ಆಂಧ್ರದಲ್ಲಿ ಪತ್ನಿಗೆ ವಿದ್ಯುತ್ ಹರಿಸಿ ಕೊಲ್ಲಲೆತ್ನಿಸಿದ ಟೆಕ್ಕಿ!
ಪೆನಮಾಲುರು(ಆಂಧ್ರಪ್ರದೇಶ), ಫೆಬ್ರವರಿ 05: ದೇಹಕ್ಕೆ ವಿದ್ಯುತ್ ಹರಿಸುವ ಮೂಲಕ ಪತ್ನಿಯನ್ನು ಕೊಲ್ಲಲು ಪ್ರಯತ್ನಿಸಿದ ಆಂಧ್ರಪ್ರದೇಶದ ಸಾಫ್ಟ್ ವೇರ್ ಉದ್ಯೋಗಿಯೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಕೃಷ್ಣ ಜಿಲ್ಲೆಯ ಪೆನಮಾಲುರು ಎಂಬಲ್ಲಿ ನಡೆದಿದೆ.
ಎಸ್ ರಾಜರತ್ನಂ ಎಂಬ ಟೆಕ್ಕಿ 28 ವರ್ಷದ ತನ್ನ ಪತ್ನಿ ಪ್ರಶಾಂತಿ ಅವರು ಮಲಗಿದ್ದ ಸಮಯದಲ್ಲಿ ಅವರಿಗೆ ವಿದ್ಯುತ್ ಶಾಕ್ ನೀಡಿ ಸಾಯಿಸಲು ಪ್ರಯತ್ನಿಸಿದ್ದಾರೆ. ಇತ್ತೀಚೆಗೆ ಈಕೆ ಹೆಣ್ಣು ಮಗುವನ್ನು ಹೆತ್ತಿದ್ದೇ ಈ ಕೃತ್ಯಕ್ಕೆ ಕಾರಣ ಎಂಬುದು ಆಕೆ ನಂತರ ನೀಡಿದ ದೂರಿನಲ್ಲಿ ದಾಖಲಾಗಿದೆ.
ಹೈದರಾಬಾದ್ ನಲ್ಲಿ ತ್ರಿವಳಿ ಕೊಲೆ: ಪತಿಯಿಂದಲೇ ಪತ್ನಿ, ಮಕ್ಕಳ ಹತ್ಯೆ!
ಹೆಣ್ಣು ಮಗು ಜನಿಸಿದಾಗಿನಿಂದಲೂ ಈತ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಆಕೆ ಮಲಗಿದ್ದ ಸಮಯದಲ್ಲಿ ಆಕೆಯ ಕೈಗೆ ವೈರ್ ಕಟ್ಟಿ ಶಾಕ್ ನೀಡಲು ಯತ್ನಿಸಿದ್ದು. ತಕ್ಷಣವೇ ಪತ್ನಿಗೆ ಎಚ್ಚರವಾಗಿ, ಪತಿ ತನ್ನನ್ನು ಕೊಲ್ಲಲು ಯತ್ನಿಸುತ್ತಿರುವುದು ತಿಳಿದು ಆಕೆ ಮಕ್ಕಳೊಂದಿಗೆ ಮನೆಯಿಂದ ಆಚೆ ಬಂದಿದ್ದಾರೆ.
ಆಕೆಯ ಕತ್ತು ಮತ್ತು ಮುಖದ ಮೇಲೆ ಗಾಯದ ಕಲೆಗಳಿದ್ದು, ಪತಿ ಆಕೆಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದ ಎಂಬುದು ಸಾಬೀತಾಗಿದೆ. ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಹೆಣ್ಣು ಶಿಶುಗಳನ್ನು ರಕ್ಷಿಸುವುದಕ್ಕಾಗಿ ಭಾರತದ ಸರ್ಕಾರ ಬೇಟಿ ಬಚಾವೋ, ಬೇಟಿ ಪಢಾವೋದಂಥ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ, ಸುಶಿಕ್ಷಿತ ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಇಂಥ ನೀಚ ಕೃತ್ಯದಲ್ಲಿ ತೊಡಗಿರುವುದು ದುರಂತ ಎನ್ನಿಸಿದೆ.