ವಿಶ್ವದ ಪ್ರಾಚೀನ 'ಕ್ಷೇತ್ರ'ಕ್ಕೆ ಹೊರಟ ಸಂಸದ ಮೋದಿ
ವಾರಣಾಸಿ, ನ.6: ವಿಶ್ವದ ಪ್ರಾಚೀನ, ಪವಿತ್ರ ನಗರವಾಗಿರುವ ವಾರಣಾಸಿ ಶುಕ್ರವಾರ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲು ಸಿದ್ಧತೆ ಭರದಿಂದ ಸಾಗಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಮೋದಿ ಕಾಲಿರಿಸುತ್ತಿದ್ದಾರೆ. ಮೋದಿ ಅವರ ಭೇಟಿ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ತಳಿರು-ತೋರಣಗಳಿಂದ ಸಿಂಗಾರಗೊಂಡಿರುವ ವಾರಣಾಸಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಖುದ್ದು ಆಗಮಿಸಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ.[ಗಂಗಾ ನದಿ ಶುದ್ಧೀಕರಣ: ಗತವೈಭವ ಮರಳುವುದೆ?]
ಅಖಿಲೇಶ್ ಯಾದವ್ ಅವರಿಗೆ ಕೇಂದ್ರ ಜವಳಿ ಸಚಿವ ಸಂತೋಷ್ ಗಂಗ್ವಾರ್, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಓಪಿ ಛೌಬೆ ಅವರು ಸಾಥ್ ನೀಡಲಿದ್ದಾರೆ. ಮೋದಿಯವರೊಂದಿಗೆ ಐದರಿಂದ ಆರು ಮಂದಿ ಕೇಂದ್ರ ಸಚಿವರು ಆಗಮಿಸುವ ನಿರೀಕ್ಷೆಯಿದೆ. [ವಾರಣಾಸಿಯಲ್ಲಿ ಸತ್ತರೆ ಮುಕ್ತಿ ಸಿಗುವುದಂತೆ!]
ಬಿಗಿ ಭದ್ರತಾ ವ್ಯವಸ್ಥೆ: ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸುಮಾರು 12 ಎಸ್ಪಿ ಅಧಿಕಾರಿಗಳು, 18 ಹೆಚ್ಚುವರಿ ಎಸ್ ಪಿ, 20 ಡಿವೈಎಸ್ಪಿ , 135 ಸಬ್ ಇನ್ಸ್ ಪೆಕ್ಟರ್ ಗಳು, ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಹಾಗೂ ಇತರೆ ಶ್ರೇಣಿಯ ಭದ್ರತಾ ಪಡೆಗಳನ್ನು ಒದಗಿಸಲಾಗಿದೆ ಎಂದು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಐಜಿ ಎ.ಸತೀಶ್ ಗಣೇಶ್ ತಿಳಿಸಿದ್ದಾರೆ.

ವಾರಣಾಸಿಯಲ್ಲಿ ನೇಕಾರರಿಗಾಗಿ ಮಾರುಕಟ್ಟೆ ಕೇಂದ್ರ ಸ್ಥಾಪನೆ ಮಾಡಲು ಶಂಕು ಸ್ಥಾಪನೆ ನಡೆಸಲಿರುವ ಮೋದಿ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಯಾವ ಗ್ರಾಮ ದತ್ತು ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.ಈ ಯೋಜನೆಯಡಿ ಗ್ರಾಮವನ್ನು ದತ್ತು ತೆಗೆದುಕೊಂಡು ಕುಡಿಯುವ ನೀರು, ವಿದ್ಯುತ್ ದೀಪ, ಒಳಚರಂಡಿ, ಶೌಚಾಲಯ, ಸಮುದಾಯ ಭವನ, ಶಾಲಾ ಕಟ್ಟಡಗಳು ಸೇರಿದಂತೆ ವಿವಿಧ ರೀತಿಯ ಸೌಲಭ್ಯ ಒದಗಿಬರಲಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಿದ್ದ ನರೇಂದ್ರಮೋದಿ ಸುಮಾರು 3,70,000 ಅಧಿಕ ಮತಗಳಿಂದ ಗೆದ್ದಿದ್ದರು. ಕಳೆದ ಜೂನ್ ನಲ್ಲಿ ನಡೆಸಿದ್ದ ಕೇಂದ್ರ ಬಜೆಟ್ನಲ್ಲಿ ವಾರಣಾಸಿ ನಗರಕ್ಕೆ ವಿಶೇಷ ಅನುದಾನ ನೀಡುವ ವಾಗ್ದಾನ ಮಾಡಿದ್ದರು. ಗಂಗಾ ನದಿ ಸ್ವಚ್ಛತೆಗಾಗಿ ಪ್ರತ್ಯೇಕ ಖಾತೆಯನ್ನು ಸೃಷ್ಟಿಸಿ ಉಮಾಭಾರತಿ ಅವರಿಗೆ ಜವಾಬ್ದಾರಿಯನ್ನು ನೀಡಿದ್ದರು. (ಪಿಟಿಐ)












Click it and Unblock the Notifications