ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ ಸಾಧ್ಯತೆ: ಕರ್ನಾಟಕಕ್ಕೆ ಭಾರಿ ಮಳೆಯ ಆತಂಕ
ಬೆಂಗಳೂರು, ಅಕ್ಟೋಬರ್ 18: ಹವಾಮಾನದಲ್ಲಿ ಬದಲಾವಣೆಗಳು ಉಂಟಾಗಿದ್ದು, ಮುಂದಿನ ಎರಡು ಮೂರು ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಂಭಾವ್ಯ ಚಂಡಮಾರುತ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಹವಾಮಾನತಜ್ಞ ಪ್ರಸಾದ್ ಅವರು, ಬಂಗಾಳಕೊಲ್ಲಿಯ ಆಗ್ನೇಯ ಮತ್ತು ಪಶ್ಚಿಮ ಭಾಗದ ಸಮುದ್ರದಲ್ಲಿ ಈಗಾಗಲೇ ಕೆಲವು ದಿನಗಳಿಂದ ಮೇಲ್ಮೈ ಸುಳಿಗಾಳಿ ತೀವ್ರಗೊಳ್ಳುತ್ತಲೇ ಇದೆ. ಸದ್ಯಕ್ಕೆ ಅದು ಪ್ರಾಥಮಿಕ ಹಂತದಲ್ಲಿದೆ ಎಂದರು.
ಈ ಮೇಲ್ಮೈ ಸುಳಿಗಾಳಿ ಚಂಡಮಾರುತವಾಗಲು ಸಾಕಷ್ಟು ಬದಲಾವಣೆಗಳು ಆಗಬೇಕಿದೆ. ಮೇಲ್ಮೈ ಸುಳಿಗಾಳಿಯು ಹೆಚ್ಚಿನ ವೇಗ ಪಡೆದುಕೊಂಡು ಬಲಗೊಳ್ಳಬೇಕು, ನಂತರ ಅದು ವಾಯುಭಾರ ಕುಸಿತವಾಗಿ ರೂಪಗೊಳ್ಳಲುತ್ತದೆ. ಆ ವಾಯುಭಾರ ಕುಸಿತದಿಂದ ಗಾಳಿಯ ಒತ್ತಡ ಒಂದೆಡೆ ಅತ್ಯಧಿಕ ಪ್ರಮಾಣದಲ್ಲಿ ಉಲ್ಬಣಗೊಳ್ಳಬೇಕು. ಇಷ್ಟು ಹಂತಗಳನ್ನು ದಾಟಿ ಮೇಲೆ ಈ ಗಾಳಿ ಚಂಡಮಾರುತವಾಗಿ ಬದಲಾಗುತ್ತದೆ. ಇಷ್ಟು ಹಂತ ದಾಟಲು ಸುಮಾರು ಎರಡರಿಂದ ಮೂರು ದಿನ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.

ದುರ್ಬಲಗೊಳ್ಳುವ ಲಕ್ಷಣ ಇಲ್ಲ!
ಒಂದು ವೇಳೆ ಸಮುದ್ರದ ಮೇಲ್ಮೈ ಸುಳಿಗಾಳಿ ಬಲಗೊಳ್ಳದೇ ವಾಯುಭಾರ ಕುಸಿತದ ಹಂತದಲ್ಲೇ ಇದ್ದು, ಬೇರೆ ಪ್ರದೇಶಗಳತ್ತ ಸಾಗಿದರೆ ನಿರೀಕ್ಷಿತ ಚಂಡಮಾರುತ ಪ್ರಭಾವ ಉಂಟಾಗುವುದಿಲ್ಲ. ಆದರೆ ಸದ್ಯದ ಮುನ್ಸೂಚನೆ ನೋಡಿದರೆ ಸಮುದ್ರಮಟ್ಟದಲ್ಲಿ ಎದ್ದ ಸುಳಿಗಾಳಿ ದುರ್ಬಲಗೊಳ್ಳುವ ಯಾವ ಲಕ್ಷಣಗಳು ಇಲ್ಲ. ಅದರ ತೀವ್ರತೆ ಹೆಚ್ಚುತ್ತಲೇ ಇದೆ. ಈ ಕಾರಣದಿಂದಲೇ ಚಂಡಮಾರುತದ ನಿರೀಕ್ಷೆಯ ಮುನ್ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಬಂಗಾಳಕೊಲ್ಲಿಯ ಸಮುದ್ರದ ಜೊತೆಗೆ ಅರಬ್ಬಿ ಸಮುದ್ರದಲ್ಲೂ ಸಣ್ಣ ಪ್ರಮಾಣದಲ್ಲಿ ಒಂದು ಸುಳಿಗಾಳಿ ನಿರ್ಮಾಣವಾಗಿದೆ. ಈ ಎಲ್ಲ ಹವಾಮಾನ ವೈಪರೀತ್ಯಗಳ ಕಾರಣದಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯ ಹಲವು ಭಾಗದ ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಬೀಳುತ್ತಿದೆ.
ಎರಡು ದಿನ ರಾಜ್ಯಕ್ಕೆ ಹಗುರ ಮಳೆ ನಿರೀಕ್ಷೆ
ಕರ್ನಾಟಕದಲ್ಲಿ ಮಳೆ ಅಬ್ಬರ ತುಸು ಕಡಿಮೆ ಆಗಿದ್ದು, ಮುಂದಿನ ಎರಡು ದಿನ ರಾಜ್ಯಾದ್ಯಂತ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಎರಡು ದಿನದ ನಂತರ ಅಕ್ಟೋಬರ್ 21ರಂದು ದಕ್ಷಿಣ ಒಳನಾಡಿನಲ್ಲಿ ಮಾತ್ರವೇ ಸಾಧಾರಣದಿಂದ ವ್ಯಾಪಕವಾಗಿ ಮಳೆ ಆಗಲಿದೆ. ಹೀಗಾಗಿ ಅಂದು ಚಾಮರಾಜ ನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಶಿವಮೊಗ್ಗಕ್ಕೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications