್ಟು ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಅದಕ್ಕೆ ತಕ್ಕಂತೆ ಎಲ್ಲ ಸಂಬಂಧಿಸಿದ ಇಲಾಖೆಗಳು ರೋಸ್ಟರ್ (ಅವರ್ತನ) ಪಟ್ಟಿಯನ್ನು ಸಿದ್ಧಪಡಿಸಲಿವೆ ಎಂದು ಸಚಿವರು ಹೇಳಿದ್ದಾರೆ.

ದೂರವಾಣಿ ಮೂಲಕ ಲಭ್ಯರಾಗಿರಲು ಸೂಚನೆ:
ಕಚೇರಿಗೆ ಹಾಜರಾಗದ ಅಧಿಕಾರಿ, ಸಿಬ್ಬಂದಿ ಮತ್ತು ಯಾರು ಮನೆಯಿಂದ ಕೆಲಸ ಮಾಡುತ್ತಾರೋ ಅಂತಹ ಸಿಬ್ಬಂದಿ ಎಲ್ಲ ಕಾಲದಲ್ಲೂ ದೂರವಾಣಿ ಮತ್ತು ಇತರ ವಿದ್ಯುನ್ಮಾನ ಸಂಪರ್ಕ ವಿಧಾನಗಳಲ್ಲಿ ಲಭ್ಯವಿರಬೇಕು ಎಂದು ಸಚಿವರು ತಿಳಿಸಿದರು. ಕೊವಿಡ್-19 ಸೋಂಕು ಅತ್ಯಂತ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡಿಒಪಿಟಿ ಸಾಧ್ಯವಾದಷ್ಟು ಅಧಿಕೃತ ಸಭೆಗಳನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕವೇ ನಡೆಸುವಂತೆ ಕಚೇರಿ ಮೆಮೋ (ಒ.ಎಂ) ಹೊರಡಿಸಿದೆ. ಅಂತೆಯೇ ತೀರಾ ಅಗತ್ಯವಿಲ್ಲದಿದ್ದರೆ ಸಂದರ್ಶಕರ ಜತೆಗಿನ ವೈಯಕ್ತಿಕ ಭೇಟಿಗಳನ್ನೂ ಸಹ ತಪ್ಪಿಸುವಂತೆ ಸೂಚಿಸಲಾಗಿದೆ.
ಸರ್ಕಾರಿ ಅಧಿಕಾರಿಗಳಿಗೆ ಶಿಫ್ಟ್:
ಸರ್ಕಾರಿ ಕಚೇರಿಗಳ ಆವರಣದಲ್ಲಿ ಜನ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಕಚೇರಿ ಸಿಬ್ಬಂದಿಗೆ ವಿಭಜಿತ ಅವಧಿಯಲ್ಲಿ ಅಂದರೆ(ಎ) ಬೆಳಗ್ಗೆ 9 ರಿಂದ ಸಂಜೆ 5.30 ಮತ್ತು (ಬಿ) ಬೆಳಗ್ಗೆ 10 ರಿಂದ ಸಂಜೆ 6.30 ಸಮಯವನ್ನು ಪಾಲನೆ ಮಾಡುವಂತೆ ಸಚಿವರು ಸೂಚಿಸಿದ್ದಾರೆ.
ಕೊವಿಡ್-19 ನಿಯಮ ಪಾಲನೆಗೆ ಸೂಚನೆ:
ಈ ಮಧ್ಯೆ ಡಿಒಪಿಟಿ, ಎಲ್ಲಾ ಅಧಿಕಾರಿಗಳು/ಸಿಬ್ಬಂದಿ ಕೊವಿಡ್ ಸೂಕ್ತ ನಡವಳಿಕೆ ಅಂದರೆ ಪದೇಪದೆ ಕೈತೊಳೆಯುವುದು/ಸ್ಯಾನಿಟೈಸೇಶನ್, ಮಾಸ್ಕ್ ಧರಿಸುವುದು, ಮುಖ ರಕ್ಷಾಕವಚ ಧರಿಸುವುದು ಮತ್ತು ಎಲ್ಲಾ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಸೂಕ್ತ ಸ್ವಚ್ಛತೆ ಮತ್ತು ಸ್ಯಾನಿಟೈಸೇಶನ್ ಮಾಡಬೇಕು. ವಿಶೇಷವಾಗಿ ಪದೇಪದೇ ಸ್ಪರ್ಶಿಸುವಂತಹ ಜಾಗಗಳಲ್ಲಿ ಸ್ಯಾನಿಟೈಸೇಷನ್ ಖಾತ್ರಿಪಡಿಸಬೇಕು.
ಜನವರಿ 31ರವರೆಗೆ ಮಾರ್ಗಸೂಚಿ ಜಾರಿ:
ಡಿಒಪಿಟಿ ಬಿಡುಗಡೆ ಮಾಡಿರುವ ಈ ಮಾರ್ಗಸೂಚಿಯ ಕಚೇರಿ ಆದೇಶ 2022ರ ಜನವರಿ 31ರವರೆಗೆ ಜಾರಿಯಲ್ಲಿರುತ್ತದೆ. ಈ ಮಧ್ಯೆ ಕಾಲ ಕಾಲಕ್ಕೆ ಪರಮಾರ್ಶೆ ನಡೆಸಲಾಗುವುದು ಮತ್ತು ಪರಿಸ್ಥಿತಿಯನ್ನು ಆಧರಿಸಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುವುದು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಬಯೋಮೆಟ್ರಿಕ್ ಹಾಜರಾತಿ ರದ್ದು:
ಭಾರತದಲ್ಲಿ ಕೇಂದ್ರ ಸರ್ಕಾರವು ತನ್ನ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅಮಾನತುಗೊಳಿಸಿದೆ. ಸರ್ಕಾರಿ ನೌಕರರ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಕೇಂದ್ರದ ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಎಲ್ಲಾ ಉದ್ಯೋಗಿಗಳು ಹಾಜರಾತಿ ರಿಜಿಸ್ಟರ್ಗಳಲ್ಲಿ ತಮ್ಮ ಹಾಜರಾತಿಯನ್ನು ನಮೂದಿಸಬೇಕು ಎಂದು ಹೇಳಿದೆ. "ಮುಂಜಾಗ್ರತಾ ಕ್ರಮವಾಗಿ, ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಅದರ ಲಗತ್ತಿಸಲಾದ ಅಧೀನ ಕಚೇರಿಗಳು ಸೇರಿದಂತೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಗುರುತಿಸುವುದನ್ನು ಜನವರಿ 31 ರವರೆಗೆ ತಕ್ಷಣದಿಂದಲೇ ಜಾರಿಗೆ ತರಲು ನಿರ್ಧರಿಸಲಾಗಿದೆ.












Click it and Unblock the Notifications